ವಿಶ್ವ ವಿಖ್ಯಾತ ದಸರಾಗೆ ಭರ್ಜರಿ ತಯಾರಿ

ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಒಂದ್ಕಡೆ ಜಂಬೂ ಸವಾರಿ ಮೆರವಣಿಗೆಯ ವೇಳೆ ಕುಶಾಲ ತೋಪು ಸಿಡಿಸುವ ಪಿರಂಗಿಗಳನ್ನು ಸನ್ನಧ್ಧಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಹಾಕುವ ಗಾದಿ ಸೇರಿದಂತೆ ಹಲವು ವಸ್ತುಗಳನ್ನು ಸಿದ್ಧಗೊಳಿಸಲಾಗಿದೆ. ಮತ್ತೊಂದ್ಕಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಆಗಮನಕ್ಕೆ ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.

ಮೈಸೂರು ಅರಮನೆಯಲ್ಲಿ ಏಳು ಪಿರಂಗಿ ಗಾಡಿಗಳನ್ನು ಸ್ವಚ್ಚಗೊಳಿಸುವ ಮೂಲಕ ಕುಶಾಲ ತೋಪು ಸಿಡಿಸುವ ಕಾರ್ಯಕ್ಕೆ ಸಿದ್ಧಗೊಳಿಸಲಾಯಿತು. ದಸರಾ ಗಜಪಡೆ ಮತ್ತು ಅಶ್ವಾರೋಹಿ ಪಡೆಗಳಿಗೆ ಕುಶಾಲತೋಪು ಸಿಡಿಸುವ ಶಬ್ಧ ಮನವರಿಕೆ ಮಾಡಿಸಿ ಅವುಗಳು ಹೆದರದಂತೆ ಸನ್ನದ್ಧಗೊಳಿಸಲಾಗುತ್ತದೆ.

ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಹಾಕುವ ಗಾದಿ ಸೇರಿದಂತೆ ಹಲವು ವಸ್ತುಗಳನ್ನು ಸಿದ್ಧಗೊಳಿಸಲಾಗಿದೆ. ಗಾದಿ, ಜೂಲ, ಆನೆ ದಂತಕ್ಕೆ ಹಾಕುವ ಸಿಂಗೋಟಿ, ಆನೆಗಳ ಹಣೆ ಮೇಲೆ ನೇತು ಹಾಕುವ ಹಣೆಪಟ್ಟಿ, ಮಾವುತರು ಮತ್ತು ಕಾವಾಡಿಗಳಿಗೆ ಸಮವಸ್ತುಗಳನ್ನು ಸಿದ್ಧಗೊಳಿಸಲಾಗಿದೆ.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಆಗಮನಕ್ಕೆ ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ನಾಳೆ ಮೈಸೂರಿನ ಅರಣ್ಯ ಭವನಕ್ಕೆ ಬರುವ ಆನೆಗಳನ್ನು ಶುಕ್ರವಾರ ಮೈಸೂರು ಅರಮನೆಯ ಜಯ ಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುವುದು. ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳು ಕೂಡ ನಾಳೆ ಮೈಸೂರಿಗೆ ಆಗಮಿಸಲಿವೆ.

Related Articles

Comments (0)

Leave a Comment