ಮುಂದಿನ ಬಜೆಟ್ ನಲ್ಲಿ ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಕಾರ್ಯಕ್ರಮ: ಮಧು ಬಂಗಾರಪ್ಪ

ಬೆಂಗಳೂರು:ಗ್ರಾಮೀಣ ಕರ್ನಾಟಕದ ಸರ್ಕಾರಿ ಪಿಯು ಕಾಲೇಜಿನಿಂದ ಐಐಟಿ ಖರಗ್‌ಪುರ್‌ವರೆಗೆ ಸಂಕೇತ್ ರಾಜ್ ಪಯಣಕ್ಕೆ ಸಂತಸ ವ್ಯಕ್ತಪಡಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಸಂಕೇತ್ ಅಂಥವರ ಯಶಸ್ಸಿನ ಕಥೆಗಳಿಂದ ಸ್ಫೂರ್ತಿ ಪಡೆದು, ಮುಂದಿನ ಬಜೆಟ್‌ನಲ್ಲಿ ಕನಿಷ್ಠ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ಕಾರ್ಯಕ್ರಮ/ಉಪಕ್ರಮ ಹೆಚ್ಚಿಸಲು ಯೋಜಿಸಲಾಗಿದೆ ಎಂದು ಪ್ರಕಟಿಸಿದರು.

ದೃಢಸಂಕಲ್ಪ, ಅವಕಾಶ ಮತ್ತು ಸಾರ್ವಜನಿಕ ಶಿಕ್ಷಣದ ಶಕ್ತಿಗೆ ಅದ್ಭುತ ಮಾದರಿಯಾಗಿ, ಗೌರಿಬಿದನೂರಿನ ಸರ್ಕಾರಿ ಎಸ್‌ಎಸ್‌ಇಎ ಪಿಯು ಕಾಲೇಜಿನ ವಿದ್ಯಾರ್ಥಿ ಎನ್. ಸಂಕೇತ್ ರಾಜ್, ಭಾರತದ ಪ್ರತಿಷ್ಠಿತ ಇಂಜಿನಿಯರಿಂಗ್ ಸಂಸ್ಥೆಯಾದ ಐಐಟಿ ಖರಗ್‌ಪುರ್‌ನ ಬಿ.ಟೆಕ್ ಗೆ ಪ್ರವೇಶ ಪಡೆದಿದ್ದಾರೆ.

ವಿದ್ಯಾರ್ಥಿ ಸಂಕೇತ್‌ನ ಈ ಸಾಧನೆ ಕೇವಲ ವೈಯಕ್ತಿಕ ಮೈಲಿಗಲ್ಲು ಮಾತ್ರವಲ್ಲ, ದೂರದೃಷ್ಟಿ ಮತ್ತು ಬೆಂಬಲದೊಂದಿಗೆ ಗುಣಮಟ್ಟದ ಸರ್ಕಾರಿ ಶಿಕ್ಷಣ ಏನನ್ನು ನೀಡಬಲ್ಲದು ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.

ಶಿಕ್ಷಣದ ಹಿನ್ನಲೆಯುಳ್ಳ ಕುಟುಂಬದಲ್ಲಿ ಜನಿಸಿದ ಸಂಕೇತ್‌ನ ಇಬ್ಬರೂ ಪಾಲಕರು ಸರ್ಕಾರಿ ಶಾಲಾ ಶಿಕ್ಷಕರು. ಕಲಿಕೆಯ ಬಗ್ಗೆ ಆಳವಾದ ಆಸಕ್ತಿಯಿಂದ ಬೆಳೆದು, ಸಂಪೂರ್ಣ ಶೈಕ್ಷಣಿಕ ಪಯಣವನ್ನು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೂಲಕ ಮುಂದುವರಿಸಲು ನಿರ್ಧರಿಸಿದ‌ ಸಂಕೇತ್, ಸರ್ಕಾರಿ ಎಸ್‌ಎಸ್‌ಇಎ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡರು.

ಸರ್ಕಾರಿ ಕಾಲೇಜಿನ ಬಲವಾದ ಶೈಕ್ಷಣಿಕ ವಾತಾವರಣ, ಅಧ್ಯಾಪಕರು ಮತ್ತು ಪೋಷಕ ವಾತಾವರಣದಿಂದ ಆಕರ್ಷಿತರಾಗಿದ್ದರು. ಅನೇಕ ಖಾಸಗಿ ಕಾಲೇಜುಗಳಲ್ಲಿನ ಒತ್ತಡಮಯ ವಾತಾವರಣಕ್ಕೆ ವ್ಯತಿರಿಕ್ತವಾಗಿ, ಸಂಕೇತ್ ಎಸ್‌ಎಸ್‌ಇಎ ಕಾಲೇಜಿನ ಸಮತೋಲಿತ ಮತ್ತು ಉತ್ತೇಜಕ ಕಲಿಕಾ ಸ್ಥಳವನ್ನು ಯಶಸ್ಸಿಗೆ ಪ್ರಮುಖ ಅಂಶವೆಂದು ಎತ್ತಿ ತೋರಿಸಿದ್ದಾರೆ.

ಸರ್ಕಾರಿ ಯೋಜನೆಯಿಂದ ಲಾಭ:

ಸಂಕೇತ್ ದ್ವಿತೀಯ ಪಿಯು ಮಾಡುತ್ತಿದ್ದ ಸಂದರ್ಭದಲ್ಲಿ ಕಾಲೇಜನ್ನು ಕರ್ನಾಟಕ ಸರ್ಕಾರದ ಆದರ್ಶ ವಿಜ್ಞಾನ ಪಿಯು ಕಾಲೇಜು ಯೋಜನೆಯಡಿ ಉನ್ನತೀಕರಿಸಿದಾಗ ಒಂದು ಪ್ರಮುಖ ತಿರುವು ಸಿಕ್ಕಿತು. ಈ ಪ್ರಮುಖ ಕಾರ್ಯಕ್ರಮ ರಚನಾತ್ಮಕ ಶೈಕ್ಷಣಿಕ ಬೆಂಬಲ ಹಾಗೂ ಪ್ರಮಾಣಿತ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿಜ್ಞಾನ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಯೋಜನೆಯ ಫಲವಾಗಿ, ಸಂಕೇತ್ ಜೆಇಇ ಮತ್ತು ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಯಮಿತ ಆನ್‌ಲೈನ್ ತರಬೇತಿಗೆ ಪ್ರವೇಶ ಪಡೆದರು.

ಇಷ್ಟೇ ಅಲ್ಲದೆ, ತಮ್ಮ ಪ್ರಗತಿಯ ಮೇಲ್ವಿಚಾರಣೆ ಮಾಡಲು ಮತ್ತು ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲು ಸಾಪ್ತಾಹಿಕ ಪರೀಕ್ಷೆಗಳನ್ನು ಪಡೆದರು. ಅವರಿಗೆ ಕಾಲೇಜಿನ ಗ್ರಂಥಾಲಯ ಸಹ ಒಂದು ನಿರ್ಣಾಯಕ ಸಂಪನ್ಮೂಲ ಕೇಂದ್ರವಾಯಿತಲ್ಲದೆ, ಕೇಂದ್ರೀಕೃತ ಅಧ್ಯಯನಕ್ಕೆ ಅಗತ್ಯವಾದ ಉಲ್ಲೇಖ ಸಾಮಗ್ರಿಗಳು ಮತ್ತು ಶಾಂತ ಸ್ಥಳವನ್ನು ಒದಗಿಸಿತು. ಸಂಕೇತ್ ತಮ್ಮ ಈ ಸಾಧನೆಯು ಸರ್ಕಾರಿ ಪಿಯು ಕಾಲೇಜುಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಅನೇಕ ವಿದ್ಯಾರ್ಥಿಗಳಿಗೆ ದೊಡ್ಡ ಕನಸು ಕಾಣಲು ಮತ್ತು ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ಆಶಿಸಿದ್ದಾರೆ.

ಸಂಕೇತ್ ಅವರ ಈ ಪಯಣ ಭರವಸೆಯ ದೀಪವಾಗಿ ನಿಂತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಆತನ ಹಿನ್ನೆಲ ಏನೇ ಇರಲಿ, ಸರಿಯಾದ ಬೆಂಬಲ, ಸಮರ್ಪಣೆ, ಶ್ರಮ ಮತ್ತು ಸಂಪನ್ಮೂಲಗಳ ಮೂಲಕ ಶೈಕ್ಷಣಿಕ ಸಾಧನೆಯ ಉನ್ನತ ಮಟ್ಟಕ್ಕೆ ಏರಬಹುದು ಎನ್ನುವುದು ಸಂಕೇತ್ ಅವರ ಈ ಸಾಧನೆಯಿಂದ ಸಾಬೀತಾಗುತ್ತದೆ. ಸಂಕೇತ್‌ನ ಈ ಶೈಕ್ಷಣಿಕ ಪ್ರಯಾಣ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸೇರಿ ಎಲ್ಲ ಹಿನ್ನೆಲೆಯ ವಿದ್ಯಾರ್ಥಿಗಳ ಕನಸಿಗೆ ಪುಷ್ಟಿ ನೀಡುವ ಕರ್ನಾಟಕ ಸರ್ಕಾರದ ದೃಷ್ಟಿಯೊಂದಿಗೆ ಪ್ರತಿಧ್ವನಿಸುತ್ತದೆ. ತಮ್ಮ ಈ ಸಾಧನೆಗೆ ಬೆಂಬಲವಾಗಿ ನಿಂತ ಪದವಿಪೂರ್ವ ಶಿಕ್ಷಣ ಇಲಾಖೆ, ಕಾಲೇಜು ಅಧ್ಯಾಪಕರು ಮತ್ತು ತಮ್ಮ ಪೋಷಕರಾದ ನಾಗರಾಜ್ ಎಚ್. ಮತ್ತು ಸುಬ್ಬಮ್ಮ ಎ. ಅವರಿಗೆ ಸಂಕೇತ್ ರಾಜ್ ಕೃತಜ್ಞತೆ ಸಲ್ಲಿಸಿದರು.

ಇನ್ನು ಸಂಕೇತ್‌ನ ಸಾಧನೆಯನ್ನು ಶ್ಲಾಘಿಸಿ ಪ್ರತಿಕ್ರಿಯಿಸಿದ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, “ಸಂಕೇತ್ ರಾಜ್ ಅವರ ಐಐಟಿ ಖರಗ್‌ಪುರ್‌ ಪ್ರವೇಶ ಒಂದು ಹೆಮ್ಮೆಯ ಕ್ಷಣ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಬದ್ಧತೆಯ ಪ್ರಬಲ ದೃಢೀಕರಣವಾಗಿದೆ. ಅವರ ಯಶಸ್ಸು ಆದರ್ಶ ಶಾಲಾ ಉನ್ನತೀಕರಣ ಮತ್ತು ಕೆಸಿಇಟಿ, ನೀಟ್ ಮತ್ತು ಜೆಇಇಗೆ ಉಚಿತ ತರಬೇತಿಯಂತಹ ಕಾರ್ಯಕ್ರಮಗಳ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ. ಈ ಕಾರ್ಯಕ್ರಮಗಳು ವಿಶೇಷವಾಗಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ದ್ವಿಭಾಷಾ ಬೋಧನೆಯೊಂದಿಗೆ ಪ್ರೀಮಿಯರ್ ಸಂಸ್ಥೆಗಳಿಗೆ ಪ್ರವೇಶ ಕಲ್ಪಿಸುತ್ತಿವೆ. ಸಂಕೇತ್ ಅಂಥವರ ಯಶಸ್ಸಿನ ಕಥೆಗಳಿಂದ ಸ್ಫೂರ್ತಿ ಪಡೆದು, ಮುಂದಿನ ಬಜೆಟ್‌ನಲ್ಲಿ ಕನಿಷ್ಠ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವಂತೆ ಕಾರ್ಯಕ್ರಮ/ಉಪಕ್ರಮ ಹೆಚ್ಚಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಸಂಕೇತ್ ರಾಜ್ ಮಾತನಾಡಿ, ಆನ್‌ಲೈನ್ ತರಬೇತಿ ಅವಧಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದೆ ಹಾಗೂ ವರ್ಷವಿಡೀ ನಿಯಮಿತವಾಗಿ ಅಧ್ಯಯನ ಮಾಡಿದೆ. ನನ್ನ ಯಶಸ್ಸಿಗೆ ಕಾಲೇಜಿನ‌ ಪ್ರಾಂಶುಪಾಲರು, ಉಪನ್ಯಾಸಕರು ಸೇರಿ ಇನ್ನೂ ಅನೇಕರ ಸಾಮೂಹಿಕ ಪ್ರಯತ್ನವೇ ಕಾರಣ. ಜತೆಗೆ, ಆದರ್ಶ ಯೋಜನೆಯ ಮೂಲಕ ರಚನಾತ್ಮಕ ಬೆಂಬಲ ಮತ್ತು ನಮ್ಮ ಕಾಲೇಜಿನ ಶಾಂತ, ಕೇಂದ್ರೀಕೃತ ವಾತಾವರಣ ನನ್ನ ಈ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

Related Articles

Comments (0)

Leave a Comment