2 ಸಾವಿರ ಕೋಟಿ ರೂಪಾಯಿ ನೆರವಿಗೆ ಕೇಂದ್ರಕ್ಕೆ ಮನವಿ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಕೊಡಗಿನಲ್ಲಿ ನೆರೆಯಿಂದ ಉಂಟಾದ ಹಾನಿ ಸರಿದೂಗಿಸಲು ಕೇಂದ್ರಕ್ಕೆ ಪ್ರಥಮ ಹಂತದಲ್ಲಿ 2 ಸಾವಿರ ಕೋಟಿ ರು. ಹಣಕಾಸಿನ ನೆರವು ನೀಡಬೇಕೆಂದು ಮನವಿ‌ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಕೇರಳ ನೆರೆ ಸಂತ್ರಸ್ತರಿಗಾಗಿ ಸಿದ್ದಾರ್ಥ ಶಿಕ್ಷಣ ಸಂಸ್ಥೆ ವತಿಯಿಂದ ಅಗತ್ಯ ಪರಿಕರಗಳನ್ನೊತ್ತ ೯ ಟ್ರಕ್‌ಗಳಿಗೆ
ಸದಾಶಿವ ನಗರದ ಬಿಡಿಎ ಕ್ವಾಟ್ರಸ್‌‌ನಲ್ಲಿ ಶನಿವಾರ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಪತ್ನಿ ಕನ್ನಿಕ ಪರಮೇಶ್ವರ್ ಚಾಲನೆ ನೀಡಿ, ಕಳುಹಿಸಿ ಕೊಟ್ಟರು.

ಬಳಿಕ ಮಾತನಾಡಿದ ಡಾ.ಜಿ. ಪರಮೇಶ್ವರ್ ಅವರು, ಕೇಂದ್ರ ಸರಕಾರ ಕೊಡಗನ್ನು ನಿರ್ಲಕ್ಷಿಸಿದೆ. ಎನ್‌ಡಿಆರ್‌ಎಫ್ ಸಿಬ್ಬಂದಿ ಕಳುಹಿಸಿ ಕೊಟ್ಟಿದ್ದು ಬಿಟ್ಟರೆ ಕೇಂದ್ರದಿಂದ ನಯಾಪೈಸಿನ ಸಹಾಯವಾಗಿಲ್ಲ.
ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರು ಕೊಡಗು ನೆರೆ ಹಾವಳಿ ವೀಕ್ಷಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಕೂಗಾಡಿರುವುದು ಸರಿಯಲ್ಲ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು.
ನಿರ್ಮಲಾ ಸೀತಾರಾಮ್ ಅವರು ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾದವರು. ಅವರೇ ಮುಂದಾಳತ್ವ ವಹಿಸಿ, ಸಂಸದರ ನಿಯೋಗದೊಂದಿಗೆ ಪ್ರಧಾನಿ ಅವರ ಬಳಿ ಪರಿಹಾರ ನೀಡುವಂತೆ ಮನವಿ‌ ಮಾಡಬೇಕಿತ್ತು. ಆದರೆ, ಅವರು ತಡವಾಗಿ ಬಂದಿದ್ದಲ್ಲದೇ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರ ಅವರ ಮೇಲೇ‌ ಕೂಗಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ನಷ್ಟದ ಅಂದಾಜು ಮುನ್ನವೇ ಹಣ ಬಿಡುಗಡೆ ಮಾಡಿದಂತೇ ನಮಗೂ ಮಾಡಬೇಕಿತ್ತು. ಆದರೆ, ಅವರು ನಿರಾಸಕ್ತಿ ತೋರಿದ್ದಾರೆ. ಕೊಡಗಿನ ನಷ್ಟ ಭರಿಸಲು ಸದ್ಯ ೨ ಸಾವಿರ ಕೋಟಿ ರು. ಹಣಕಾಸಿನ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ವಿವರಿಸಿದರು.

ಕೇರಳ ರಾಜ್ಯ ಸಂಪರ್ಣ ಮಳೆಯಿಂದ ತೋಯ್ದಿದೆ. ಇಡೀ ರಾಜ್ಯವನ್ನೇ ಮರು ನಿರ್ಮಾಣ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಕೇರಳ ಪರಿಸ್ಥಿತಿಗೆ ಇಡೀ ದೇಶವೇ ಮರುಗಿ, ನೆರವಿನ ಹೊಳೆ ಹರಿಯುತ್ತಿದೆ. ಜನಸಾಮಾನ್ಯರು ಕೈಲಾದ ಸಹಾಯ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಹಾಗೂ ಕರ್ನಾಟಕ ಸರಕಾರ ಸೇರಿದಂತೆ ಎಲ್ಲ ರಾಜ್ಯಗಳು ಸಹಾಯ ಹಸ್ತ ಚಾಚಿವೆ. ಬಿಬಿಎಂಪಿಯಿಂದಲೂ ಒಂದು ಕೋಟಿ‌ ರು. ನೀಡಿದ್ದೇವೆ ಎಂದರು.

ಸಿದ್ಧಾರ್ಥ ಶಿಕ್ಷಣ ಸಂಸ್ಥೆ ವತಿಯಿಂದ ಕೇರಳಾಗೆ ಒಟ್ಟು ೯ ಟ್ರಕ್‌ಗಳಲ್ಲಿ ಅಗತ್ಯ ಪರಿಕರಗಳನ್ನು ಕಳುಹಿಸಿಕೊಡಲಾಗುತ್ತಿದೆ.
ಕೊಡಗು ನೆರೆ ನಿರಾಶ್ರಿತರಿಗೆ ಕಳೆದ ವಾರ ನಾಲ್ಕು ಟ್ರಕ್‌ಗಳಲ್ಲಿ ಪರಿಕರ ಸಾಮಾಗ್ರಿ ಕಳುಹಿಸಿಕೊಟ್ಟಿದ್ದೆವು. ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ ಹಾಗೂ ಬಿಎಂಆರ್‌ಡಿಎಯಿಂದ ತಲಾ ಒಂದು ಕೋಟಿ ರು. ಪರಿಹಾರ, ಜೊತೆಗೆ ಪೊಲೀಸ್ ಸಿಬ್ಬಂದಿಯ ಒಂದು ದಿನ ಸಂಬಳದ 5.82 ಕೋಟಿ ರು. ಹಣವನ್ನು ಕೊಡುಗು‌ ನೆರೆ ನಿರಾಶ್ರಿತರಿಗೆ ನೀಡಿದ್ದೇವೆ ಎಂದರು.

Related Articles

Comments (0)

Leave a Comment