ಸಕ್ರಿಯ ರಾಜಕಾರಣದಿಂದ ದೂರವಾಗಲ್ಲ, ರಾಜ್ಯಪಾಲರ ಹುದ್ದೆ ಬೇಡ: ಬಿಎಸ್ವೈ

ಬೆಂಗಳೂರು: ಸಕ್ರಿಯ ರಾಜಕಾರಣದಿಂದ ದೂರವಾಗುವ ಮಾತೇ ಇಲ್ಲ. ರಾಜ್ಯಪಾಲರ ಹುದ್ದೆಯ ಅಗತ್ಯ ನನಗೆ ಇಲ್ಲ. ಇದನ್ನು ಹೈಕಮಾಂಡ್ ನಾಯಕರಿಗೂ ಸ್ಪಷ್ಟಪಡಿಸಿದ್ದೇನೆ. ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಹಂಗಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಳಿಕ ರಾಜಭವನದ ಬಳಿ ಸುದ್ಧಿಗಾರರೊಂದಿಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ನನ್ನ ರಾಜೀನಾಮೆಗೆ ಕೇಂದ್ರದ ಯಾವುದೇ ನಾಯಕರಿಂದ ಒತ್ತಡವಿರಲಿಲ್ಲ. ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಸಧೃಡವಾಗಿ ಸಂಘಟನೆ ಮಾಡಿ ಮತ್ತೆ ಪಕ್ಷವನ್ನು ಬಲಪಡಿಸಿ ಅಧಿಕಾರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಇನ್ನೂ ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಬಿಎಸ್ವೈ, ಮುಂದಿನ ಸಿಎಂ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ನಾನು ಯಾವುದೇ ಹೆಸರನ್ನು ಹೇಳಲು ಇಷ್ಟ ಪಡುವುದಿಲ್ಲ ಎಂದು ಹೇಳಿದರು. ನಾನು ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ.‌ ರಾಜ್ಯಪಾಲರ ಹುದ್ದೆ ನನಗೆ ಅಗತ್ಯವಿಲ್ಲ. ಇದನ್ನು ಕೇಂದ್ರ ನಾಯಕರಿಗೂ ತಿಳಿಸಿದ್ದೇನೆ. ವಾಜಪೇಯಿಯವರು ನನಗೆ ಕೇಂದ್ರ ಸಚಿವ ಸ್ಥಾನ ನೀಡಲು ಮುಂದಾಗಿದ್ದರು. ಅದನ್ನು ನಾನು ತಿರಸ್ಕರಿಸಿ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದೆ. ಈಗಲೂ ನಾನು ಪಕ್ಷದ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

Related Articles

Comments (0)

Leave a Comment