70 ವರ್ಷಗಳಲ್ಲಿ ಆಗದ್ದನ್ನು ಒಂದೇ ವರ್ಷದಲ್ಲಿ ಸಾಧಿಸಿದ ಮೋದಿ 2.0: ಡಾ. ಅಶ್ವತ್ಥನಾರಾಯಣ

ರಾಮನಗರ: ಕಳೆದ 70 ವರ್ಷಗಳಲ್ಲಿ ಆಗದ ಎಷ್ಟೋ ಅಭಿವೃದ್ಧಿ ಕಾರ್ಯಗಳನ್ನು ಮೋದಿ 2.0 ಸರ್ಕಾರ ಮೊದಲ ವರ್ಷದಲ್ಲೇ ಸಾಧಿಸಿ, ದೇಶದಲ್ಲಿ ದೊಡ್ಡ ಮಟ್ಟದ ಸುಧಾರಣೆ ತರಲು ಕಾರಣವಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೇರಿ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ರಾಮನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮೋದಿ 2.0 ಸರ್ಕಾರದ ಸಾಧನೆಗಳ ಮೇಲೆ ಬೆಳಕು ಚೆಲ್ಲಿದರು.

“ಅದ್ಭುತವಾದ ಜನಾದೇಶದೊಂದಿಗೆ 2019 ಮೇ 30ರಂದು ಎರಡನೇ ಅವಧಿಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂತು. ಈ ಜನಾದೇಶವನ್ನು ಉತ್ತಮ ಆಡಳಿತ ನೀಡಲು ಬಳಸಿಕೊಂಡು, ದೇಶಕ್ಕೆ ಸ್ಥಿರ ಸರ್ಕಾರ ಕೊಟ್ಟ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ತಂತ್ರಜ್ಞಾನ ಬಳಕೆ ಮೂಲಕ ಕಳೆದ 70 ವರ್ಷಗಳಲ್ಲಿ ಆಗದ ಕೆಲಸಗಳನ್ನು ದೃಢ ಸಂಕಲ್ಪದೊಂದಿಗೆ ಮೋದಿ 2.0 ಸರ್ಕಾರ ಸಾಧಿಸಿ ತೋರಿಸಿದೆ,”ಎಂದು ಸಂತಸ ವ್ಯಕ್ತಪಡಿಸಿದರು.

“ಮೊದಲ ಅವಧಿಯಲ್ಲಿ ಜಾರಿ ತಂದ ಜನಧನ್‌, ವಿಮೆ, ಪಿಂಚಣಿ, ಆಯುಷ್ಮಾನ್‌, ಮೇಕ್‌ ಇನ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ, ಸ್ವಚ್ಛ ಭಾರತ, ಉಜಾಲಾ, ಉಜ್ವಲಾ, ಜನೌಷಧಿ ಮುಂತಾದ ಜನಪರ ಯೋಜನೆಗಳು ಹಾಗೂ ನೋಟ್‌ ಬ್ಯಾನ್‌, ಹಣಕಾಸು ವಹಿವಾಟಿಗೆ ಆಧಾರ್‌ ಕಡ್ಡಾಯಗೊಳಿಸುವ ಕಠಿಣ ನಿರ್ಧಾರಗಳು ದೇಶಕ್ಕೆ ಭದ್ರ ಬುನಾದಿಯಾಗಿವೆ. 30 ಕೋಟಿ ಜನರನ್ನು ಹೊಸದಾಗಿ ಬ್ಯಾಂಕಿಂಗ್‌ ವ್ಯವಸ್ಥೆಗೆ ತಂದ ಸರ್ಕಾರ, ಯೋಜನೆಯ ಲಾಭವನ್ನು ಅವರ ಖಾತೆಗೆ ನೇರವಾಗಿ ಜಮೆಯಾಗುವಂತೆ ನೋಡಿಕೊಂಡು ಆಡಳಿತದಲ್ಲಿ ಪಾರದರ್ಶಕತೆ ತಂದಿತು. ಮುಖ್ಯವಾಗಿ, ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಯಾಗಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸುವಂಥ ಮಹತ್ವದ ನಿರ್ಣಯಗಳೇ ಎರಡನೇ ಅವಧಿಗೂ ಜನ ಮೋದಿ ಸರ್ಕಾರವನ್ನು ಆಯ್ಕೆ ಮಾಡಲು ಕಾರಣವಾದವು,”ಎಂದರು.

ಸಿಎಎ ಜಾರಿ-370 ವಿಧಿ ರದ್ದು:

“ಸಂವಿಧಾನದ 370ನೇ ವಿಧಿ ರದ್ದು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಮೋದಿ ಸರ್ಕಾರದ ಐತಿಹಾಸಿಕ ನಿರ್ಣಯ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲು ತಾತ್ಕಲಿಕವಾಗಿ ಜಾರಿ ತಂದ 370ನೇ ವಿಧಿ ಶಾಶ್ವತಕ್ಕೆ ಉಳಿದುಕೊಂಡಿತ್ತು. ಅದನ್ನು ರದ್ದುಗೊಳಿಸಿದ ಮೋದಿ ಸರ್ಕಾರ, ಜಮ್ಮು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಂತೆ ಮಾಡಿತು. ರಾಷ್ಟ್ರ ವಿಭಜನೆ ನಂತರ ನೆರೆ ರಾಷ್ಟ್ರಗಳಲ್ಲಿ ಉಳಿದ ಭಾರತೀಯ ಮೂಲದವರು ಧರ್ಮದ ವಿಚಾರವಾಗಿ ಅಲ್ಲಿ ದೌರ್ಜನ್ಯ ಎದುರಿಸಿ ದೇಶಕ್ಕೆ ವಾಪಸಾದಾಗ ಅವರಿಗೆ ಪೌರತ್ವ ದೊರೆಯದೆ ಒದ್ದಾಡುವ ಪರಿಸ್ಥಿತಿ ಇತ್ತು. ಅಂಥವರ ರಕ್ಷಣೆಗಾಗಿ ‘ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ಮಾಡಿತು. ಪ್ರತಿಪಕ್ಷಗಳ ವಿರೋಧದ ನಡುವೆಯೂ ಈ ವಿಧೇಯಕಗಳಿಗೆ ಅಂಗೀಕಾರ ಪಡೆದದ್ದು ಅಮೋಘ ಸಾಧನೆ,”ಎಂದರು.

ತ್ರಿವಳಿ ತಲಾಖ್‌ ನಿಷೇಧ:

“ತ್ರಿವಳಿ ತಲಾಖ್ ನಿಷೇಧಿಸುವ ‘ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳು) ವಿಧೇಯಕ–2019’ ಜಾರಿ ತರುವ ಮೂಲಕ ಮುಸ್ಲಿಂ ಮಹಿಳೆಯರ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯವನ್ನು ಮೋದಿ ಸರ್ಕಾರ ತಡೆಗಟ್ಟಿದೆ. ಜತೆಗೆ, ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸುವ ಕಠಿಣ ಕಾನೂನು ಜಾರಿ ತಂದು, ಮಹಿಳೆಯರು ಮತ್ತು ಮಕ್ಕಳ ನೆರವಿಗೆ ಬಂದಿದೆ,”ಎಂದು ಹೇಳಿದರು.

ರಾಮ ಮಂದಿರದ ಕನಸು ಸಾಕಾರ:

“ದೇಶದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತದೆ ಎಂಬ ಆಸೆಯನ್ನು ಜನ ಬಿಟ್ಟಿದ್ದರು. ಕೇವಲ ವೋಟಿಗಾಗಿ ರಾಮ ಮಂತ್ರ ಜಪಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಸುಪ್ರೀಂಕೋರ್ಟ್‌ ತೀರ್ಪಿನ ಮೂಲಕ ಶತಮಾನಗಳಷ್ಟು ಹಳೆಯದಾದ ಸಂಘರ್ಷ 2019ರಲ್ಲಿ ಸುಖಾಂತ್ಯ ಕಂಡಿತು. ಸಹಸ್ರಾರು ಭಾರತೀಯರ ಭಾವನೆಗೆ ಮನ್ನಣೆ ತಂದು ಕೊಟ್ಟಿದ್ದು ಕೇಂದ್ರ ಸರ್ಕಾರದ ದೃಢ ನಿರ್ಧಾರ. ಶೀಘ್ರದಲ್ಲೇ ರಾಮ ಮಂದಿರವನ್ನು ಕಣ್ತುಂಬಿಸಿಕೊಳ್ಳುವ ಸೌಭಾಗ್ಯ ನಮ್ಮದಾಗಲಿದೆ,”ಎಂದು ಸಂತಸ ವ್ಯಕ್ತಪಡಿಸಿದರು.

ಕೋವಿಡ್ ನಿರ್ವಹಣೆ ವಿಶ್ವಕ್ಕೆ ಪ್ರೇರಣೆ:

ಕೊವಿಡ್‌ನಂಥ ಪರಿಸ್ಥಿತಿಯಲ್ಲಿ 132 ಕೋಟಿ ಜನರ ರಕ್ಷಣೆಗೆ ಬಂದವರು ನಮ್ಮ ಪ್ರಧಾನಿ. ಅಗತ್ಯ ಕ್ರಮ ವಹಿಸದೇ ಸೋಂಕು ವ್ಯಾಪಕವಾಗಿ ಬೇರೆ ದೇಶಗಳು ತತ್ತರಿಸಿಹೋದ ಸಂದರ್ಭದಲ್ಲಿ ಇಡೀ ವಿಶ್ವ ಈಗ ಭಾರತದತ್ತ ಬೆರಗಿನಿಂದ ನೋಡುವಂತಾಗಿದೆ. ಮೂಲಸೌಕರ್ಯದ ಕೊರತೆ ಹಲವಾರು ಸವಾಲುಗಳ ನಡುವೆ ಕಠಿಣ ನಿರ್ಧಾರ ಕೈಗೊಂಡು ಸೋಂಕು ಹರಡದಂತೆ ತಡೆದು, ಉತ್ತಮ ಆರೋಗ್ಯ ಸೇವೆ ಒದಗಿಸುವ ಜತೆಗೆ ಆರ್ಥಿಕ ಪುನಶ್ಚೇತನಕ್ಕೂ ಕ್ರಮ ಕೈಗೊಂಡಿದ್ದಾರೆ. ನಾಯಕತ್ವ ಉತ್ತಮವಾಗಿದ್ದರೆ ಎಂಥ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂದು ತೋರಿಸಿಕೊಟ್ಟು ಇಡೀ ವಿಶ್ವಕ್ಕೆ ಪ್ರಧಾನಿ ಮೋದಿ ಪ್ರೇರಣೆ ಆಗಿದ್ದಾರೆ,”ಎಂದು ಪ್ರಶಂಸಿಸಿದರು.

“ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಮುಂದಾಗಿರುವ ಪ್ರಧಾನಿ ಮೋದಿ, ಕೊವಿಡ್ ಸಂಕಷ್ಟವನ್ನೇ ಭವಿಷ್ಯದ ಆರ್ಥಿಕ ಮತ್ತು ಉದ್ಯೋಗ ಬೆಳವಣಿಗೆಗೆ ಒಂದು ಅವಕಾಶವಾಗಿ ಪರಿವರ್ತಿಸುವ ಪ್ರಯತ್ನ ಮಾಡಿದ್ದಾರೆ. ವೆಂಟಿಲೇಟರ್‌, ಪಿಪಿಇ ಕಿಟ್‌, ಎನ್‌95 ಮಾಸ್ಕ್‌, ಟೆಸ್ಟಿಂಗ್‌ ಕಿಟ್‌ ಮುಂತಾದ ಪರಿಕರಗಳನ್ನು ದೇಶದಲ್ಲೇ ಉತ್ಪಾದಿಸಿ ಬೇರೆ ರಾಷ್ಟ್ರಗಳಿಗೂ ರಫ್ತು ಮಾಡುವ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಲಾಕ್‌ಡೌನ್‌ ಸಂಕಷ್ಟದಿಂದ ದೇಶವನ್ನು ಪಾರುಮಾಡಲು ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ,”ಎಂದು ವಿವರಿಸಿದರು.

Related Articles

Comments (0)

Leave a Comment