ಕೌಶಲ ಉತ್ಕೃಷ್ಟತಾ ಸಂಸ್ಥೆಯಾಗಿ ಶಿವಾರಗುಡ್ಡ ವಿದ್ಯಾಪೀಠದ ಪುನರುಜ್ಜೀವನ: ಡಾ. ಅಶ್ವತ್ಥನಾರಾಯಣ

ಮಂಡ್ಯ: ಮದ್ದೂರು ತಾಲೂಕಿನ ಶಿವಾರಗುಡ್ಡದ ಅತಿ ಹಳೆಯ ಕೌಶಲ ತರಬೇತಿ ಕೇಂದ್ರವನ್ನು ಶಿಕ್ಷಣ ಮತ್ತು ಕೌಶಲದ ಉತ್ಕೃಷ್ಟತಾ ಸಂಸ್ಥೆಯಾಗಿ ಪುನರುಜ್ಜೀವನಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ಶಿವಾರಗುಡ್ಡಕ್ಕೆ ಶುಕ್ರವಾರ ಭೇಟಿ‌ ನೀಡಿ ಕೌಶಲ್ಯಾಬಿವೃದ್ಧಿ ಇಲಾಖೆಯ 48 ಎಕರೆ ಜಾಗವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

“ಶಿವಾರಗುಡ್ಡದಲ್ಲಿ 1912ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರು ಶಿಕ್ಷಣ ಮತ್ತು ಕೌಶಲಕ್ಕೆ ಒತ್ತು ನೀಡುವ ಸಂಸ್ಥೆ ಸ್ಥಾಪಿಸಿದ್ದರು. ಡೆನ್ಮಾರ್ಕ್ ಪ್ರಧಾನಿ ಕೂಡ ಈ ಸ್ಥಳಕ್ಕೆ ಭೇಟಿ ‌ನೀಡಿ ಇಲ್ಲಿನ ಕೌಶಲ ತರಬೇತಿಯನ್ನು ನೋಡಿದ್ದರು. ಕೇಂದ್ರದಲ್ಲಿ ಕೃಷಿ, ಹೈನುಗಾರಿಕೆ, ಹೊಲಿಗೆ ಮುಂತಾದ ಕೌಶಲ ತರಬೇತಿ ನೀಡಲಾಗುತ್ತಿತ್ತು. ಔದ್ಯೋಗಿಕ ತರಬೇತಿ ಕೇಂದ್ರದ ಹಳೆಯ ಕಟ್ಟಡ ಈಗ ಶಿಥಿಲಾವಸ್ಥೆಗೆ ತಲುಪಿದ್ದು, ಈಗ ಇಲ್ಲಿ ಉತ್ಕೃಷ್ಟ ಕೌಶಲ ತರಬೇತಿ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶವಿದೆ. ಯೋಜನೆಯ ಸಮಗ್ರ ವರದಿ ಪಡೆದು ಕೌಶಲ ಕೇಂದ್ರವನ್ನು ಅಭಿವೃದ್ಧಿ ಪಡಿಸಲಾಗುವುದು,”ಎಂದು ವಿವರಿಸಿದರು.

“ಈ ಜಾಗದಲ್ಲಿ ಉತ್ಕೃಷ್ಟ ಕೌಶಲ ತರಬೇತಿ ಸಂಸ್ಥೆ ಸ್ಥಾಪನೆಗೆ ಯೋಜನೆ ರೂಪಿಸಲು ಸೂಚಿಸಲಾಗಿದೆ. ಕಾರ್ಪೊರೆಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಅಥವಾ ಸರ್ಕಾರದ ಹಣದಲ್ಲಿ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು. ಜಗತ್ತಿಗೆ ಮಾದರಿಯಾಗುವಂಥ ಕೌಶಲ ಉತ್ಕೃಷ್ಟತಾ ಸಂಸ್ಥೆ ರೂಪಿಸುವುದು ರಾಜ್ಯ ಸರ್ಕಾರದ ಉದ್ದೇಶ,”ಎಂದು ಅವರು ತಿಳಿಸಿದರು.

“ಸರ್ ಎಂ. ವಿಶ್ವೇಶ್ವರಯ್ಯ ಕನಸಿನ ಕೂಸನ್ನು ಪುನರುಜ್ಜೀವನಗೊಳಿಸುವ ಮೂಲಕ ಹಳೆ ಮೈಸೂರು ಭಾಗದ ಯುವಜನರಿಗೆ ವೃತ್ತಿಪರ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಅರ್ಧಕ್ಕೆ ಓದು ನಿಲ್ಲಿಸಿದವರು ಸಹ ವೃತ್ತಿಪರ ತರಬೇತಿ ಪಡೆದು ಜೀವನ ರೂಪಿಸಿಕೊಳ್ಳುವಂತಾಗಬೇಕು. ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರ ಅಗತ್ಯ ಕ್ರಮವಹಿಸಲಿದೆ,”ಎಂದರು.

ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ಹಾಗೂ ಕೌಶಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Comments (0)

Leave a Comment