ರಾತ್ರಿ ಹತ್ತು ಗಂಟೆಯಾದರೂ ಮುಂದುವರಿದ ಮುಖ್ಯಮಂತ್ರಿಗಳ ಜನತಾದರ್ಶನ!

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಅಧಿಕೃತವಾಗಿ ಪ್ರಾರಂಭಿಸಿದ ಜನತಾದರ್ಶನ ಕಾರ್ಯಕ್ರಮ ರಾತ್ರಿ ಗಂಟೆ ಹತ್ತಾದರೂ ಮುಂದುವರೆದಿತ್ತು.

ಸುಮಾರು1600 ಕ್ಕೂ ಹೆಚ್ಚು ಅರ್ಜಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಖುದ್ದು ಮಾತನಾಡಿ, ಪರಿಹಾರ ಒದಗಿಸಲು ನಿರ್ದೇಶನ ನೀಡಿದರು.

ಮಧ್ಯಾಹ್ನ12.15ಕ್ಕೆ ಪ್ರಾರಂಭವಾದ ಜಂತಾದರ್ಶನದಲ್ಲಿ ಮುಖ್ಯಮಂತ್ರಿಗಳು ಮೊದಲಿಗೆ ವಿಕಲಚೇತನರ ಅಹವಾಲುಗಳನ್ನು ಅವರು ಕುಳಿತಿದ್ದಲ್ಲಿಗೆ ತೆರಳಿ ಆಲಿಸಿದರು. ನಂತರ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ10ಕ್ಕೂ ಹೆಚ್ಚು ಜಿಲ್ಲಾಧಿಕಾರಿ ಗಳು, ಪೊಲೀಸ್ ವರಿಷ್ಠಾಧಿಕಾರಿ ಗಳು, ಬಿಡಿಎ, ಬಿಬಿಎಂಪಿ, ಬಿಡಬ್ಲ್ಯೂಎಸ್ ಎಸ್ ಬಿ, ವಿಕಲಚೇತನರ ಕಲ್ಯಾಣ ಇಲಾಖೆ, ಅಂಬೇಡ್ಕರ್, ದೇವರಾಜ ಅರಸು, ವಾಲ್ಮೀಕಿ, ಅಲ್ಪಸಂಖ್ಯಾತ ರ ಅಭಿವೃದ್ಧಿ ನಿಗಮಗಳು, ರಾಜೀವ್ ಗಾಂಧಿ ವಸತಿ ನಿಗಮ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿ ಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡರು.

ವೈದ್ಯಕೀಯ ಚಿಕಿತ್ಸೆಗೆ ನೆರವು ಕೋರಿ ಬಂದವರಿಗೆ ವಿವಿಧ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿ ಗಳೇ ಸ್ವತಃ ಮಾತನಾಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.

ಖಾಸಗಿ ಸಾಲದ ಮೂಲಕ ಶೋಷಣೆ, ವೈದ್ಯಕೀಯ ನೆರವು, ಆರ್ ಟಿ ಈ ಸಮಸ್ಯೆ, ಉದ್ಯೋಗ ಕ್ಕಾಗಿ ಮನವಿ, ವಿವಿಧ ನೆರವು ಕೋರಿ ಬಂದ ವಿಕಲಚೇತನರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಯಿತು. ಅರ್ಜಿಗಳ ನೋಂದಣಿ, ಅಹವಾಲು ಸಲ್ಲಿಸಲು ಬಂದವರಿಗೆ ಸೂರು, ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕುಡಿಯುವ ನೀರು, ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.

Related Articles

Comments (0)

Leave a Comment