ಕಾಂಗ್ರೆಸ್‌ನಲ್ಲಿ ತಣ್ಣಗಗಾದ ಭಿನ್ನಮತ: ಸಿಎಲ್‌ಪಿಯಿಂದ ದೂರ ಉಳಿದ ಶಾಸಕರು

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ವಂಚಿತ ಕಾಂಗ್ರೆಸ್ ಶಾಸಕರ ಅಸಮಾಧಾನ ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಿಂದಲೂ ಅತೃಪ್ತರೂ ದೂರ ಉಳಿದಿದ್ದಾರೆ.

ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸಚಿವ ಸ್ಥಾನ ವಂಚಿತರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದರು. ಎಂ.ಬಿ. ಪಾಟೀಲ್ ಸೇರಿದಂತೆ ಅವರ ‌ಬಣದ ಶಾಸಕರಾದ ಸುಧಾಕರ್, ಸತೀಶ್ ಜಾರಕಿ ಹೊಳಿ, ಎಂಟಿಬಿ ನಾಗರಾಜ್ ಗೈರಾಗಿದ್ದಾರೆ.

ಅಲ್ಲದೆ ಹೆಚ್ ಕೆ ಪಾಟೀಲ್, ರಾಮಲಿಂಗಾರೆಡ್ಡಿ, ಎಂ ಕೃಷ್ಣಪ್ಪ, ಅಲ್ಪಸಂಖ್ಯಾತ ಸಮುದಾಯದ ಶಾಸಕರಾದ ತನ್ವೀರ್ ಸೇಠ್, ರೋಷನ್ ಬೇಗ್, ಹ್ಯಾರಿಸ್ ಕೂಡ ಸಭೆಗೆ ಗೈರು ಹಾಜರಾಗಿದ್ದಾರೆ.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಸಚಿವರಾದ ಆರ್.ವಿ.ದೇಶಪಾಂಡೆ, ಕೆ ಜೆ ಜಾರ್ಜ್, ಪುಟ್ಟರಂಗಶೆಟ್ಟಿ, ರಾಜ್ ಶೇಖರ್ ಪಾಟೀಲ್, ಜಯಮಾಲ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಐವಾನ್ ಡಿಸೋಜಾ, ಎಸ್.ಆರ್.ಪಾಟೀಲ್, ಪ್ರಿಯಾಂಕ ಖರ್ಗೆ, ಶಿವಶಂಕರ ರೆಡ್ಡಿ, ಶಾಸಕರಾದ ಭೈರತಿ ಸುರೇಶ್, ಪ್ರತಾಪ್ ಗೌಡ ಪಾಟೀಲ್ ಮುಂತಾದವರು ಹಾಜರಾಗಿದ್ದರು.

ಸಭೆ ಬಳಿಕ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್, ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇವೆ. ಶಿಸ್ತಿನಿಂದ ಕೆಲಸ ಮಾಡುವ ನಿಟ್ಟಿನಲ್ಲಿ ಶಾಸಕರಿಗೆ ಮಾರ್ಗದರ್ಶನ ಕೊಟ್ಟಿದ್ದೇವೆ. ಸದನದಲ್ಲೂ ಕೂಡ ಎಲ್ಲರೂ ಭಾಗವಹಿಸಬೇಕೆಂದು ಸೂಚನೆ ಕೊಟ್ಟಿದ್ದೇವೆ. ಸಭಾಪತಿ ಸ್ಥಾನಕ್ಕೆ ಕೂಡಲೇ ಸಭಾಪತಿ ಗಳ ನೇಮಕ ಮಾಡುವ ಬಗ್ಗೆಯೂ ತೀರ್ಮಾನ ಆಗಿದೆ ಎಂದರು.

Related Articles

Comments (0)

Leave a Comment