- ಬೆಂಗಳೂರು
- ಮುಖ್ಯ ಮಾಹಿತಿ
- ರಾಜಕೀಯ
- ರಾಜ್ಯ
- Like this post: 0
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ: ಧ್ವಜಾರೋಹಣ ನೆರವೇರಿಸಿದ ಸಿಎಂ
- by Suddi Team
- August 15, 2020
- 15 Views

ಬೆಂಗಳೂರು: ನಾಡಿನ ಜನತೆಗೆ 74 ನೇ ಸ್ವಾತಂತ್ರ್ಯೋತ್ಸ ದ ಶುಭಾಶಯ ಕೋರಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸರ್ಕಾರದ ಕಾರ್ಯಕ್ರಮಗಳು,ಯೋಜನೆಗಳ ಪ್ರಗತಿ ವರದಿಯನ್ನು ಭಾಷಣದ ಮೂಲಕ ಜನರ ಮುಂದಿಟ್ಟಿದ್ದಾರೆ.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಿದರು. ನಂತರ ನಾಡಿನ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದರು.
ಭಾಷಣದ ವಿವರ:
1.ಭಾರತವು ಬ್ರಿಟೀಷರ ಆಳ್ವಿಕೆಯಿಂದ ಮುಕ್ತಗೊಂಡು ಸ್ವಾತಂತ್ರ್ಯವಾದ ಈ ದಿನ ನಮ್ಮೆಲ್ಲರ ಬಾಳಲ್ಲಿ ಸ್ಮರಣಾರ್ಹ ದಿನ.
2.ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ನಮ್ಮ ಹಿರಿಯರ ತ್ಯಾಗ ಬಲಿದಾನಗಳ ಮಹಾನ್ ಚರಿತೆ. ರಾಷ್ಟ್ರಪಿತ ಮಹಾತ್ಮ ಗಾಂಧಿ, ಸಂವಿಧಾನ ಶಿಲ್ಪಿ ಡಾ ಬಿ. ಆರ್. ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರಂತಹ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಾವು ಸ್ವಾತಂತ್ರ್ಯದ ಸವಿಯನ್ನು ಅನುಭವಿಸುತ್ತಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಾಗೂ ತ್ಯಾಗ ಬಲಿದಾನಗಳನ್ನು ಮಾಡಿದ ಎಲ್ಲರನ್ನು ಈ ಪುಣ್ಯ ದಿನದಂದು ನಾನು ಭಕ್ತಿ ಪೂರ್ವಕವಾಗಿ ಸ್ಮರಿಸುತ್ತೇನೆ.
3.ಅಭಿವೃದ್ಧಿಯೇ ಆಡಳಿತ ಮಂತ್ರ ಎಂಬ ಧ್ಯೇಯದೊಂದಿಗೆ “ಕಲ್ಯಾಣ ರಾಜ್ಯ”ವನ್ನು ಕಟ್ಟುವುದೇ ನಮ್ಮ ಗುರಿ. ಕೋವಿಡ್-19 ಎಂಬ ಮಹಾ ಪಿಡುಗಿನ ವಿರುದ್ಧದ ಹೋರಾಟದ ಈ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರ ರಾಮರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸಿ ರಾಜಧರ್ಮ ಪಾಲನೆಗೆ ನಾವು ಮುಂದಾಗಿದ್ದೇವೆ.
4.ಜನ ಸೇವೆಯೇ ಜನಾರ್ಧನ ಸೇವೆ ಎಂಬ ಮಾತಿದೆ. ಜನತಾ ಜನಾರ್ಧನರಾದ ತಾವು ನಮ್ಮನ್ನು ಆಯ್ಕೆ ಮಾಡಿದ್ದೀರಿ. ಇದರ ಹೊಣೆಗಾರಿಕೆಯನ್ನು ಅರಿತು ಇಂದಿನ ಕಾಲಘಟ್ಟದಲ್ಲಿ ಜನಹಿತವನ್ನು ಮನದಲ್ಲಿರಿಸಿ ಜನಪರ ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ. ಈ ಎಲ್ಲಾ ತೀರ್ಮಾನಗಳಿಗೂ ನನ್ನ ರಾಜ್ಯದ ಜನರು ಸಂಪೂರ್ಣ ಬೆಂಬಲ ನೀಡಿ ಸಹಕರಿಸಿದ್ದೀರಿ. ಅದಕ್ಕಾಗಿ ನಾನು ತಮಗೆ ಅಭಾರಿಯಾಗಿದ್ದೇನೆ.
5.ಕೋವಿಡ್-19 ಎಂಬುದು ಜಾಗತಿಕ ಪಿಡುಗಾಗಿದೆ. ಇದು ಇಂದು ಕೇವಲ ಆರೋಗ್ಯ ಕ್ಷೇತ್ರವನ್ನು ಮಾತ್ರ ಕಾಡಿಲ್ಲ. ಪ್ರತಿಯೊಂದು ಕ್ಷೇತ್ರವನ್ನೂ ಬಾಧಿಸಿದೆ ಮತ್ತು ಬಾಧಿಸುತ್ತಿದೆ. ಲಾಕ್ಡೌನ್ ಕಾಲದಲ್ಲಿ ಮಂದಗತಿಗೆ ತೆರಳಿದ್ದ ನಮ್ಮ ಜೀವನ ಇಂದು ಚೇತರಿಸಿಕೊಳ್ಳುತ್ತಿದೆ. ನಾನು ಸಹಾ ಕೊರೊನಾ ಸೋಂಕಿನಿಂದ ಬಾಧಿತನಾಗಿ, ಇದೀಗ ವೈದ್ಯಕೀಯ ಶುಶ್ರೂಷೆಯಿಂದ ಗುಣಮುಖನಾಗಿರುತ್ತೇನೆ. ನನ್ನ ಜನರು ಈ ಸೋಂಕಿನ ಬಗ್ಗೆ ಆತಂಕ ಅಥವಾ ಭಯಭೀತರಾಗುವ ಅಗತ್ಯವಿಲ್ಲ. ಜಾಗರೂಕತೆಯಿಂದ ಜೀವನ ನಡೆಸಬೇಕು ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಬಯಸುತ್ತೇನೆ.
6.ಕರ್ನಾಟಕವು ಮೊದಲಿನಿಂದಲೂ ಪ್ರಗತಿಪರ ಆಲೋಚನೆಗಳನ್ನೇ ಮಾಡುತ್ತ ಬಂದಿರುವ ರಾಜ್ಯ. ಆದ್ದರಿಂದಲೇ ನಮ್ಮ ಕರ್ನಾಟಕವು ರಾಷ್ಟ್ರದ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಪ್ರಥಮಗಳನ್ನು ದಾಖಲಿಸಿದೆ. ಈ ಪ್ರಕ್ರಿಯೆಗೆ ನಮ್ಮ ಸರ್ಕಾರ ನೀಡಿರುವ ಕೊಡುಗೆ ಅಪಾರ. ಈ ಹಿನ್ನೆಲೆಯಲ್ಲಿಯೇ ರಾಷ್ಟ್ರದ ಹಲವು ರಾಜ್ಯಗಳು ಇಂದು ಕರ್ನಾಟಕದತ್ತ ನೋಡುತ್ತಿವೆ. ನಮ್ಮ ಸರ್ಕಾರದ ವಿನೂತನ ಹಾಗೂ ದಿಟ್ಟ ಕ್ರಮಗಳಿಂದಾಗಿ ಹಲವು ಕ್ಷೇತ್ರಗಳಲ್ಲಿ ನಾವು ಯಶಸ್ಸನ್ನು ಸಾಧಿಸಿದ್ದೇವೆ.
7.ರಾಜ್ಯದಲ್ಲಿ ಹೊಸದಾಗಿ ತಂದ ಕೈಗಾರಿಕಾಭಿವೃದ್ಧಿ ಸುಗಮಗೊಳಿಸುವ ಕಾಯ್ದೆ (ಇಂಡಸ್ಟ್ರಿಯಲ್ ಫೆಸಿಲಿಟೇಷನ್ ಆಕ್ಟ್) ಮೂಲಕ ಉದ್ಯಮಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಅಲ್ಲದೆ, ಯುವ ಜನತೆಯಲ್ಲಿ ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ ಒದಗಿಸಲಾಗುತ್ತಿದೆ. ಜೊತೆಗೆ, ಉದ್ಯಮಿಗಳಿಗೆ ಅಗತ್ಯವಿರುವ ಭೂಮಿಯನ್ನು ಖರೀದಿಸುವುದಕ್ಕೆ ಪ್ರಸ್ತುತ ಇರುವ ನಿಯಮಾವಳಿಗಳನ್ನು ಸರಳೀಕರಿಸಲಾಗಿದೆ. ರೈತರು ಹಾಗೂ ಉದ್ಯಮಿಗಳಿಗೆ ಪರಸ್ಪರ ಲಾಭ ದೊರೆಯುವಂತೆ ಭೂಮಿಯನ್ನು ನೇರವಾಗಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
8.ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ರಾಜ್ಯಾದ್ಯಂತ ಉದ್ಯೋಗಾವಕಾಶಗಳನ್ನು ಸೃಜಿಸುವತ್ತ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ ಮರಳಿರುವವರಿಗೆ ಅವರು ಇರುವಲ್ಲಿಯೇ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಕಲ್ಪಿಸಲು ನಮ್ಮ ಸರ್ಕಾರ ಯೋಜನೆಗಳನ್ನು ರೂಪಿಸಿದೆ.
9.ಸವಾಲುಗಳ ಎದುರು ಹಿಮ್ಮೆಟ್ಟದೆ, ನಾವು ಪ್ರಗತಿಯತ್ತ ಧೃಡ ಹೆಜ್ಜೆಗಳನ್ನು ಇಟ್ಟಿದ್ದೇವೆ. ಸವಾಲುಗಳನ್ನು ಎದುರಿಸುವಲ್ಲಿ ಹಾಗೂ ಪ್ರಗತಿಯನ್ನು ಸಾಧಿಸುವಲ್ಲಿ ನಮ್ಮ ಸರ್ಕಾರದ ಅಚಲ ನಿರ್ಧಾರ ಹಾಗೂ ದೃಢ ಸಂಕಲ್ಪ ಅನಾವರಣಗೊಂಡಿದೆ ಎಂಬುದನ್ನು ತಾವೂ ಗಮನಿಸಿರುವಿರಿ.
10.ಸಮೃದ್ಧ ಕರ್ನಾಟಕ ನಿರ್ಮಿಸುವ ಸಂಕಲ್ಪದೊಂದಿಗೆ ಕಾರ್ಯೋನ್ಮುಖವಾದ ನಮ್ಮ ಸರ್ಕಾರ ಕಳೆದ ಒಂದು ವರ್ಷದಲ್ಲಿ ಹಲವು ಸಮಸ್ಯೆ ಮತ್ತು ಸವಾಲುಗಳ ನಡುವೆಯೂ ಪ್ರಗತಿ ಚಕ್ರವು ಚಲಿಸುವಂತೆ ನೋಡಿಕೊಂಡಿದೆ.
11.ದಾಖಲೆಯ ಮಳೆ ಮತ್ತು ಪ್ರವಾಹದ ಜೊತೆಗೆ ಬರ ಹಾಗೂ ಶತಮಾನದಲ್ಲೇ ಭಯಾನಕವಾದ ಸಾಂಕ್ರಾಮಿಕ ಪಿಡುಗು ಕೋವಿಡ್-19 ಬೃಹತ್ ಸವಾಲುಗಳನ್ನು ತಂದೊಡ್ಡಿದೆ. ಆರ್ಥಿಕ ಹಿಂಜರಿಕೆ, ಉದ್ಯೋಗ ಕಡಿತ ಹಾಗೂ ಬೊಕ್ಕಸಕ್ಕೆ ರಾಜಸ್ವ ನಷ್ಟ, ಸ್ಥಬ್ಧವಾದ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳಿಂದಾಗಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿ ಸ್ಥಾಪಿಸಲು ಹಾಗೂ ಸಂಕಷ್ಟಕ್ಕೆ ಈಡಾದ ಜನರಲ್ಲಿ ಭರವಸೆ ಮೂಡಿಸಲು ನಮ್ಮಸರ್ಕಾರ ಹಲವಾರು ಕ್ರಮ ಹಾಗೂ ಉಪಕ್ರಮಗಳನ್ನು ಜಾರಿಗೊಳಿಸಿದೆ. ಕಾಯಕವೇ ಕೈಲಾಸ ಎಂಬ ವಚನವನ್ನು ಕಾರ್ಯ-ಸಂಸ್ಕøತಿಯಲ್ಲಿ ಅಳವಡಿಸಿಕೊಂಡು, ಅದನ್ನೇ ಪಾಲಿಸಿಕೊಂಡು, “ಸರ್ಕಾರದ ಕೆಲಸ ದೇವರ ಕೆಲಸ” ಎಂಬುದನ್ನು ಪ್ರಾಮಾಣಿಕವಾಗಿ ಕಾರ್ಯರೂಪಕ್ಕೆ ತರುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದೇವೆ.
12.ಕೋವಿಡ್-19 ನಿರ್ವಹಣೆಗೆ ನಮ್ಮ ಸರ್ಕಾರ ಸಮರೋಪಾದಿಯಲ್ಲಿ ಶ್ರಮಿಸಿರುವುದಕ್ಕೆ ತಾವೆಲ್ಲರೂ ಸಾಕ್ಷಿಯಾಗಿರುವಿರಿ. ಸಚಿವರ ಕಾರ್ಯಪಡೆ, ಪರಿಣಿತ ವೈದ್ಯರ ಕಾರ್ಯಪಡೆ ಮತ್ತು ಅಧಿಕಾರಿಗಳ ಕಾರ್ಯಪಡೆಗಳನ್ನು ರಚಿಸಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲಾಗುತ್ತಿದೆ.
13.ರಾಜ್ಯದ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಆಸ್ಪತ್ರೆಗಳು, ಫಿವರ್ ಕ್ಲಿನಿಕ್ಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಸೋಂಕಿತರನ್ನು ಪತ್ತೆ ಮಾಡಿ ಪ್ರತ್ಯೇಕಗೊಳಿಸಲು ಕ್ವಾರಂಟೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ.
14.ಆಯುಷ್ಮಾನ್ ಭಾರತ ಯೋಜನೆಯಡಿ 1.31 ಕೋಟಿಗಿಂತಲೂ ಹೆಚ್ಚು ಜನರಿಗೆ ಆರೋಗ್ಯ ಕಾರ್ಡ್ಗಳನ್ನು ವಿತರಿಸಲಾಗಿದೆ ಹಾಗೂ 1694 ಕೋಟಿ ರೂ ವೆಚ್ಚದಲ್ಲಿ ಈವರೆಗೆ 8.5 ಲಕ್ಷ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ.
15.ಕೋವಿಡ್-19 ಆರಂಭಿಕ ಹಂತದಲ್ಲಿ ಸೋಂಕು ವ್ಯಾಪಿಸುವುದನ್ನು ತಡೆಗಟ್ಟಲು ಅನಿವಾರ್ಯವಾಗಿ ಲಾಕ್ಡೌನ್ ಘೋಷಿಸಲಾಯಿತು. ಲಾಕ್ಡೌನ್ನಿಂದಾಗಿ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಕ್ಷೀಣಗೊಂಡವು. ಆದರೆ, ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಒಂದೇ ಪರಿಹಾರವಲ್ಲ ಎಂಬ ಜಾಗತಿಕ ಉದಾಹರಣೆಗಳನ್ನು ಮನಗಂಡು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ಮುಖಗವಸು (ಮಾಸ್ಕ್) ಧರಿಸುವಿಕೆ, ಸೋಪಿನಿಂದ ಕೈತೊಳೆಯುವಿಕೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಿಕೆಯನ್ನು ಕಡ್ಡಾಯ ಮಾಡಿ ವಾಣಿಜ್ಯ ಚಟುವಟಿಕೆಗಳಿಗೆ ಮತ್ತೆ ಅನುವು ಮಾಡಿಕೊಡಲಾಗಿದೆ.
16.ಕೊರೊನಾ ಹಿನ್ನೆಲೆಯಲ್ಲಿ ಉದ್ದಿಮೆ, ವ್ಯಾಪಾರ ಮತ್ತು ವಹಿವಾಟುಗಳು ಸ್ಥಗಿತಗೊಂಡಾಗ ವಲಸೆ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರು, ರೈತರು, ಪುಷ್ಪೋದ್ಯಮವನ್ನು ಅವಲಂಬಿಸಿದವರು, ನೇಕಾರರು ಮತ್ತು ಮೀನುಗಾರರು, ನಿರ್ಮಾಣ ವಲಯದ ಕಾರ್ಮಿಕರು, ಕ್ಷೌರಿಕರು ಮತ್ತು ಅಗಸರು, ಟ್ಯಾಕ್ಸಿ ಚಾಲಕರು ಮತ್ತು ಆಟೋ ಚಾಲಕರೂ ಒಳಗೊಂಡಂತೆ ವಿವಿಧ ವೃತ್ತಿಗಳನ್ನು ನಂಬಿ ಬದುಕು ನಡೆಸುತ್ತಿದ್ದ ಅಸಂಘಟಿತ ವಲಯದ ದುರ್ಬಲರ ನೆರವಿಗಾಗಿ ಒಟ್ಟು 3187 ಕೋಟಿ ರೂ. ಪರಿಹಾರದ ಪ್ಯಾಕೇಜ್ ಘೋಷಿಸಲಾಗಿದೆ.
17.ಕೊರೋನ ನಿಯಂತ್ರಣಕ್ಕೆ ಶ್ರಮಿಸಿದ ಸರ್ಕಾರದ ಆಡಳಿತ ಯಂತ್ರ, ಸರ್ಕಾರೇತರ ಸಂಸ್ಥೆಗಳು, ಉದ್ಯಮಿಗಳು, ಸ್ವಯಂ ಸೇವಕರು ಹಾಗೂ ಈ ಕ್ಲಿಷ್ಟಕರ ಸನ್ನಿವೇಶದಲ್ಲಿ ಅವಿರತವಾಗಿ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಿದ ಪ್ರತಿಯೊಬ್ಬರನ್ನು ನಾನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ.
18.ವೈದ್ಯರು, ಶುಶ್ರೂಷಕರೂ ಒಳಗೊಂಡಂತೆ ಅರೆ ವೈದ್ಯಕೀಯ ಸೇವಾ ಸಿಬ್ಬಂದಿ ಹಾಗೂ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರವು ವಿಮಾ ಸೌಲಭ್ಯವನ್ನು ಘೋಷಿಸಿದೆ. ಕೋವಿಡ್-19 ರ ಕರ್ತವ್ಯನಿರತ ಅಂಗನವಾಡಿ ಕಾರ್ಯಕರ್ತರು, ಪೌರ ಕಾರ್ಮಿಕರು, ಪೊಲೀಸರು ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೊರೊನಾ ಸೇನಾನಿಗಳು ಎಂದು ಪರಿಗಣಿಸಿ ಅವರು ಕೋವಿಡ್ ಬಾಧಕರಾದಲ್ಲಿ ಉಚಿತ ಆರೈಕೆಯನ್ನು ಒದಗಿಸಲು ಮತ್ತು ಮೃತಪಟ್ಟಲ್ಲಿ ಅವರ ಕುಟುಂಬಸ್ಥರಿಗೆ 30 ಲಕ್ಷ ರೂ ಪರಿಹಾರವನ್ನು ನೀಡಲು ರಾಜ್ಯ ಸರ್ಕಾರದ ವತಿಯಿಂದ ನಿರ್ಧರಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ ಇವರೆಲ್ಲರ ಶ್ರಮ ಮತ್ತು ಪರಿಶ್ರಮವನ್ನು ನಾನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುತ್ತೇನೆ. ಗಡಿಗಳನ್ನು ಕಾಯುವ ಯೋಧರಷ್ಟೇ ಸಮರ್ಥವಾಗಿ ಕೊರೊನಾ ಸೇನಾನಿಗಳೂ ಶ್ರಮಿಸಿರುವುದು ನಾಡಿನ ಸಮಸ್ತ ಜನತೆಯ ಕೃತಜ್ಞತೆಗೂ ಪಾತ್ರವಾಗಿದೆ.
19.ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೈಗೊಂಡ ಕ್ರಮಗಳು, ಘೋಷಿಸಿದ ಪ್ಯಾಕೇಜ್ಗಳ ಜೊತೆಗೆ ನಮ್ಮ ರಾಜ್ಯ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮ ಹಾಗೂ ಪ್ರಕಟಿಸಲಾದ ಪ್ಯಾಕೇಜ್ಗಳು ಈ ಸಾಂಕ್ರಾಮಿಕ ರೋಗ ತಂದೊಡ್ಡಿದ ಸಂಕಷ್ಟಗಳ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿವೆ. ಆದರೆ, ಸಾರ್ವಜನಿಕರು ಜಾಗೃತಿ ವಹಿಸದಿದ್ದರೆ ಸರ್ಕಾರದ ಈ ಯಾವ ಕ್ರಮಗಳೂ ನಿರೀಕ್ಷಿತ ಫಲವನ್ನು ನೀಡುವುದಿಲ್ಲ. ಆದ್ದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿ, ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಸರ್ಕಾರದ ಜೊತೆಗೆ ಸಹಕರಿಸುವಂತೆ ರಾಜ್ಯದ ಜನತೆಯಲ್ಲಿ ಮನವಿ ಮಾಡುತ್ತೇನೆ.
20.ನಮ್ಮ ಕರ್ನಾಟಕದಲ್ಲಿ ಕೊರೊನಾ ಹಾವಳಿಯ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಮಾತ್ರವಲ್ಲದೆ, ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ) ಯನ್ನೂ ಯಶಸ್ವಿಯಾಗಿ ನಡೆಸಿದ್ದೇವೆ. ಕೋವಿಡ್-19 ದೃಢಪಟ್ಟಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದು ವಿಶೇಷ. ಕೇಂದ್ರ ಸರ್ಕಾರ ಹಾಗೂ ಇತರ ರಾಜ್ಯ ಸರ್ಕಾರಗಳು ಹಲವು ವಿಷಯಗಳಲ್ಲಿ ಕರ್ನಾಟಕದ ಮಾದರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅದನ್ನು ಅನುಕರಿಸಿವೆ ಎಂಬುದು ನಮ್ಮ ಹೆಮ್ಮೆ. ರಾಜ್ಯದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ಗ್ರಾಮೀಣ ವಿದ್ಯಾರ್ಥಿಗಳಿಗೂ ಆನ್ಲೈನ್ ಶಿಕ್ಷಣ ಲಭ್ಯವಾಗಿಸಲು ಶಿಕ್ಷಣ ಇಲಾಖೆ ಶ್ರಮಿಸುತ್ತಿದೆ. ವಿದ್ಯಾಗಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಮನೆಯಂಗಳಕ್ಕೆ ಶಿಕ್ಷಕರು ಆಗಮಿಸಿ ಕಲಿಕೆಗೆ ತೊಂದರೆಯಾಗದಂತೆ ಶ್ರಮವಹಿಸುತ್ತಿದ್ದಾರೆ.
21.ನೇಗಿಲ ಯೋಗಿ ಅನ್ನದಾತನ ರಕ್ಷಣೆ ನಮ್ಮ ಸರ್ಕಾರದ ಪ್ರಥಮ ಆದ್ಯತೆ. ಭಾರತ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ 6,000 ರೂ. ನಗದು ನೆರವಿನ ಜೊತೆಗೆ ನಮ್ಮ ಸರ್ಕಾರವು ಹೆಚ್ಚುವರಿಯಾಗಿ 4,000 ರೂ. ಆರ್ಥಿಕ ನೆರವಿನ 2000 ರೂ.ಗಳ ಮೊದಲ ಕಂತನ್ನು ಈಗಾಗಲೇ ಬಿಡುಗಡೆಮಾಡಿದೆ. ಒಂದು ಸಾವಿರ ಕೋಟಿ ರೂ. ಮೊತ್ತವನ್ನು ಸುಮಾರು 50 ಲಕ್ಷ ರೈತರ ಖಾತೆಗಳಿಗೆ ಮೊದಲ ಕಂತಿನಲ್ಲಿ ಜಮಾ ಮಾಡಲಾಗುತ್ತಿದೆ.
22.ರಾಜ್ಯದಲ್ಲಿ 10 ಲಕ್ಷ ರೈತರಿಗೆ 6500 ಕೋಟಿ ರೂ. ಬೆಳೆ ಸಾಲ ನೀಡಿದ್ದು, 2020-21 ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಅರ್ಹ ರೈತರಿಗೆ ಸಾಲ ದೊರೆಯಬೇಕೆಂಬ ನಿಟ್ಟಿನಲ್ಲಿ 14.50 ಸಾವಿರ ಕೋಟಿ ರೂಪಾಯಿ ಬೆಳೆ ಸಾಲವನ್ನು ನೀಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.
23.ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರು ಉತ್ಪಾದಿಸಿದ 3175 ಕೋಟಿ ರೂ. ಮೌಲ್ಯದ ಹೆಸರುಕಾಳು, ತೊಗರಿ, ಶೇಂಗಾ, ಕಡಲೆಕಾಳು, ಕೊಬ್ಬರಿ ಇತ್ಯಾದಿ ಉತ್ಪನ್ನಗಳನ್ನು ಸುಮಾರು 5.82 ಲಕ್ಷ ರೈತರಿಂದ ಖರೀದಿಸಿ ಬೆಲೆ ಕುಸಿತದ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಸರ್ಕಾರ ರೈತರ ನೆರವಿಗೆ ಧಾವಿಸಿದೆ.
24.ಕೃಷಿ ಆರ್ಥಿಕತೆಯ ಬೆನ್ನೆಲುಬಾಗಿರುವ ಸಹಕಾರ ವಲಯದಲ್ಲಿ ಸರ್ಕಾರ ಮಹತ್ತರ ಬದಲಾವಣೆಗಳನ್ನು ತಂದಿದೆ. ರೈತರು ತಾವು ಬೆಳೆದ ಬೆಳೆಗಳನ್ನು ತಮ್ಮ ಇಚ್ಚೆಯಂತೆ ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನೀತಿಯಲ್ಲಿ ಮಾರ್ಪಾಡು ತರಲಾಗಿದೆ. ಇದಲ್ಲದೆ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಉತ್ಪನ್ನಗಳಿಗೆ ವಿಧಿಸುತ್ತಿದ್ದ ಮಾರಾಟ ಕರ (ಶುಲ್ಕ) ವನ್ನು ಶೇಕಡಾ 1.50 ರಿಂದ ಶೇಕಡಾ 0.35 ಕ್ಕೆ ಇಳಿಸಿದ್ದೇವೆ. ಈ ಎರಡೂ ಕ್ರಮಗಳಿಂದ ತಾವು ಬೆಳೆದ ಬೆಳೆಗಳಿಗೆ ರೈತರಿಗೆ ನ್ಯಾಯಯುತ ಬೆಲೆ ದೊರೆಯಲಿದೆ ಹಾಗೂ ಆದಾಯವೂ ಹೆಚ್ಚಾಗಲಿದೆ.
25.ಅಂತರ್ಜಲ ನೀರಿನ ಸುಸ್ಥಿರ ನಿರ್ವಹಣೆಯಲ್ಲಿ ಬೇಡಿಕೆ ಹಾಗೂ ಸರಬರಾಜು ನಿರ್ವಹಣೆಗೆ ಸಮುದಾಯ ಸಹಭಾಗಿತ್ವದಲ್ಲಿ ಒತ್ತು ನೀಡುವ ಅಟಲ್ ಭೂ ಜಲ್ ಯೋಜನೆಯನ್ನು ರಾಜ್ಯದಲ್ಲಿ 1200 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ. ರಾಜ್ಯದ 14 ಜಿಲ್ಲೆಗಳ 41 ತಾಲ್ಲೂಕುಗಳ 1,199 ಗ್ರಾಮ ಪಂಚಾಯತಿಗಳಲ್ಲಿ 39,703 ಚದರ ಕಿ.ಮೀ ಪ್ರದೇಶವು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಮೊಟ್ಟಮೊದಲ ಬಾರಿಗೆ ಅನುಷ್ಠಾನಗೊಳಿಸುತ್ತಿರುವ ರಾಜ್ಯ ನಮ್ಮ ಕರ್ನಾಟಕ. ಕೇಂದ್ರ ಸರ್ಕಾರ ಇದನ್ನು ಪ್ರಶಂಸಿಸಿದೆ. ಅಂತೆಯೇ, ವಿಶ್ವ ಬ್ಯಾಂಕ್ ಕೂಡಾ ಕರ್ನಾಟಕ ರಾಜ್ಯ ಸರ್ಕಾರದ ಈ ಪ್ರಯತ್ನಕ್ಕೆ ಅಭಿನಂದನಾ ಪತ್ರ ನೀಡಿದೆ.
26.ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಿಸಿ ಸಮಗ್ರ ಕರ್ನಾಟಕದ ಅಭಿವೃದ್ಧಿ ಮಾಡುವುದು ನಮ್ಮ ಸರ್ಕಾರದ ಆಶಯ. ಈ ಹಿನ್ನೆಲೆಯಲ್ಲಿ ಸಂವಿಧಾನದ ಪರಿಚ್ಛೇದ 371 (ಜೆ) ಅನ್ವಯ ವಿಶೇಷ ಸ್ಥಾನಮಾನ ಪಡೆದಿರುವ ಹೈದರಾಬಾದ್–ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಗಿದೆ. ಕೇವಲ ಹೆಸರು ಬದಲಾವಣೆ ಮಾತ್ರವಲ್ಲ; ಈ ಭಾಗದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲು ಪೂರಕವಾಗುವಂತೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕøತಿಕ ಸಂಘವನ್ನು ಆರಂಭಿಸಲಾಗಿದೆ. ಈ ಸಂಘಕ್ಕೆ 500 ಕೋಟಿ ರೂ. ಅನುದಾನದ ಯೋಜನೆಗಳನ್ನು ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
27.ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ರಾಜ್ಯದಲ್ಲಿ ಕಲಬುರಗಿ, ಬೀದರ್ ವಿಮಾನ ನಿಲ್ದಾಣಗಳು ಕಾರ್ಯಾರಂಭ ಮಾಡಿವೆ. ಇದಲ್ಲದೆ, ಶಿವಮೊಗ್ಗ ಕಿರು ವಿಮಾನ ನಿಲ್ದಾಣ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ಕಾರವಾರ ಹಾಗೂ ವಿಜಯಪುರ ವಿಮಾನ ನಿಲ್ದಾಣಗಳ ಕಾಮಗಾರಿಗಳನ್ನು ಆರಂಭಿಸಲು ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
28.ಉದ್ಯೋಗ ಸೃಷ್ಟಿ ಮಾಡುವ ಪ್ರಮುಖ ವಲಯವಾದ ಪ್ರವಾಸೋದ್ಯಮವನ್ನು ಬಲಪಡಿಸಲು ಕರ್ನಾಟಕ ಪ್ರವಾಸೋದ್ಯಮ ಕಾರ್ಯಪಡೆಯನ್ನು ರಚಿಸಲಾಗಿದೆ. ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ವಿನೂತನ ಯೋಜನೆಗಳನ್ನು ರೂಪಿಸಲಾಗಿದೆ.
29.ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು, ತ್ಯಾಜ್ಯ ವಿಲೇವಾರಿ, ಅಭಿವೃದ್ಧಿಯ ಪ್ರತೀಕವಾದ ಅತ್ಯುತ್ತಮ ರಸ್ತೆಗಳನ್ನು ನಿರ್ಮಿಸುವುದು ನಮ್ಮ ಆದ್ಯತೆಯಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯಿದೆ ಯೋಜನೆಯಡಿ ಪ್ರಸಕ್ತ ಸಾಲಿನ ಏಪ್ರಿಲ್ 1 ರಿಂದ ಈವರೆಗೆ 7.06 ಕೋಟಿ ಮಾನವ ದಿನಗಳನ್ನು ಸೃಜಿಸಿ, 1856 ಕೋಟಿ ರೂ ವೇತನವನ್ನು ಪಾವತಿಸಲಾಗಿದೆ. ಏಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ಒಟ್ಟು 3.73 ಲಕ್ಷ ಕುಟುಂಬಗಳಿಗೆ ಹೊಸ ಜಾಬ್ ಕಾರ್ಡ್ ನೀಡಲಾಗಿದೆ. ಪ್ರಸಕ್ತ ವರ್ಷದ ಗುರಿಯಲ್ಲಿ ಶೇಕಡಾ 53 ರಷ್ಟು ಸಾಧನೆ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ದಾಖಲಾಗಿದೆ.
30.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ನಾಡಿನ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ದೊರಕಬೇಕು. ಯಾರೂ ಸವಲತ್ತುಗಳಿಂದ ವಂಚಿತರಾಗಬಾರದು ಎನ್ನುವ ಆಶಯ ನಮ್ಮ ಸರ್ಕಾರದ್ದು. ನಾಡಿನ ಕಾನೂನು ಹಾಗೂ ಸುವ್ಯವಸ್ಥೆಗೆ ಕ್ರಮ ವಹಿಸಲಾಗಿದ್ದು, ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ವಿವಿಧ ಕ್ರಮಗಳನ್ನು ಕೈಗೊಂಡು ಅಪರಾಧ ನಿಯಂತ್ರಣ, ಸೈಬರ್ ಅಪರಾಧಗಳ ತಡೆಗೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ.
31.ವಿಶ್ವ ವಿಖ್ಯಾತಿ ಪಡೆದಿರುವ ‘ಉದ್ಯಾನನಗರಿ’ಯಲ್ಲಿ ಮೂಲಭೂತ ಸೌಕರ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಾಮಾಜಿಕ ಮತ್ತು ಜೈವಿಕ ಮೂಲಭೂತ ಸೌಲಭ್ಯಗಳ ಪುನಶ್ಚೇತನಕ್ಕೆ ವಿನೂತನ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ 400 ಕಿ.ಮೀ ಉದ್ದದ ರಾಜಕಾಲುವೆಗಳಿದ್ದು, ಈ ನೀರ್ಗಾಲುವೆಗಳ ಹಸಿರೀಕರಣ, ಇದರ ಇಕ್ಕೆಲಗಳಲ್ಲಿ ಪಾದಚಾರಿ ಮತ್ತು ಬೈಸಿಕಲ್ ಪಥ ನಿರ್ಮಾಣಕ್ಕೆ ಯೋಜನೆಗಳನ್ನು ರೂಪಿಸಲಾಗಿದೆ. ಮೊದಲನೇ ಹಂತದಲ್ಲಿ ಧರ್ಮಾಂಬುಧಿ ಕೆರೆಯಿಂದ (ಪ್ರಸ್ತುತ ಕೆಂಪೇಗೌಡ ಬಸ್ ನಿಲ್ದಾಣ) ಬೆಳ್ಳಂದೂರು ಕೆರೆವರೆಗೆ ಪಾರಂಪರಿಕ ರಾಜ ಕಾಲುವೆಯ ಹಸಿರೀಕರಣ ಮಾಡಿ 36 ಕಿ.ಮೀ. ಉದ್ದದ ಕಾಲ್ನಡಿಗೆ ಹಾಗೂ ಬೈಸಿಕಲ್ ಪಥ ನಿರ್ಮಾಣ ಮಾಡುವ ಮೂಲಕ ನಗರದ ಸಾಮಾಜಿಕ ಮತ್ತು ಸಾಂಸ್ಕøತಿಕ ಸೌಂದರ್ಯಗಳನ್ನು ಉತ್ತಮಪಡಿಸಲು ಉದ್ದೇಶಿಸಲಾಗಿದೆ.
32.ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಎನ್.ಜಿ.ಇ.ಎಫ್. ಸಂಸ್ಥೆಗೆ ಸೇರಿದ 110 ಎಕರೆ ಭೂಮಿಯನ್ನು ಗುರುತಿಸಿದ್ದು, ಈ ಪ್ರದೇಶ ವ್ಯಾಪ್ತಿಯಲ್ಲಿ ಜನಸ್ನೇಹಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಜೈವಿಕ ವೈವಿಧ್ಯತೆಯುಳ್ಳ ಸಸ್ಯ ಸಂಕುಲವನ್ನು ಬೆಳೆಸಲಾಗುವುದು. ಇದಲ್ಲದೆ, ಆಹಾರ ಮಳಿಗೆಗಳು, ಪಾರಂಪರಿಕ ಕಾಟೇಜ್ ಉದ್ಯಮ, ಮಕ್ಕಳ ಮನರಂಜನೆಗಾಗಿ ಫನ್ ಪಾರ್ಕ್, ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಹಾಗೂ ಮಾರಾಟಕ್ಕೆ ಸ್ಥಳಾವಕಾಶವನ್ನೂ ಒದಗಿಸುವ ಯೋಜನೆಗಳನ್ನು ಒಳಗೊಂಡಿರುತ್ತದೆ.
33.ಜಾಗತಿಕ ಮಟ್ಟದಲ್ಲಿ ಬೆಂಗಳೂರು ಹೂಡಿಕೆದಾರರ ಆಸಕ್ತಿಯ ಕೇಂದ್ರವಾಗಿದೆ. ರಾಜಧಾನಿಯ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಬೆಂಗಳೂರು ಸಬ್-ಅರ್ಬನ್ ರೈಲ್ವೆ ಯೋಜನೆಗೆ ವೇಗ ಹೆಚ್ಚಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2 ನ್ನು ಒಟ್ಟು 30,695 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಿದ್ದು, 2024ರ ಜೂನ್ ವೇಳೆಗೆ ಪೂರ್ಣಗೊಳಿಸುವ ನಿರೀಕ್ಷೆಯಿದೆ.
34.ನಮ್ಮ ರಾಜ್ಯ ಸರ್ಕಾರದ ಎಲ್ಲಾ ಪ್ರಯತ್ನಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಹಕಾರ ಮತ್ತು ಸಹಾಯ, ಬೆಂಬಲ ಹಾಗೂ ಪ್ರೋತ್ಸಾಹ ಎಂದಿನಂತೆ ಮುಂದುವರೆದಿದೆ. ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆ ಭರವಸೆಯ ಹೊಂಗಿರಣವಾಗಿದೆ. ಪ್ರಧಾನಿ ಮೋದಿಯವರು ಹೇಳಿದಂತೆ ಸವಾಲುಗಳನ್ನು ಅವಕಾಶವನ್ನಾಗಿ ಪರಿವರ್ತಿಸಲು ಕರ್ನಾಟಕವು ದಿಟ್ಟ ಹೆಜ್ಜೆಯನ್ನಿಟ್ಟಿದೆ. ಪಿಪಿಇ ಕಿಟ್ಗಳ ಉತ್ಪಾದನೆಯಿಂದ ಹಿಡಿದು ಸ್ಥಳೀಯ ಉದ್ಯಮಗಳಿಗೆ ಉತ್ತೇಜನ ನೀಡುವುದು, ಸೌರ ವಿದ್ಯುತ್. ಆಟೋ ಮೊಬೈಲ್ ಹೀಗೆ ವಿವಿಧವಲಯಗಳಲ್ಲಿ ಸ್ವಾವಲಂಬಿಯಾಗುವ ಗುರಿ ಸಾಧಿಸುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶ.
35.ಕೃಷಿ ವಲಯಕ್ಕೆ ಪ್ರಥಮ ಆದ್ಯತೆ ನೀಡಲಾಗಿದ್ದು, ದೇಶೀಯ ಉತ್ಪನ್ನಗಳಿಗೆ ಆದ್ಯತೆ ನೀಡುವ ಜೊತೆಜೊತೆಗೆ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೂ ಪಣತೊಟ್ಟಿದೆ. ಸ್ಥಳೀಯ ಜನತೆಗೆ ಉದ್ಯೋಗವಕಾಶಗಳು ಹೆಚ್ಚಬೇಕು. ಉತ್ಪನ್ನಗಳ ಆಮದು ಕಡಿಮೆಯಾಗಿ ಸ್ವಾವಲಂಬಿತ್ವ ಹೆಚ್ಚಬೇಕು. ಆತ್ಮನಿರ್ಭರ ಯೋಜನೆಗಳನ್ನು ಸಾಕಾರಗೊಳಿಸುವತ್ತ ಯುವಜನತೆ, ಸ್ಥಳೀಯ ಸಂಘಸಂಸ್ಥೆಗಳು ಕೈಜೋಡಿಸಬೇಕು. ಸ್ವಾವಲಂಬಿ ಭಾರತ ನಿರ್ಮಾಣದ ವೇಳೆ ಅದರಲ್ಲಿ ಕರ್ನಾಟಕದ ಹೆಜ್ಜೆ ಮೂಡಬೇಕೆಂಬುದೇ ನನ್ನ ಆಶಯ.
36.ಸ್ವಿಟ್ಜೆರ್ಲೆಂಡಿನ ದಾವೋಸ್ನಲ್ಲಿ ನಡೆದ ವಲ್ರ್ಡ್ ಎಕನಾಮಿಕ್ ಫೋರಂ ಸಮಾವೇಶದಲ್ಲಿ 40 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ರಾಜ್ಯದಲ್ಲಿ ಹೂಡಿಕೆ ಮಾಡಲು ಮನವೊಲಿಸಲಾಗಿದೆ. ತದನಂತರ, ಕೋವಿಡ್-19 ಸಮಯದಲ್ಲೂ ಸಹ ರಾಜ್ಯಮಟ್ಟದಲ್ಲಿ 27,000 ಕೋಟಿ ರೂ ಮೊತ್ತದ, 101 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
37.ರಾಜ್ಯದಲ್ಲಿ ಮಳೆ ಹೆಚ್ಚಾಗಿದ್ದು, ಹಲವೆಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪ್ರವಾಹ ಪೀಡಿತ ಕುಟುಂಬಗಳಿಗೆ ತುರ್ತಾಗಿ ಸ್ಪಂದಿಸಲು ಈಗಾಗಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಸಂತ್ರಸ್ತ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ
10,000/- ರೂ.ಗಳು, ಪೂರ್ಣ ಮನೆ ಹಾನಿಯಾಗಿದ್ದರೆ ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ರೂ.ಗಳನ್ನು ವಿತರಿಸಲು ಆದೇಶಿಸಲಾಗಿದೆ. ವಿಪತ್ತು ಪರಿಹಾರ ನಿಧಿಯಡಿ ನೆರೆ ಸಂತ್ರಸ್ತರಿಗೆ ಸೂಕ್ತ ಹಾಗೂ ತುರ್ತು ಪರಿಹಾರವನ್ನು ನೀಡಲು ಸೂಚಿಸಲಾಗಿದೆ. ಕೊಡಗು, ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕ ಸೇರಿದಂತೆ ಸುಮಾರು 11 ಜಿಲ್ಲೆಗಳು ಪ್ರವಾಹಪೀಡಿತವಾಗಿದ್ದು, ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಒಟ್ಟು 984 ಕೋಟಿ ರೂ ಅನುದಾನ ಲಭ್ಯವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿಯೇ ವಾಸ್ತವ್ಯ ಹೂಡಿ ಪರಿಸ್ಥಿತಿಯ ಅವಲೋಕನ ಹಾಗೂ ನಿರ್ವಹಣೆಯಲ್ಲಿ ನಿರತರಾಗಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಇತರ ಇಲಾಖಾ ಅಧಿಕಾರಿಗಳು ಮಳೆ ಮತ್ತು ಪ್ರವಾಹದ ಸಂಕಷ್ಟಕೊಳಗಾಗಿರುವ ಜನರ ರಕ್ಷಣೆಗೆ ಶ್ರಮಿಸುತ್ತಿದ್ದಾರೆ. ನಾನು ಅವಿರತವಾಗಿ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ.
38.ಕಳೆದ ವರ್ಷ ಇದೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಅಭ್ಯುದಯಕ್ಕೆ ನಾಂದಿ ಹಾಡಿದ ಐತಿಹಾಸಿಕ ನಿರ್ಣಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತೆಗೆದುಕೊಂಡಿದ್ದರು. ಈ ವರ್ಷ ಅದೇ ದಿನಾಂಕದಂದು ಅಂದರೆ ಆಗಸ್ಟ್ 5 ರಂದು ಮತ್ತೊಂದು ಚಾರಿತ್ರಿಕ ಹೆಜ್ಜೆಯನ್ನು ಅವರು ಇರಿಸಿದ್ದಾರೆ. ಶತಮಾನಗಳ ನಂತರ ಕಾನೂನಾತ್ಮಕವಾಗಿ ಮತ್ತು ಸೌಹಾರ್ದಯುತವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಅಯೋಧ್ಯೆಯಲ್ಲಿ ರಾಜ್ಯದ ಯಾತ್ರಿಕರಿಗಾಗಿ ಕರ್ನಾಟಕ ಯಾತ್ರಿ ನಿವಾಸವನ್ನು ನಿರ್ಮಿಸಲಾಗುವುದು.
39.ಸರ್ವೇ ಜನ ಸುಖಿನೋ ಭವಂತು ಎಂಬಂತೆ ಜೀವಜಗತ್ತಿನ ಸಂರಕ್ಷಣೆಯೊಂದಿಗೆ ರಾಜ್ಯದ ಪ್ರಗತಿ ಚಕ್ರವನ್ನು ಮುನ್ನಡೆಸುವ ಸಂಕಲ್ಪ ನಮ್ಮದು. ಬದುಕನ್ನು ಮುನ್ನಡೆಸುವ ವೇಳೆ ಸವಾಲುಗಳನ್ನು ಎದುರಿಸಿ ಬದುಕು ರೂಪಿಸುವಲ್ಲಿ ಎಲ್ಲರ ಸಹಕಾರವನ್ನು ಕೋರುತ್ತೇನೆ.
40.ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕದ ಗಮನಾರ್ಹ ಕೊಡುಗೆಯೊಂದಿಗೆ ವಿಶ್ವದಲ್ಲಿ ನಮ್ಮ ಭಾರತದ ಹೆಸರನ್ನು ಪ್ರಜ್ವಲಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂಬ ಕಳಕಳಿಯ ಮನವಿಯೊಂದಿಗೆ ತಮ್ಮೆಲ್ಲರಿಗೂ ಮತ್ತೊಮ್ಮೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಲು ಇಚ್ಛಿಸುತ್ತೇನೆ.
ಜೈ ಹಿಂದ್ ! ಜೈ ಕರ್ನಾಟಕ !!
* * * * * * *
Related Articles
Thank you for your comment. It is awaiting moderation.
Comments (0)