ಬಿಬಿಎಂಪಿಗೆ ಹೊಸ ಕಾನೂನು ರಚನೆ: ಡಿಸಿಎಂ ಪರಂ

ಬೆಂಗಳೂರು: ಬಿಬಿಎಂಪಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಶೀಘ್ರವೇ ನೂತನ ಕಾನೂನು ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು‌ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನ ಅಭಿವೃದ್ಧಿ ಹಾಗೂ ಸಮಸ್ಯೆ ಬಗ್ಗೆ ಚರ್ಚಿಸಲು ಶಾಸಕರು, ಸಚಿವರು, ಸಂಸದರೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಲಾಯಿತು. ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ಡಾ.ಜಿ.ಪರಮೇಶ್ವರ್, ಬಿಬಿಎಂಪಿಗೆ ಹೊಸ ಕಾನೂನು ತರಲು ಸದಸ್ಯರು ಸಲಹೆ ನೀಡಿದ್ದಾರೆ. ಪ್ರಸ್ತುತ ಈಗಿರುವ ಮುನಿಸಿಪಾಲಿಟಿ ಆ್ಯಕ್ಟ್ ಅಡಿಯಲ್ಲಿ ಬಿಬಿಎಂಪಿ ನಡೆಯುತ್ತಿದೆ. ಇದರ ಮುಂದುವರೆದ ಭಾಗವಾಗಿ ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಹೊಸ ಕಾನೂನು ತರಲು ಸಲಹೆ ನೀಡಿದ್ದಾರೆ. ಆದಷ್ಟು ಶೀಘ್ರವಾಗಿ ಕಾನೂನು ಜಾರಿ ಮಾಡಲಿದ್ದೇವೆ ಎಂದರು.

ರಾಜ್ಯದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದರೂ, ಪ್ಲಾಸ್ಟಿಕ್ ಉತ್ಪಾದನೆ ಮತ್ತು ಮಾರಾಟ ನಡೆಯುತ್ತಿದೆ. ಹೀಗಾಗಿ ಪರಿಣಾಮಕಾರಿಯಾಗಿ ಬ್ಯಾನ್ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲೆಂದರಲ್ಲಿ ಫ್ಲೆಕ್ಸ್ ‌ಹಾಕಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಅನುಮತಿ ಇಲ್ಲದೇ ಮರದ ಮೇಲೆಲ್ಲಾ ಕೇಬಲ್ ಲೈನ್ ಹಾಕಿದ್ದಾರೆ ಅವರ ಮೇಲೆ‌ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದರು.

ಕಸದ ಸೂಕ್ತ ವಿಲೇವಾರಿ, ಸಂಸ್ಕರಣೆಗೆ ಸಭೆಯಲ್ಲಿ ಸಲಹೆ ನೀಡಿದ್ದು, ವೇಸ್ಟ್ ಎನರ್ಜಿ ಬಗ್ಗೆಯೂ ಶೀಘ್ರವಾಗಿ ನಿರ್ಧಾರ ಮಾಡಿ, ಒಂದೆರೆಡು ಕಡೆ ಪ್ರಾಯೋಗಿಕವಾಗಿಯೂ ಪ್ರಾರಂಭಿಸುತ್ತೇವೆ. ನಿರ್ಭಯ ಯೋಜನೆಯಲ್ಲಿ ೫ ಸಾವಿರ ಸಿಸಿ ಟಿವಿ ಅಳವಡಿಕೆಗೆ ತೀರ್ಮಾನ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಈ ಕಾರ್ಯಕ್ರಮದಡಿ ಕ್ರಮ ತೆಗೆದುಕೊಳ್ತೇವೆ ಎಂದು ತಿಳಿಸಿದರು.

ಇಡೀ ಬೆಂಗಳೂರಿನಲ್ಲಿ ಬೀದಿದೀಪಕ್ಕೆ ಎಲ್‌ಇಡಿ ಬಲ್ಬ್ ಹಾಕಲು ಯೋಜನೆ ಸಿದ್ಧವಾಗಿದೆ. ಮೆಟ್ರೋ, ಬಿಡಬ್ಲ್ಯೂಎಸ್‌ಎಸ್‌ಬಿ ಹೊರತು ಪಡಿಸಿ 10 ಸಾವಿರ ಕೋಟ ರೂಪಾಯಿ ಹಣವನ್ನ ಬಿಬಿಎಂಪಿಗೆ ಸರ್ಕಾರ ಬಜೆಟ್‌ನಲ್ಲಿ ಅನುಮೋದಿಸಿ ಕೊಟ್ಟಿದೆ. ಮುಂದಿನ ವಾರದಿಂದ ೨೮ ಕ್ಷೇತ್ರಗಳಿಗೂ ಸಿಟಿ ರೌಂಡ್ ತೆರಳಲಿದ್ದೇನೆ. ಜನರ ಹಾಗೂ ಶಾಸಕರ ಸಮಸ್ಯೆ ಆಲಿಸಲು ತೀರ್ಮಾನಿಸಿದ್ದೇನೆ. ದಿನಕ್ಕೆ ಮೂರು ನಾಲ್ಕು ಕ್ಷೇತ್ರಕ್ಕೆ ಭೇಟಿ ನೀಡಲಿದ್ದೇನೆ ಎಂದರು.

ಬಿ.ಎಸ್. ಪಾಟೀಲ್ ಅವರು ಬಿಬಿಎಂಪಿಯನ್ನು ಐದು ಭಾಗ ಮಾಡಲು ಸಲಹೆ‌ ನೀಡಿದ್ದಾರೆ. ಆದರೆ‌ ನಾವು ಪ್ರತ್ಯೇಕ ಕಾನೂನು ತರುತ್ತಿದ್ದೇವೆ. ಈಗಷ್ಟೇ ಸಲಹೆ ಬಂದಿದೆ ಮುಂದೆ ಅದರ ಬಗ್ಗೆ ಚರ್ಚೆ ಮಾಡುತ್ತೇವೆ. ಬಿಬಿಎಂಪಿ ವಿಭಜನೆ ಸಂಬಂಧ ಈಗಷ್ಟೇ ಶಿಫಾರಸು ಬಂದಿದೆ ಸರಕಾರ ಅದನ್ನು ಪರಿಶೀಲನೆ ಮಾಡಲಿದೆ ಎಂದು ತಿಳಿಸಿದರು.

ರಸ್ತೆ ಗುಂಡಿಗಳ ಶಾಶ್ವತ ಪರಿಹಾರಕ್ಕೆ ಟೆಂಡರ್‌ಶ್ಯೂರ್ ಕಾರ್ಯಕ್ರಮ ತಂದಿದ್ದೇವೆ. ಇದರಿಂದ ಮುಂದಿನ‌ ದಿನಗಳಲ್ಲಿ ಸಮಸ್ಯೆ ನೀಗಲಿದೆ. ಪೌರಕಾರ್ಮಿಕರ ಹಣ ಆಯಾ ಸಂದರ್ಭದಲ್ಲಿ ಕೊಡಲು ಅಧಿಕಾರಿಗಳಿಗೆ ಹೇಳಿದ್ದೇವೆ. ರಾಜಕಾಲುವೆಯಲ್ಲಿ ಹೂಳು ತೆಗೆಯಲು, ಬಫರ್‌ಜೋನ್ ಮಾಡಲು ಅಧಿಕಾರಿಗಳಿಗೆ ಸೂಚನೆ‌ ನೀಡಿದ್ದೇವೆ. ರಾಜಕಾಲುವೆ ಸರ್ವೆ ಆಗುತ್ತಿದೆ ತೆರವು ಕೆಲಸ ಮುಂದಿನ ದಿನದಲ್ಲಿ ಆಗತ್ತದೆ ಎಂದು ತಿಳಿಸಿದರು.

Related Articles

Comments (0)

Leave a Comment