ಡಿಸಿಎಂರಿಂದ ಬಹುಮಹಡಿ ವಾಹನ ನಿಲ್ದಾಣ ವೀಕ್ಷಣೆ!

ಬೆಂಗಳೂರು: ಸ್ವಾತಂತ್ರ್ಯ ಉದ್ಯಾನವನ ಬಹುಮಹಡಿ ವಾಹನ ನಿಲ್ದಾಣ ಕಾಮಗಾರಿ ಹಾಗೂ ಮಹಾರಾಜ ಕಾರು ನಿಲ್ದಾಣ ಕಾಮಗಾರಿ ಪ್ರಗತಿಯನ್ನು ಉಪಮುಖ್ಯಮಂತ್ರಿ ಹಾಗೂ‌ ನಗರಾಭಿದ್ಧಿ ಸಚಿವ ಡಾ.ಜಿ. ಪರಮೇಶ್ವರ ಅವರು ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಪರಮೇಶ್ವರ್, ನಗರದಲ್ಲಿನ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಫ್ರೀಡಂ ಪಾರ್ಕ್‌ನಲ್ಲಿ ಬಹುಮಹಡಿ ವಾಹನ ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ೮೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಈ ನಿಲ್ದಾಣದಲ್ಲಿ ೫೦೦ ಕಾರು ಹಾಗೂ ೫೦೦ ಬೈಕ್ ನಿಲುಗಡೆಗೆ ಸಾಧ್ಯವಾಗುವ ರೀತಿ‌ ನಿರ್ಮಿಸಲಾಗುತ್ತಿದೆ.

ಕಾಮಗಾರಿ ಪ್ರಾರಂಭಗೊಂಡ ೨೪ ತಿಂಗಳಲ್ಲಿ ಮುಗಿಯಬೇಕಿತ್ತು. ಕಾಮಗಾರಿ ವೇಳೆ ಕಲ್ಲು ಸಿಕ್ಕಿರುವ ಕಾರಣ ನಿಧಾನವಾಗಿದೆ. ಮಾರ್ಚ್ ಕೊನೆಯ ವಾರದೊಳಗೆ ಕೆಲಸ ಮುಗಿಸುವಂತೆ ಅಧಿಕಾರಿಗಳು ಬರವಣಿಗೆ ಮೂಲಕ ಭರವಸೆ ನೀಡಿರುವುದರಿಂದ ತಡವಾಗುವ ಪ್ರಶ್ನೆ ಇಲ್ಲ ಎಂದಿದ್ದಾರೆ.

ಜೆಸಿ ರಸ್ತೆಯಲ್ಲೂ ಬಹುಮಹಡಿ ಪಾರ್ಕಿಂಗ್ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಗೂ ಭೇಟಿ ನೀಡಲಿದ್ದೇನೆ. ತ್ವರಿತವಾಗಿ ಎಲ್ಲ ಪಾರ್ಕಿಂಗ್ ನಿಲ್ದಾಣಗಳ ಕಾಮಗಾರಿಗಳೂ ಶೀರ್ಘವೇ ಮುಗಿಯಲಿದೆ ಎಂದು ಭರವಸೆ ನೀಡಿದರು.

Related Articles

Comments (0)

Leave a Comment