ಕೊರೊನಾ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ : ತನಿಖೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ
- by Suddi Team
- July 3, 2020
- 10 Views

ಬೆಂಗಳೂರು : ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ಒದಗಿಸಿರುವ ಉಪಕರಣಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಸುಮಾರು ಮೂರು ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಿದೆ. ಯಾವುದಕ್ಕೆ ಎಷ್ಟು ವೆಚ್ಚವಾಗಿದೆ ಎಂಬುದರ ಬಗ್ಗೆ ಸರ್ಕಾರ ಶ್ವೇತಪತ್ರ ಪ್ರಕಟಿಸಬೇಕು. ಜೊತೆಗೆ ಕೊರೊನಾ ನಿರ್ವಹಣೆ, ಖರ್ಚು, ವೆಚ್ಚ ಕುರಿತು ನಿಗಾ ವಹಿಸಲು ಸರ್ವಪಕ್ಷಗಳನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.
ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜೊತೆಗೆ ಉಪಕರಣಗಳ ಖರೀದಿಯಲ್ಲಿ 2200 ಕೋಟಿ ರೂ.ಗಳ ಅವ್ಯವಹಾರವಾಗಿದೆ. ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಹಣ ನೀಡಿ ಉಪಕರಣಗಳನ್ನು ಖರೀದಿಸಲಾಗಿದೆ. ಇಷ್ಟೂ ಹಣವನ್ನು ಲಪಟಾಯಿಸಲಾಗಿದೆ ನಡೆದಿರುವ ಅವ್ಯವಹಾರದಲ್ಲಿ ಭಾಗಿಯಾಗಿರುವವರು ಯಾರು ಎಂಬುದನ್ನು ತನಿಖೆ ಮೂಲಕ ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳು ಘೋಷಣೆ ಮಾಡಿರುವ ಕೊರೊನಾ ಪ್ಯಾಕೇಜ್ನಲ್ಲಿ ಯಾರಿಗೆ ಎಷ್ಟು ಪರಿಹಾರ ನೀಡಲಾಗಿದೆ ಎಂಬುದರ ವಿವರ ನೀಡಬೇಕು. ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 290 ಕೋಟಿ ರೂ. ಬಂದಿದೆ. ಅದರಲ್ಲಿ ಕೊರೊನಾ ನಿಯಂತ್ರಣಕ್ಕೆ ಮಾಡಿರುವ ವೆಚ್ಚ ಎಷ್ಟು ಎಂಬುದರ ಕುರಿತು ಮಾಹಿತಿ ಒದಗಿಸಬೇಕು. ಜೊತೆಗೆ ಪಿಎಂ ಕೇರ್ಸ್ಗೆ 60 ಸಾವಿರ ಕೋಟಿ ರೂ. ಸಂದಾಯವಾಗಿದೆ. ಅದರಲ್ಲಿ ರಾಜ್ಯಕ್ಕೆ ಒದಗಿಸಿರುವ ನೆರವು ಎಷ್ಟು ಎಂಬುದನ್ನೂ ಬಹಿರಂಗಪಡಿಸಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದರು.
ಪರತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದು :
ಯಾವಾಗ ಲಾಕ್ಡೌನ್ ಮಾಡಬೇಕಾಗಿತ್ತೋ ಆಗ ಮಾಡಲಿಲ್ಲ. ಈಗ ಮಾಡಿದರೂ ಪ್ರಯೋಜನವಿಲ್ಲ. ಇದೀಗ ಪರಿಸ್ಥಿತಿ ಕೈ ಮೀರಿದೆ. ಸೋಂಕು ಸಮುದಾಯದಲ್ಲಿ ಹರಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಅಧ್ಯಕ್ಷರನ್ನು ಕರೆತಂದು ಮೆರವಣಿಗೆ ನಡೆಸದೇ ಕೊರೊನಾ ನಿಯಂತ್ರಣಕ್ಕೆ ಆಗಲೇ ಶ್ರಮಿಸಿದ್ದರೆ ಈ ದುಸ್ಥಿತಿ ದೇಶಕ್ಕೆ, ರಾಜ್ಯಕ್ಕೆ ಬರುತ್ತಿರಲಿಲ್ಲ. ಕೊರೊನಾ ಸೋಂಕಿನಿಂದ ಮೃತರಾದವರ ಶವ ಸಂಸ್ಕಾರವನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದರೂ, ಸರ್ಕಾರ ಶವಗಳನ್ನು ಅಮಾನವೀಯವಾಗಿ ಎಸೆಯುತ್ತಿದೆ. ಮನುಕುಲಕ್ಕೆ ಅಗೌರವ ಆಗುವ ರೀತಿಯಲ್ಲಿ ಸರ್ಕಾರ ಬಳ್ಳಾರಿ, ಯಾದಗಿರಿ ಮತ್ತಿತರ ಕಡೆಗಳಲ್ಲಿ ಶವಗಳ ಅಂತ್ಯ ಸಂಸ್ಕಾರ ನಡೆಸಿದೆ. ಇದು ಸರ್ಕಾರದ ಬೇಜವಬ್ದಾರಿತನದಿಂದ ಆಗಿದೆ. ಶವ ಸಂಸ್ಕಾರ ಮಾರ್ಗಸೂಚಿ ಅನ್ವಯ ಮಾಡಬೇಕು ಎಂದು ಮೊದಲೇ ಏಕೆ ಹೇಳಿರಲಿಲ್ಲ. ಬಳ್ಳಾರಿಯಲ್ಲಿ ನಾಲ್ಕು ಶವಗಳನ್ನು ತಿಪ್ಪೆಗೆ ಎಸೆಯುವಂತೆ ಗುಂಡಿಗೆ ಎಸೆಯಲಾಗಿದೆ. ಆರೋಗ್ಯ ಸಚಿವರ ಸ್ವಂತ ಜಿಲ್ಲೆಯಲ್ಲಿಯೇ ಈ ರೀತಿಯಾದರೆ ಹೇಗೆ ? ಇದಕ್ಕೆ ಸಚಿವರೇ ಜವಾಬ್ದಾರಿ ಹೊರಬೇಕು. ಈಗ ತಪ್ಪಾಗಿದೆ. ಮುಂದೆ ಸರಿ ಮಾಡಿಕೊಳ್ಳುತ್ತೇವೆ ಎಂಬುದು ಪರಿಹಾರ ಅಲ್ಲ.
ಶವ ಸಂಸ್ಕಾರ ಯಾವ ರೀತಿ ಮಾಡಬೇಕು ಎಂಬುದನ್ನು ಸರ್ಕಾರ ಅಧಿಕಾರಿಗಳಿಗೆ ಏಕೆ ಹೇಳಿಕೊಡಲಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಲೇ ಇದೆಲ್ಲ ಆಗಿದೆ. ಶವ ಸಂಸ್ಕಾರದ ವಿಚಾರದಲ್ಲಿ ಸರ್ಕಾರ ಹೇಗೆ ನಡೆದುಕೊಂಡಿದೆ ಎಂಬುದನ್ನು ಮಾಧ್ಯಮಗಳೇ ಜನತೆಗೆ ತೋರಿಸಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಯ್ಯಲ್ಲಿ ಏನೂ ಆಗದು. ಮಂತ್ರಿಗಳೂ ಅವರ ಮಾತು ಕೇಳುವುದಿಲ್ಲ. ಸಚಿವರೇ ಪರಸ್ಪರ ಕಿತ್ತಾಡುತ್ತಿದ್ದಾರೆ. ಇದುವರೆಗೆ ಸಚಿವ ಸುಧಾಕರ್ ಅವರು ಕೊರೊನಾ ನಿರ್ವಹಣೆಯ ಉಸ್ತುವಾರಿ ಹೊತ್ತಿದ್ದರು. ಮತ್ತೆ ಸುರೇಶ್ ಕುಮಾರ್ ಅವರಿಗೆ, ಅದಾದ ಬಳಿಕ ಅಶೋಕ್ ಅವರಿಗೆ ಇದೀಗ ಮತ್ತೆ ಸುಧಾಕರ್ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ. ಸುಧಾಕರ್ ವೈದ್ಯಕೀಯ ಪದವೀಧರರು. ಅವರಿಗೆ ತಿಳಿವಳಿಕೆ ಇರುತ್ತದೆ. ಸರ್ಕಾರದಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲ ಎಂಬುದು ಇದರಿಂದಲೇ ಗೊತ್ತಾಗುತ್ತದೆ.
ಸೋಂಕಿತರ ಪರೀಕ್ಷೆ ಪ್ರಮಾಣ ಬೇರೆ ದೇಶ, ರಾಜ್ಯಗಳಲ್ಲಿ ಹೆಚ್ಚಾಗಿದೆ. ಆದರೆ, ನಮ್ಮ ದೇಶದಲ್ಲಿ ಹತ್ತು ಲಕ್ಷ ಮಂದಿಯಲ್ಲಿ 6943, ರಾಜ್ಯದಲ್ಲಿ 9741 ಮಂದಿಗೆ ಮಾತ್ರ ಪರೀಕ್ಷೆ ನಡೆಯುತ್ತಿದೆ. ಈಗ ರಾಜ್ಯದಲ್ಲಿ 13 ಸಾವಿರದವರೆಗೂ ಪರೀಕ್ಷೆ ನಡೆಯುತ್ತಿದೆ. ಆದರೂ ಕೊರೊನಾ ನಿಯಂತ್ರಣದಲ್ಲಿ ಪ್ರಧಾನಿ ಮೋದಿಯವರು ಅಗ್ರಗಣ್ಯರು ಎಂದು ಹೇಳುತ್ತಾರೆ.
ಕೊರೊನಾ ಸೋಂಕಿಗೆ ಒಳಗಾಗಿದ್ದ ತುಮಕೂರಿನ ಒಬ್ಬ ಮಹಿಳೆ ಬೆಡ್ ಸಿಗದೆ ಪರದಾಡಿದ್ದಾರೆ. ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ಡು, ಫುಡ್ಡು ಸಿಗುತ್ತಿಲ್ಲ. ಆರೈಕೆಯಂತೂ ಮೊದಲೇ ಇಲ್ಲ. ಅನೇಕ ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ವಾಟ್ಸಪ್ ಮೆಸೇಜ್ ಮೂಲಕ ಹೇಳಿಕೊಳ್ಳುತ್ತಿದ್ದಾರೆ. ಸರ್ಕಾರದ ಮಾಹಿತಿ ಪ್ರಕಾರ ಕೊರೊನಾ ಸೋಂಕಿತರಿಗೆ 4663 ಬೆಡ್ಗಳು ನಿಗದಿಯಾಗಿದೆ. ಈ ವರೆಗೆ 2694 ಹಾಸಿಗೆಗಳನ್ನು ಸೋಂಕಿತರಿಗೆ ಒದಗಿಸಲಾಗಿದೆ. ಹೀಗಿರುವಾಗ ಸೋಂಕಿತರು ಬೆಡ್ ಸಿಗದೆ ಏಕೆ ಪರದಾಡಬೇಕು ?
ನಿತ್ಯವೂ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಸರ್ಕಾರ ನಿಗದಿ ಮಾಡಿರುವ ಬೆಡ್ಗಳ ಸಂಖ್ಯೆ ಯಾವುದಕ್ಕೂ ಸಾಕಾಗುವುದಿಲ್ಲ. ಇದನ್ನು ಹೇಳಿದರೆ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎನ್ನುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ, ಮೆಡಿಕಲ್ ಕಾಲೇಜುಗಳಲ್ಲಿ ಎಲ್ಲಿವೆ ಬೆಡ್ಗಳು. ಅವುಗಳ ಮಾಲೀಕರು ಸರ್ಕಾರದ ಮಾತು ಕೇಳುತ್ತಿಲ್ಲ. ಯುದ್ಧ ಕಾಲದ ಶಸ್ತ್ರಾಭ್ಯಾಸ ಇವರದ್ದು. ಕೆಲವು ಖಾಸಗಿ ಆಸ್ಪತ್ರೆಗಳು ಮುಚ್ಚುತ್ತಿವೆ. ವಿಕ್ರಮ್ ಆಸ್ಪತ್ರೆಗೆ ಸರ್ಕಾರವೇ ನೋಟೀಸ್ ನೀಡಿದೆ. ಬೆಡ್ಗಳು ಬೇಡಿಕೆಗೆ ತಕ್ಕಂತೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಬೆಂಗಳೂರು ನಗರದಲ್ಲೇ ಒಂದೂವರೆಗೆ ತಿಂಗಳಲ್ಲಿ 40 ಸಾವಿರ ಕೋವಿಡ್ ಪ್ರಕರಣಗಳು ದಾಖಲಾಗುತ್ತದೆ ಎಂದು ಡಾ. ಸುದರ್ಶನ್ ಬಲ್ಲಾಳ್ ಅವರು ಹೇಳಿದ್ದಾರೆ. ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸೋಂಕು ವ್ಯಾಪಕವಾಗಲಿದೆ ಎಂದು ತಜ್ಞರು ಹೇಳಿದ್ದರೂ ಸರ್ಕಾರವೇಕೆ ಸನ್ನದ್ಧವಾಗಲಿಲ್ಲ. ಇಷ್ಟಕ್ಕೂ ರಾಜ್ಯದಲ್ಲಿ ಸರ್ಕಾರ ಇದೇಯೇ ?
ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳೇನು ಎಂಬುದರ ಬಗ್ಗೆ ಮಾಹಿತಿ ಕೇಳಿದರೂ ಕೊಡುವುದಿಲ್ಲ. ಇದು ಹಕ್ಕುಚ್ಯುತಿ ಅಲ್ಲವೇ ? ಪಿಎಂ ಕೇರ್ಸ್ಗೆ, ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಬಂದಿರುವ ಹಣ ಎಷ್ಟು ಎಂದು ಪತ್ರ ಬರೆದು ಕೇಳಿದರೂ ಮಾಹಿತಿ ಒದಗಿಸಲಿಲ್ಲ. ಪ್ರತಿಪಕ್ಷ ನಾಯಕರು ಮಾಹಿತಿಯನ್ನೂ ಕೇಳಬಾರದೆ ?
ಕೇಂದ್ರ ಸರ್ಕಾರ 33 ಸಾವಿರ ವೆಂಟಿಲೇಟರ್ ಒದಗಿಸುವುದಾಗಿ ಹೇಳಿ 90 ಕೊಟ್ಟಿದೆ. ಅಂಬುಲೆನ್ಸ್ಗಳಂತೂ ಇಲ್ಲಿ ಇಲ್ಲವೇ ಇಲ್ಲ. ಸೋಂಕಿತರೂ ಗೋಗರೆದರೂ ಅಂಬುಲೆನ್ಸ್ಗಳು ಬರುತ್ತಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿಯೇ ಸುದ್ದಿಗಳು ಬಿತ್ತರವಾಗಿದೆ.
ಆಟೋ, ಟ್ಯಾಕ್ಸಿ ಚಾಲಕರು, ಕ್ಷೌರಿಕರು, ಮಡಿವಾಳರು, ನೇಕಾರರಿಗೆ ಲಾಕ್ಡೌನ್ ಸಂದರ್ಭದಲ್ಲೇ ಪರಿಹಾರ ನೀಡಬೇಕಿತ್ತು. ಪರಿಹಾರ ನೀಡಲು 108 ನಿಬಂಧನೆಗಳನ್ನು ವಿಧಿಸಲಾಗಿದೆ. ಡ್ರೈವಿಂಗ್ ಲೆಸೆನ್ಸ್ ಇರುವ ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರ ಕೊಟ್ಟಿದ್ದರೆ ಆಗುತ್ತಿತ್ತು.
ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಈ ವರೆಗೆ 3320 ಕೋಟಿ ರೂ. ಖರ್ಚು ಮಾಡಿದೆ. ಆದರೆ, 815 ಕೋಟಿಗೆ ಲೆಕ್ಕವೇ ಇಲ್ಲ. ಉಪಕರಣಗಳನ್ನು ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಿಗೆ ಹಣ ನೀಡಿ ಖರೀದಿ ಮಾಡಲಾಗಿದೆ. ಇದಕ್ಕೆ ಕಾರಣವೇನು ? ಇದನ್ನು ಅವ್ಯವಹಾರ ಎನ್ನದೆ ಏನೆಂದು ಕರೆಯಬೇಕು. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಆ ಸಮಿತಿಯ ಅಧ್ಯಕ್ಷರಾದ ಎಚ್.ಕೆ. ಪಾಟೀಲರು ಈ ಕುರಿತು ಮಾತನಾಡಿದರೆ ಸಭಾಧ್ಯಕ್ಷರು ಅವರಿಗೆ ಪತ್ರ ಬರೆಯುತ್ತಾರೆ. ತಪಾಸಣೆ ಮಾಡಬಾರದು ಎಂದು ತಡೆಯಾಜ್ಞೆ ಕೊಡುತ್ತಾರೆ. ಇದು ಭ್ರಷ್ಟಾಚಾರ ಮುಚ್ಚಿ ಹಾಕುವ ಪ್ರಯತ್ನ.
ಉಪಕರಣಗಳ ಖರೀದಿ ಕುರಿತು ಹಣಕಾಸು ಇಲಾಖೆಯೇ ಆಕ್ಷೇಪ ವ್ಯಕ್ತಪಡಿಸಿದೆ. ಹೆಚ್ಚಿನ ದರ ನೀಡಿ ಏಕೆ ಉಪಕರಣಗಳನ್ನು ಖರೀದಿ ಮಾಡಿದಿರಿ ಎಂದು ಪ್ರಶ್ನೆ ಮಾಡಿದೆ. ಕೊರೊನಾದಿಂದ ಜನ ನರಳುತ್ತಿರುವ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಇವರು ಮನುಷ್ಯರೇ ? ಅಧಿಕಾರ ನಡೆಸುತ್ತಿರುವವರಿಗೆ ಮಾನವೀಯತೆ ಎಂಬುದು ಏನಾದರೂ ಇದೆಯೇ ? ಎಂದು ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ವಿಧಾನಸಭೆಯಲ್ಲಿ ಪ್ರತಿಪಕ್ಷದ ಮುಖ್ಯ ಸಚೇತರಕಾದ ಡಾ. ಅಜಯಸಿಂಗ್, ಶಾಸಕರಾದ ಯಶವಂತರಾಯಗೌಡ ಪಾಟೀಲ್, ಪ್ರಕಾಶ್ ರಾಥೋಡ್, ಆರ್.ಬಿ. ತಿಮ್ಮಾಪುರ, ಕಂಪ್ಲಿ ಗಣೇಶ್, ಮಾಜಿ ಶಾಸಕ ಅಶೋಕ್ ಪಟ್ಟಣ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
Related Articles
Thank you for your comment. It is awaiting moderation.
Comments (0)