ಸಾಲದ ಕಾವೇರಿ, ಜೋಗದಿಂದ ಬೆಂಗಳೂರಿಗೆ ಬರುತ್ತೆ ಕುಡಿಯುವ ನೀರು: ಭಗೀರಥ ಪ್ರಯತ್ನದ ಸುಳಿವು ನೀಡಿದ ಪರಂ

ಬೆಂಗಳೂರು: ರಾಜಧಾನಿಯ ಕುಡಿಯುವ ನೀರಿನ ದಾಹ ತಣಿಸಲು ಕಾವೇರಿಯಿಂದ ಅಸಾಧ್ಯವೆನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಹಾಗೂ ಎತ್ತಿನಹೊಳೆ ನೀರನ್ನು ರಾಜಧಾನಿಗೆ ಪೂರೈಸಲು ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಾ.ಜಿ ಪರಮೇಶ್ವರ್ ಹೇಳಿದರು.

ಮುಂದಿನ ಐದು ದಿನಗಳ ಕಾಲ ಹೆಚ್ಚು ಮಳೆ ಸುರಿಯುವ ಮುನ್ಸೂಚನೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ವಿಧಾನಸೌಧದಲ್ಲಿ ಇಂದು ಬೆಂಗಳೂರು ಶಾಸಕರು,ಸಂಸದರ ಸಭೆ ನಡೆಯಿತು. ಡಿಸಿಎಂ ಪರಮೇಶ್ವರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಪ್ರಸ್ತಾಪಿಸಿದರು. ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಸ್ವಚ್ಛಗೊಳಿಸ ಬೇಕು ಎಂದು ಅಧಿಕಾರಿಗಳ ಗಮನ ಸೆಳೆದರು.

ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಮೇಶ್ವರ್, ಬೆಂಗಳೂರಿನ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು ಚರ್ಚೆ ನಡೆಸಿದ್ದೇವೆ. ಅಂತರ್ಜಲ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನೀರಿಗಾಗಿ ಪರ್ಯಾಯ ವ್ಯವಸ್ಥೆ ಮಾಡಲು ಚಿಂತನೆ ಮಾಡುತ್ತಿದ್ದೇವೆ. ಕಾವೇರಿ 5ನೇ ಹಂತದ ಯೋಜನೆ ಮಾಡಬೇಕು ಕಾವೇರಿ ನೀರಿನ ಲಭ್ಯತೆ ಆಧಾರದಲ್ಲಿ 5ನೇ ಹಂತವೇ ಕೊನೆಯ ಯೋಜನೆಯಾಗಲಿದೆ. ಆದ್ದರಿಂದ ಲಿಂಗನಮಕ್ಕಿ ಜಲಾಶಯ ಹಾಗು ಎತ್ತಿನಹೊಳೆ ಯೋಜನೆಯಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಬಗ್ಗೆ ಚಿಂತನೆ ಇದೆ. ಬೋರ್ ವೆಲ್ ತೆಗೆಯುವುದನ್ನು ನಿರ್ಬಂಧ ಮಾಡುತ್ತೇವೆ ಮನೆ ನಿರ್ಮಾಣ ಪರವಾನಿಗೆ ನೀಡಲು ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿ ಅಂತರ್ಜಲ ವೃದ್ಧಿಗೆ ಕ್ರಮ ವಹಿಸುತ್ತೇವೆ ಎಂದರು.

ಬೆಂಗಳೂರು ಕೆರೆಗಳು ಸಂಪೂರ್ಣ ಕಲುಷಿತ ಆಗಿವೆ ಕೆಲ ಕೆರೆಗಳು ಸರಿಪಡಿಸಲು ಆಗದ ಸ್ಥಿತಿಗೆ ತಲುಪಿವೆ
ಕೆರೆಗಳ ಮಾಲಿನ್ಯ ತಡೆದು ಅಭಿವೃದ್ಧಿ ಮಾಡಲು ಸಮರೋಪಾದಿಯಲ್ಲಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

Related Articles

Comments (0)

Leave a Comment