ಬಿಜೆಪಿಗೆ ಬಿಸಿ ತುಪ್ಪವಾದ ಜಮಖಂಡಿ ಅಭ್ಯರ್ಥಿ ಆಯ್ಕೆ!

ಬೆಂಗಳೂರು: ಐದು ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರ ರಾಜ್ಯ ಬಿಜೆಪಿಯಲ್ಲೂ ಕಗ್ಗಂಟು ಸೃಷ್ಟಿಸಿದೆ. ಅದರಲ್ಲೂ ಜಮಖಂಡಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಇಬ್ಬರು ಪ್ರಭಾವಿಗಳ ಮಧ್ಯೆ ಫೈಟ್ ನಡೀತಿದೆ. ಹೀಗಾಗಿ ಇವತ್ತು ಜಮಖಂಡಿ ಕ್ಷೇತ್ರದ ಮುಖಂಡರ ಜೊತೆ ಯಡಿಯೂರಪ್ಪ ಸಭೆ ನಡೆಸಿ ಚರ್ಚಿಸಿದ್ರು. ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಿದೆ.

ರಾಜ್ಯ ಬಿಜೆಪಿಯಲ್ಲಿ ಈಗ ಚುನಾವಣಾ ಜಪ ಕಾಣಿಸಿಕೊಂಡಿದೆ. ಸರಕಾರ ರಚಿಸುವ ವಿಫಲ ಪ್ರಯತ್ನದ ಬಳಿಕ ಇದೀಗ ಐದು ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸುವ ಛಲ ಬಿಜೆಪಿಗೆ ಬಂದುಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿಯಲ್ಲಿ ಕಸರತ್ತು ಶುರುವಾಗಿದೆ. ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ತಮ್ಮ ಬೆಂಗಳೂರಿನ ಧವಳಗಿರಿ ನಿವಾಸದಲ್ಲಿ ಜಮಖಂಡಿ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಜೊತೆ ಸಭೆ ನಡೆಸಿದ್ರು. ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿಗೆ ಈ ಸಲವೂ ಟಿಕೆಟ್ ಕೊಡಬೇಕೆಂದು ಕ್ಷೇತ್ರದ ಮುಖಂಡರು ಯಡಿಯೂರಪ್ಪರಿಗೆ ಒತ್ತಾಯಿಸಿದ್ರು..

ಜಮಖಂಡಿ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವೇರ್ಪಟ್ಟಿದೆ. ಜಮಖಂಡಿ ಟಿಕೆಟ್​ಗಾಗಿ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಸಹೋದರ ಸಂಗಮೇಶ ನಿರಾಣಿ ಮಧ್ಯೆ ಫೈಟ್​ ನಡೆಯುತ್ತಿದೆ. ಹೀಗಾಗಿ ಅಲ್ಲಿ ಟಿಕೆಟ್ ಯಾರಿಗೆ ಸಿಗುತ್ತೆ ಎಂಬ ಬಗ್ಗೆ ನಾಯಕರು ಇನ್ನೂ ತೀರ್ಮಾನ ಕೈಗೊಂಡಿಲ್ಲ. ಮೂಲಗಳ ಪ್ರಕಾರ ಶ್ರೀಕಾಂತ್ ಕುಲಕರ್ಣಿಗೆ ಜಮಖಂಡಿ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇನ್ನು ರಾಮನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಶ್ ರ ಹೆಸರು ಬಲವಾಗಿ ಕೇಳಿಬರ್ತಿದೆ. ಈ ಕುರಿತು ನಾಡಿದ್ದು ನಡೆಯುವ ಪಕ್ಷದ ಕೋರ್​ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ..

ಇನ್ನು ಮಂಡ್ಯ ಲೋಕಸಭೆ ಕ್ಷೇತ್ರದ ಉಪಚುನಾವಣೆಗಾಗಿ ಮಾಜಿ ಡಿಸಿಎಂ ಆರ್.ಅಶೋಕ್​ ಆಪರೇಷನ್ ಕಮಲ ನಡೆಸ್ತಿದ್ದಾರೆಂಬ ಸುದ್ದಿ ಹಬ್ಬಿದೆ. ಕಾಂಗ್ರೆಸ್​ನಲ್ಲಿರುವ ಚೆಲುವರಾಯಸ್ವಾಮಿ, ಬಾಲಕೃಷ್ಣ, ಪರಿಷತ್ ಸದಸ್ಯ ಸಿ.ಪಿ.ಲಿಂಗಪ್ಪ ಪುತ್ರ ಚಂದ್ರಶೇಖರ್​ರನ್ನು ಪಕ್ಷಕ್ಕೆಳೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಪೈಕಿ ಯಾರು ಬಂದರೂ ಟಿಕೆಟ್ ಕೊಟ್ಟು ಜೆಡಿಎಸ್​ ಅಭ್ಯರ್ಥಿ ವಿರುದ್ಧ ಕಣಕ್ಕಿಳಿಸುವ ಸಾಧ್ಯತೆಯೂ ಇದೆ. ಇನ್ನುಳಿದ ಎರಡು ಲೋಕಸಭೆ ಕ್ಷೇತ್ರಗಳ ಉಪಚುನಾವಣೆಗೆ ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಾಸಕ ಶ್ರೀರಾಮುಲು ಸಹೋದರಿ ಜೆ.ಶಾಂತಾ, ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಬಿಎಸ್​ವೈ ಪುತ್ರ ಬಿ.ವೈ.ರಾಘವೇಂದ್ರರಿಗೂ ಟಿಕೆಟ್ ನಿಕ್ಕಿಯಾಗಿದೆ. ಈ ಕುರಿತು ನಾಡಿದ್ದು ನಡೆಯುವ ಪಕ್ಷದ ಕೋರ್​ಕಮಿಟಿ ಸಭೆ ಬಳಿಕ ಪ್ರಕಟಿಸಲಾಗುತ್ತದೆ. ಒಟ್ಟಿನಲ್ಲಿ ಮೈತ್ರಿ ಪಕ್ಷಗಳಿಗೆ ತಿರುಗೇಟು ಕೊಡಲು ಬಿಜೆಪಿ ತಕ್ಕ ಚುನಾವಣಾ ತಂತ್ರವನ್ನೇ ಹೆಣೆಯುತ್ತಿದೆ..

Related Articles

Comments (0)

Leave a Comment