ಮೊದಲ ಬಜೆಟ್‌ನಿಂದ ಉದ್ವೇಗಕ್ಕೆ ಒಳಗಾಗಿದ್ದೇನೆ : ಸಿಎಂ

ಬೆಂಗಳೂರು : ಹಣಕಾಸು ಮಂತ್ರಿಯೂ ಆಗಿ ಮೊದಲ ಬಜೆಟ್ ಮಂಡಿಸುತ್ತಿರುವುದರಿಂದ ಸಹಜವಾಗಿ ಉದ್ವೇಗಕ್ಕೆ ಒಳಗಾಗಿದ್ದೇನೆ. ಆದರೂ, ರಾಜ್ಯದ ಜನರಿಗೆ ಸಿಹಿ ಸುದ್ದಿಯನ್ನೇ ನೀಡಲಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಈ ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿದ್ದರೂ ಬಜೆಟ್ ಮಂಡನೆ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇದು ನಾನೇ ಮಂಡಿಸುತ್ತಿರುವ ಮೊದಲ ಬಜೆಟ್ ಆಗಿರುವುದರಿಂದ ಸಹಜವಾಗಿಯೇ ಉದ್ವೇಗಕ್ಕೆ ಒಳಗಾಗಿದ್ದೇನೆ ಎಂದು ಭಾವುಕರಾಗಿ ಹೇಳಿದರು.

ರಾಜ್ಯದ ಜನರ ನಿರೀಕ್ಷೆಗಳು ಏನೆಂದು ನನಗೆ ತಿಳಿದಿದೆ. ಅವರ ನಿರೀಕ್ಷೆಗೆ ತಕ್ಕಂತೆ ಬಜೆಟ್ ಮಂಡನೆ ಮಾಡಲಿದ್ದೇನೆ. ಯಾರೂ ಕೂಡ ಮುನಿಸಿಕೊಳ್ಳದಂತಹ ಸಿಹಿ ಸುದ್ದಿಯನ್ನು ನೀಡಲಿದ್ದೇನೆ. ಸರ್ವರು ಒಪ್ಪಿಕೊಳ್ಳುವಂತಹ ಬಜೆಟ್ ಇದಾಗಿದ್ದು, ಬಜೆಟ್ ಮಂಡನೆವರೆಗೆ ಕಾದು ನೋಡಿ ಎಂದು ಹೇಳಿದರು.

ನನ್ನ ಬಜೆಟ್ ಏನೆಂಬುದು ಮಂಡನೆಯಾಗುವವರೆಗೂ ಯಾರಿಗೂ ಅರ್ಥವಾಗುವುದಿಲ್ಲ. ಜನರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಇದು ಜನೋಪಯೋಗಿ ಬಜೆಟ್ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.

Related Articles

Comments (0)

Leave a Comment