ಬಿಜೆಪಿ ನಾಯಕರು ಬಹಳ ಅರ್ಜೆಂಟ್‌ನಲ್ಲಿದ್ದಾರೆ, ತಾಳ್ಮೆಯಿಂದ ಇದ್ದರೆ ಒಳ್ಳೆಯದು: ಡಿಕೆಶಿ

ಬೆಂಗಳೂರು: ನನ್ನ ವಿರುದ್ಧ ಏಕೆ ಎಫ್‌ಐಆರ್ ದಾಖಲು ಮಾಡ್ತಾರೆ. ಬಿಜೆಪಿ ನಾಯಕರು ಎಷ್ಟು ಅರ್ಜೆಂಟ್ ನಲ್ಲಿದಾರೆ ಎಂದು ಗೊತ್ತಿದೆ. ಮರದಲ್ಲಿ ಹಣ್ಣು ಚನ್ನಾಗಿ ಕೆಂಪಾಗಿದ್ರೆ ಎಲ್ಲರೂ ಕಲ್ಲಿನಲ್ಲಿ ಹೊಡೆಯುತ್ತಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಎಫ್‌ಐಆರ್ ದಾಖಲಾಗಿರುವ ಬಗ್ಗೆ ಅಧಿಕೃತವಾಗಿ ನನಗೆ ಯಾವ ದಾಖಲೆಗಳನ್ನು, ಮಾಹಿತಿಗಳನ್ನು ಕೊಟ್ಟಿಲ್ಲ. ಪ್ರಾಸಿಕ್ಯೂಷನ್ ವಿಚಾರ ಸಂಬಂಧ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ನ್ಯಾಯಾಲಯಕ್ಕೆ ಏನು ಗೌರವ ಕೊಡಬೇಕೊ ಕೊಡುತ್ತೇವೆ ಎಂದು ಹೇಳಿದರು.

ನನ್ನ ವಿರುದ್ಧ ಎಫ್ ಐಆರ್ ದಾಖಲಿಸಿರುವ ಬಗ್ಗೆ ಖಚಿತಪಡಿಸಿಲ್ಲ. ಎಫ್ ಐಆರ್ ದಾಖಲಾಗಿರುವ ಬಗ್ಗೆ ಮಾಹಿತಿಯೂ ಇಲ್ಲಾ, ಯಾವ ಅಧಿಕಾರಿಗಳು ನನ್ನ ಕರೆದು ಕೇಳಿಲ್ಲ, ಹಿಂದೆ ಅಧಿಕಾರಿಗಳು ಕರೆದು ಕೇಳಿದ್ದರು ಅದಕ್ಕೆ ಸರಿಯಾದ ಉತ್ತರವನ್ನ ಕೊಟ್ಟಿದ್ದೇನೆ ಎಂದರು.

ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡಿದ ಪತ್ರ ಫೇಕ್ ಎಂಬ ಬಿಎಸ್ ವೈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಫೇಕ್ ಪತ್ರ ಅಂತಾ ಯಡಿಯೂರಪ್ಪ ಹೇಳಿದ್ರೆ ಬಹಳ ಸಂತೋಷ. ಯಡಿಯೂರಪ್ಪ, ಪುಟ್ಟಸ್ವಾಮಿಗೌಡ ಎಂಬುವವರ ಮೂಲಕ ಯಡಿಯೂರಪ್ಪ ಪತ್ರ ಹಾಕಿ ಕಳಿಸಿ ಕೊಟ್ಟಿದ್ದರು. ಯಡಿಯೂರಪ್ಪ ಶಿಫಾರಸ್ಸಿನ ಮೇಲೆ ಪತ್ರ ಕಳುಹಿಸಿದ್ದು ಈ ಹಿಂದೆಯೇ ನನಗೆ ಗೊತ್ತಿತ್ತು. ಪತ್ರ ಫೇಕ್ ಹೌದೋ ಅಲ್ಲವೋ ಎಂಬುದಕ್ಕೆ ನಾನು ನನ್ನ ಸಹೋದರ ಅನುಭವಿಸಿದ್ದೆ ಸಾಕ್ಷಿ. ನನ್ನ ಮನೆ ಮೇಲೆ ದಾಳಿಯಾಗಿದೆ. ನನ್ನ ಹೆಸರು, ನನ್ನ ಸಹೋದರ ಸುರೇಶ್ ಹೆಸರು ಹೇಳಿದ್ದಾರೆ. ಇದರಲ್ಲಿ ರಾಜಕೀಯ ಬೆರೆಸಬಾರದು. ಕೆಲವು ವಿಚಾರಗಳು ನನಗೂ ಗೊತ್ತಿದೆ ಅದೆಲ್ಲವನ್ನ ಈಗ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ನಾಯಕರು ತಾಳ್ಮೆಯಿಂದ ಇದ್ದರೆ ಒಳ್ಳೆಯದು. ರಾಜಕೀಯ ಮಾಡುವುದು ಸರಿಯಲ್ಲ, ಹಣ, ಅಧಿಕಾರ ಪ್ರಭಾವದಿಂದಲೇ ರಾಜಕೀಯ ಮಾಡಿದ್ರೆ ಅದಕ್ಕೂ ನಾನು ರೆಡಿ. ಯಾವುದೂ ಮುಚ್ಚುಮರೆ ಏನೂ ಇಲ್ಲ. ಬಿಜೆಪಿ ಮುಖಂಡರು ಕಾಂಗ್ರೆಸ್ ನ ಯಾವ ಶಾಸಕರನ್ನ ಭೇಟಿ ಮಾಡಿದ್ದಾರೆ. ಯಾರ ಜೊತೆ ಮಾತುಕತೆ ನಡೆಸಿದ್ದಾರೆಂಬುದು ಎಲ್ಲವೂ ಗೊತ್ತು. ಇಲ್ಲಿ ಅಧಿಕಾರ ಶಾಶ್ವತ ಅಲ್ಲವೇ ಅಲ್ಲ. ನಾನೂ ಕೂಡ ಶಾಶ್ವತ ಅಲ್ಲ. ಸದ್ದಾಂ ಹುಸೇನ್, ರಾಜ ಮಹಾರಾಜರು ಏನಾಗಿದ್ದಾರೆ ಅಂತಾ ಗೊತ್ತಿದೆ. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

Related Articles

Comments (0)

Leave a Comment