ಸಿಎಸ್ ಸೇವಾವಧಿ ವಿಸ್ತರಣೆ ಬೇಡ: ಕೇಂದ್ರಕ್ಕೆ ಮತ್ತೊಂದು ಪತ್ರ

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಸೇವೆ ವಿಸ್ತರಿಸುವಂತೆ ಕೇಂದ್ರಕ್ಕೆ ಮಾಡಿದ ಮನವಿಯನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ಈ ತಿಂಗಳ ಅಂತ್ಯಕ್ಕೆ ರತ್ನಪ್ರಭಾರ ಅಧಿಕಾರ ಅವಧಿ ಮುಗಿಯಲಿದೆ.

ಸಿಎಸ್ ರತ್ನಪ್ರಭಾ ಅಧಿಕಾರ ಅವಧಿ ಜೂನ್ 30ಕ್ಕೆ ಕೊನೆಗೊಳ್ಳಲಿದ್ದು ಮೂರು ತಿಂಗಳ ಕಾಲ ಅವರ ಅಧಿಕಾರಾವಧಿ ವಿಸ್ತರಿಸುವಂತೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಇದೀಗ ಮತ್ತೊಂದು ಪತ್ರ ಬರೆದು ಜೂನ್ 30 ಕ್ಕೆ ರತ್ನಪ್ರಭಾ ಅವರ ಸೇವಾವಧಿ ಮುಗಿಯಲಿ ಇದರಲ್ಲಿ‌ ಯಾವುದೇ ಬದಲಾವಣೆ ಬೇಡ ಎಂದು ತಿಳಿಸಿದ್ದಾರೆ.

ಸಿದ್ಧರಾಮಯ್ಯ ಆಪ್ತ ಅಧಿಕಾರಿಗಳ ವರ್ಗಾವಣೆಯೇ ಸಮ್ಮಿಶ್ರ ಸರ್ಕಾರದ ಮೇಲೆ ಅವರು ಮುನಿಸಿಕೊಳ್ಳಲು ಪ್ರಮುಖ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಬ್ಬ ಅಧಿಕಾರಿಗೆ ಕೋಕ್ ನೀಡಲಾಗುತ್ತಿದೆ. ಈಗಾಗಲೇ ರತ್ನಪ್ರಭಾ ಅವರ ಅಧಿಕಾರ ಅವಧಿ ಮುಗಿದು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂರು ತಿಂಗಳು ವಿಸ್ತರಣೆಯಾಗಿತ್ತು. ಅವಧಿ ಮುಕ್ತಾಯಗೊಳ್ಳುತ್ತಿದ್ದ ಕಾರಣ ಮತ್ತೆ 3 ತಿಂಗಳ ಕಾಲ ಸೇವಾವಧಿ ವಿಸ್ತರಣೆಗೆ ಇತ್ತೀಚೆಗಷ್ಟೇ ಕುಮಾರಸ್ವಾಮಿ ಪತ್ರ ಬರೆದಿದ್ದರು.

ಸಿದ್ಧರಾಮಯ್ಯ ಅಧಿಕಾರಾವಧಿಯಲ್ಲೇ ನೇಮಕಗೊಂಡಿದ್ದ ರತ್ನಪ್ರಭಾಗೆ ಕೊಕ್ ನೀಡಲು ಸಿಎಂ ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

Related Articles

Comments (0)

Leave a Comment