ನಿವೃತ್ತ ಸಿಎಸ್ ರತ್ನಪ್ರಭ ಅವರ `ಕ್ರಾನಿಕಲ್ಸ್ ಆಫ್ ಆ್ಯನ್ ಎಸಿ ಸಾಬ್’ ಬಿಡುಗಡೆ
- by Suddi Team
- July 7, 2018
- 39 Views
ಬೆಂಗಳೂರು: ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ ಅವರು ತಮ್ಮ ಸುದೀರ್ಘ ಸೇವೆ ಕುರಿತು ಹಂಚಿಕೊಳ್ಳಲೆಂದು ಬಯಸಿ `ಕ್ರಾನಿಕಲ್ಸ್ ಆಫ್ ಆ್ಯನ್ ಎಸಿ ಸಾಬ್’ ಎಂಬ ಅನುಭವ ಕಥನ ರಚಿಸಿದ್ದು, ಇದನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ರಾಜ್ಯ ಸರ್ಕಾರದ ಐಎಎಸ್ ಮತ್ತು ಐಪಿಎಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಪೈಕಿ ನಾನು ಕಂಡ ಅತ್ಯಂತ ಸರಳ ಮತ್ತು ಸಜ್ಜನಿಕೆಯ ಅಧಿಕಾರಿ ಎಂದರೆ ರತ್ನಪ್ರಭ. ಅವರು, ಪ್ರತಿಯೊಂದು ವಿಚಾರದಲ್ಲೂ ಸರಳತೆಯನ್ನು ಮೆರೆಯುವ ವ್ಯಕ್ತಿ ತಮ್ಮ ವೃತ್ತಿ ಜೀವನಕ್ಕೆ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡು ರಾಜ್ಯದ ಅಭಿವೃದ್ಧಿಗೆ ತಮ್ಮದೇ ಸೇವೆಯನ್ನು ಸಲ್ಲಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಬೀದರ್ನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ರತ್ನಪ್ರಭ ಅವರು, ಆರಂಭದ ದಿನಗಳಲ್ಲಿ ತಮ್ಮನ್ನು ಕಾಣಲು ಬರುವ ಜನರನ್ನು ಭೇಟಿ ಮಾಡಲು ಹಿಂಜರಿಯುತ್ತಿದ್ದರು. ಇದಕ್ಕೆ ಕಾರಣ ಅವರಲ್ಲಿದ್ದ ನಾಚಿಕೆ ಸ್ವಭಾವ. ಆ ಸಂದರ್ಭದಲ್ಲಿ ಜನರು ಬಂದಾಗ ರತ್ನಪ್ರಭ ಅವರು ಅಡುಗೆ ಕೋಣೆಯಲ್ಲಿ ಅವಿತು ಜನರೊಂದಿಗೆ ಮಾತನಾಡಲು ತಮ್ಮ ತಾಯಿಯನ್ನು ಕಳುಹಿಸುತ್ತಿದ್ದರು. ಅಷ್ಟರ ಮಟ್ಟಿಗೆ ನಾಚಿಕೆ ಮತ್ತು ಸಂಕೋಚ ಹೊಂದಿದ ಸ್ವಭಾವದವರಾಗಿದ್ದರು. ಈ ವಿಚಾರವನ್ನು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ ಎಂದರು.
ಕೃತಿಯನ್ನು ಕುರಿತು ಮಾತನಾಡಿದ ರತ್ನಪ್ರಭ, ನನಗೆ ಈ ಕೃತಿ ಬರೆಯುವ ಬಗ್ಗೆ ಆಲೋಚನೆಯನ್ನೇ ಮಾಡಿರಲಿಲ್ಲ. ನನ್ನ ಅನುಭವವನ್ನು ಬರೆದಿಟ್ಟುಕೊಳ್ಳುತ್ತಿದ್ದೆ. ಹೀಗೆ ಬರೆದಿಟ್ಟುಕೊಳ್ಳುವಾಗ ಒಂದು ದಿನ ಈ ಬಗ್ಗೆ ಪುಸ್ತಕ ಬರೆದರೆ ಹೇಗೆ ಎಂದು ಆಲೋಚನೆ ಮಾಡಿದೆ. ಇದಕ್ಕೆ ನನ್ನ ಮಗಳೂ ಸಹ ಪುಸ್ತಕ ಬರೆಯುವಂತೆ ಸಲಹೆ ನೀಡಿದಳು. ಇದರ ಪರಿಣಾಮವೇ ನನ್ನ ಅನುಭವದ ಮಾತುಗಳನ್ನು ಅಕ್ಷರ ರೂಪಕ್ಕೆ ತಂದಿದ್ದೇನೆ ಎಂದು ತಿಳಿಸಿದರು.
Related Articles
Thank you for your comment. It is awaiting moderation.
Comments (0)