ಸಾವರ್ಕರ್‌ ವಿವಾದ ಪ್ರತಿಪಕ್ಷಗಳ ಸಣ್ಣತನ: ಡಾ.ಅಶ್ವತ್ಥನಾರಾಯಣ

ಬೆಂಗಳೂರು : ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ನಾಮಕರಣ ಮಾಡುವ ಸಂಬಂಧ ಪ್ರತಿಪಕ್ಷಗಳ ವಿರೋಧ ಅವರ ಸಣ್ಣತನಕ್ಕೆ ಸಾಕ್ಷಿಯಾಗಿದೆ. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಮಹಾನ್ ವ್ಯಕ್ತಿ ಬಗ್ಗೆ ಈ ರೀತಿ ಅಗೌರವ ಸೂಚಿಸುವುದು ಸರಿ ಅಲ್ಲ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಕಿಡಿ ಕಾರಿದ್ದಾರೆ.

ಕೆ-ಸೆಟ್ ತರಬೇತಿ ಕಾರ್ಯಕ್ರಮಕ್ಕೆ ಆನ್‌ಲೈನ್‌ ಮೂಲಕ ಗುರುವಾರ ನಡೆದ ಸಮಾರೋಪದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

“ಸಾವರ್ಕರ್ ಬಗ್ಗೆ ಪ್ರತಿಪಕ್ಷಗಳು ಹಲವಾರು ಬಾರಿ ಕ್ಷುಲ್ಲಕ ಆರೋಪ ಮಾಡಿ, ಅವರ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡಿವೆ. ರಾಜ್ಯಕ್ಕೆ ಸೇರದ ವ್ಯಕ್ತಿಯ ಹೆಸರನ್ನು ಮೇಲ್ಸೇತುವೆಗೆ ನಾಮಕರಣ ಮಾಡಬಾರದು ಎಂಬ ಹೇಳಿಕೆ ಒಪ್ಪಲಾಗದು. ರಾಜ್ಯಕ್ಕೆ ಸೇರದ ಅನೇಕರ ಹೆಸರನ್ನು ಪ್ರತಿಪಕ್ಷಗಳು ಧಾರಾಳವಾಗಿ ಬಳಸಿಕೊಂಡಿವೆ. ಆದರೆ, ಸ್ವಾತಂತ್ರ್ಯ ಸೇನಾನಿ ಸಾವರ್ಕರ್‌ ಹೆಸರಿನ ಬಗ್ಗೆ ಮಾತ್ರ ಆಕ್ಷೇಪ ತೆಗೆಯುವುದನ್ನು ಖಂಡಿಸುತ್ತೇನೆ,”ಎಂದರು.

“ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟಿಷರಿಂದ ಮಾನಸಿಕ ಹಾಗೂ ದೈಹಿಕ ಹಿಂಸೆಗೆ ಒಳಪಟ್ಟಿದ್ದ ಅಪ್ರತಿಮ ದೇಶ ಭಕ್ತನ ಹೆಸರನ್ನು ನಗರದ ಮೇಲ್ಸೇತುವೆಗೆ ಇಡಲು ವಿರೋಧ ವ್ಯಕ್ತಪಡಿಸುವ ಮೂಲಕ ಪ್ರತಿಪಕ್ಷಗಳು ಜನರ ಭಾವನೆಯನ್ನು ಘಾಸಿಗೊಳಿಸಿವೆ,”ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಸಮಾರಂಭಕ್ಕೆ ಸದ್ಯ ಹೆಚ್ಚು ಜನ ಸೇರುವಂತಿಲ್ಲ ಎಂಬ ಕಾರಣಕ್ಕೆ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮ ಮುಂದೂಡಲಾಗಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಬಗ್ಗೆ ಯಾವುದೇ ಅನುಮಾನ ಬೇಡ,” ಎಂದು ಅವರು ಹೇಳಿದರು.

Related Articles

Comments (0)

Leave a Comment