ಇನ್ಮುಂದೆ ಸರ್ಕಾರಿ ಶಾಲಾ ಮಕ್ಕಳಿಗೂ ಮುಖ ಗುರುತಿಸುವಿಕೆ ಹಾಜರಾತಿ ವ್ಯವಸ್ಥೆ ಜಾರಿ: ಮಧುಬಂಗಾರಪ್ಪ

ಬಾಗಲಕೋಟೆ: ಇನ್ಮುಂದೆ ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗಿರುವಂತೆ  ಸರ್ಕಾರಿ ಶಾಲೆಗಳ ಮಕ್ಕಳಿಗೂ ಮುಖ ಗುರುತಿಸುವಿಕೆ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು,‌ಸಿದ್ದತಾ ಕಾರ್ಯಗಳು ನಡೆಯುತ್ತುವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ತಿಳಿಸಿದ್ದಾರೆ‌.

ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ “ಶಿಕ್ಷಣ ಇಲಾಖಾ ಪ್ರಗತಿ ಪರಿಶೀಲನಾ ಸಭೆ” ನಡೆಸಲಾಯಿತು.‌ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ “ಸರ್ಕಾರಿ ಶಾಲೆಗಳ ಸುಧಾರಣೆಗೆ” ಕೈಗೊಳ್ಳಬೇಕಾದ ಹಲವಾರು ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ, ಅಗತ್ಯ ಸಲಹೆ-ಸೂಚನೆಗಳನ್ನು ಸಚಿವ ಮಧುಬಂಗಾರಪ್ಪ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧುಬಂಗಾರಪ್ಪ, ಸರ್ಕಾರಿ ಶಾಲೆಗಳ ಅಭಿವೃದ್ಧಿ ದೃಷ್ಟಿಯಿಂದಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯ ಹೆಚ್ಚಿನ ಭಾಗವನ್ನು ಶಿಕ್ಷಣ ಕ್ಷೇತ್ರಕ್ಕೆ ಖರ್ಚು ಮಾಡಿ ಸಮಾಜದ ಪ್ರಗತಿಯ ವೇಗ ಹೆಚ್ಚಿಸಲು ಕಾರ್ಪೊರೇಟ್‌ ಸಂಸ್ಥೆಗಳು, ಉದ್ಯಮಿಗಳ ಸಹಕಾರ ಪಡೆದಿದ್ದು ಇದೀಗ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ವಿದ್ಯಾರ್ಥಿಗಳ ಹಾಜರಾತಿ ಖಚಿತಪಡಿಸಿಕೊಳ್ಳಲು ಮುಖ ಗುರುತಿಸುವಿಕೆ ಹಾಜರಾತಿ ವ್ಯವಸ್ಥೆ (Facial Attendance) ಜಾರಿ ಮಾಡಲಾಗುವುದು ಎಂದರು.

ನಾವಿಂದು ಡಿಜಿಟಲ್ ಯುಗದಲ್ಲಿದ್ದು, ಶಿಕ್ಷಣ ಇಲಾಖೆಯಲ್ಲಿ ಈ ವರ್ಷವೇ ಕೆಲ ಬದಲಾವಣೆ ಮಾಡಲಿದ್ದೇವೆ. ಒಂದೆರಡು ತಿಂಗಳಲ್ಲಿ ಈ ಬದಲಾವಣೆ ನಿಮಗೆ ಗೊತ್ತಾಗಲಿದೆ. ಈಗಾಗಲೇ ಫೇಶಿಯಲ್‌ ಅಟೆಂಡೆನ್ಸ್ ಬೇರೆ ರಾಜ್ಯದಲ್ಲಿ ಜಾರಿ ಮಾಡಲಾಗಿದೆ. ನಾವು ಸ್ವಲ್ಪ ಹಿಂದೆ ಇದ್ದೇವೆ. ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಇದ್ದ ಕಾರಣ ಒಂದರಡು ತಿಂಗಳಿನಲ್ಲಿ ಜಾರಿ ಮಾಡಲಾಗುವುದು ಅದಕ್ಕೆ ಬೇಕಾದ ಸಿದ್ದತೆನಡೆದಿದೆ ಎಂದು ತಿಳಿಸಿದರು.

ಸಭೆಯಲ್ಲಿ ಚರ್ಚಿಸಲಾದ ವಿಷಯಗಳು”:

ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯ ಜಮಖಂಡಿ, ಮುಧೋಳ, ಬೀಳಗಿ, ಬಾದಾಮಿ, ಬಾಗಲಕೋಟೆ, ಹುನಗುಂದ ತಾಲೂಕುಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಚರ್ಚಿಸಲಾಯಿತು,ಪಠ್ಯಪುಸ್ತಕ/ಸಮವಸ್ತ್ರ/ಶೂ-ಸಾಕ್ಸ್ ಗಳನ್ನು ಶಾಲಾ ಪ್ರಾರಂಭದ ಅವಧಿಯಲ್ಲಿ ಏಕಕಾಲಕ್ಕೆ ಪೂರೈಸುವ ಕುರಿತು,ಮಕ್ಕಳಿಗೆ ಸರಿಯಾದ ಸಮಯಕ್ಕೆ ಮಧ್ಯಾಹ್ನದ ಬಿಸಿ ಊಟ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕಾಳಜಿವಹಿಸಿ ತರಬೇತಿ ನೀಡುವ ಕುರಿತು ಸಮಾಲೋಚಿಸಲಾಯಿತು.

ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಕುರಿತು, ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಮೂಲಕ ಸರಕಾರಿ ಶಾಲೆಗಳನ್ನು ಬೆಳೆಸುವ ಕುರಿತು,ಪೂರ್ವ ಪ್ರಾಥಮಿಕ ವಿಭಾಗಗಳನ್ನು ಪ್ರಾರಂಭಿಸುವ ಕುರಿತು,ಸರ್ಕಾರಿ ಶಾಲೆಗಳ ಕೊಠಡಿಗಳ ದುರಸ್ತಿ ಕಾಮಗಾರಿ ಮತ್ತು ಶೌಚಾಲಯ ನಿರ್ಮಾಣ ಕಾರ್ಯ ಕುರಿತು ಚರ್ಚಿಸಲಾಯಿತು.

ಶಿಕ್ಷಕರಿಗೆ ತರಬೇತಿ ನೀಡುವ ಕುರಿತು,ಮಕ್ಕಳ ಗೈರು ಹಾಜರಿ ಬಗ್ಗೆ ಗಮನಹರಿಸಿ, ಶಾಲೆಗೆ ಕರೆತರುವ ಕುರಿತು,ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮವನ್ನು ಆರಂಭಿಸುವ ಕುರಿತು, ಸರ್ಕಾರಿ ಶಾಲೆಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಅನೇಕ ಮಹತ್ವದ ಬದಲಾವಣೆಗಳ ಕುರಿತು ಸಮಾಲೋಚನೆ ನಡೆಸಲಾಯಿತು.

Related Articles

Comments (0)

Leave a Comment