ಪರಿಸರವಾದಿಗಳ ವಿರೋಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಸ್ಪಷ್ಟನೆ
- by Suddi Team
- June 27, 2025
- 57 Views

ಬೆಂಗಳೂರು: ಜ್ಞಾನಭಾರತಿಯಲ್ಲಿ ವಿದ್ಯಾರ್ಥಿ ಕೇಂದ್ರಿತ ಅಭಿವೃದ್ಧಿಗೆ ಬೆಂಗಳೂರು ವಿಶ್ವವಿದ್ಯಾಲಯ ಬದ್ದವಾಗಿದ್ದು, ಪರಿಸರ ಪ್ರಜ್ಞೆ ಮತ್ತು ಕಾಳಜಿಯೊಂದಿಗೆ ಕಾನೂನಾತ್ಮಕವಾಗಿ ಸರ್ಕಾರದ ಎಲ್ಲ ನಿಯಮಾವಳಿಗಳನ್ನು ಪಾಲಿಸಿಕೊಂಡು ಶೈಕ್ಷಣಿಕ ಭವನ ಮತ್ತು ಸಂಶೋಧನಾ ಭವನ ನಿರ್ಮಿಸುವುದಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರ ಎಸ್.ಎಂ ಸ್ಪಷ್ಟಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಶಿಕ್ಷಣದ ಪರಿಕಲ್ಪನೆ ಬದಲಾಗುತ್ತಿದೆ, ಸಂಶೋಧನೆಗಳಿಗೆ ಆದ್ಯತೆ ನೀಡಬೇಕು. ಸಂಶೋಧನೆಗಳ ಗುಣಮಟ್ಟ ಹೆಚ್ಚಿಸಬೇಕಾಗಿದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಮತ್ತು ಗುಣಮಟ್ಟದ ಕಟ್ಟಡ ಸಂಶೋಧನಾ ವಿಭಾಗಗಳನ್ನು ನಿರ್ಮಿಸಬೇಕಾದ ಜವಾಬ್ದಾರಿ ವಿಶ್ವವಿದ್ಯಾಲಯ ಹೊಂದಿದೆ ಎಂದರು.
ವಿಶ್ವವಿದ್ಯಾಲಯದ ತಜ್ಞರ ಸಮಿತಿಯು ಸಂಶೋಧನಾ ಭವನ ಮತ್ತು ಶೈಕ್ಷಣಿಕ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಸೂಚಿಸಿದೆ. ಮರಗಳ ಸಂಖ್ಯೆ ಕಡಿಮೆ ಇದ್ದು, ಶೈಕ್ಷಣಿಕವಾಗಿ ವೈಜ್ಞಾನಿಕವಾಗಿ ಸೂಕ್ತವಾಗಿರುವ ಸ್ಥಳವನ್ನು ನಿರ್ಮಾಣಕ್ಕೆ ಆಯ್ಕೆ ಮಾಡಲಾಗಿದೆ ಎಂದರು.
ವಿಶ್ವವಿದ್ಯಾಲಯ 1,200 ಎಕರೆ ವಿಸ್ತೀರ್ಣ ಹೊಂದಿದ್ದು ಶಿಕ್ಷಣಕ್ಕೆ, ಸಂಶೋಧನೆಗೆ ಮೀಸಲಾಗಿರುವುದು. ವಿಶ್ವವಿದ್ಯಾಲಯದ ವತಿಯಿಂದ ಜ್ಞಾನಭಾರತಿಯಲ್ಲಿ 6 ಲಕ್ಷಕ್ಕಿಂತ ಹೆಚ್ಚು ಮರಗಳನ್ನು ನೆಡುವ ಮೂಲಕ ಕಿರು ಅರಣ್ಯ ಸೃಷ್ಟಿಸಲಾಗಿದೆ. ವಿಶ್ವವಿದ್ಯಾಲಯ ಸದಾ ಪರಿಸರ ಕಾಳಜಿ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೇ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದೆ ಎಂದು ಸ್ಪಷ್ಟನೆ ನೀಡಿದರು.
ಈಗ ನಿರ್ಮಾಣವಾಗುತ್ತಿರುವ ಭವನವು ಯಾವುದೇ ಜೈವಿಕ ಉದ್ಯಾನವನದಲ್ಲಿ ನಿರ್ಮಿಸುತ್ತಿಲ್ಲ. ಅಲ್ಲಿ ಯಾವುದೇ ಪಾರಂಪರಿಕ ಮರಗಳಿಲ್ಲ. 419 ಮರಗಳನ್ನು ಕಡಿಯಲಾಗುತ್ತಿದೆ ಎಂದು ಬಿಂಬಿಸಲಾಗಿದೆ. ವಾಸ್ತವವಾಗಿ 282 ಮರಗಳನ್ನು ಕಡಿಯಲಾಗುತ್ತಿದ್ದು, ಅವುಗಳಲ್ಲಿ 169 ನೀಲಗಿರಿ ಮತ್ತು ಅಕೇಶಿಯ ಮರಗಳಾಗಿವೆ. ಉಳಿದ 137 ಮರಗಳನ್ನು ಬಫರ್ ಜೋನ್ನಲ್ಲಿ ಉಳಿಸಲಾಗುತ್ತದೆ. ಸಣ್ಣ ಮರಗಳನ್ನು ಹತ್ತಿರದ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು. ಕಾನೂನಾತ್ಮಕವಾಗಿ ನಿಯಮಾವಳಿ ಅನುಸಾರ ವೈಜ್ಞಾನಿಕವಾಗಿ ನಾವು ಕಟ್ಟಡ ನಿರ್ಮಿಸುತ್ತೇವೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಇದೊಂದು ಶೈಕ್ಷಣಿಕ ಸ್ಥಳವಾಗಿದ್ದು ಸಾರ್ವಜನಿಕ ತಾಣವಲ್ಲ. ಸಾರ್ವಜನಿಕರು ಇಲ್ಲಿ ಬಂದು ದಬ್ಬಾಳಿಕೆ ಮಾಡುವುದನ್ನು ವಿಶ್ವವಿದ್ಯಾಲಯ ಸಹಿಸುವುದಿಲ್ಲ. ಇಲ್ಲಿಯವರೆಗೂ ನಾವು ಸುಮ್ಮನಿದ್ದೆವು. ಮುಂದೆ ವಾಯು ವಿಹಾರಿಗಳ ಸಂಘದ ಕುರಿತು ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತೇವೆ. ವಿಶ್ವವಿದ್ಯಾಲಯದಲ್ಲಿ ಯಾವುದೇ ಪ್ರತಿಭಟನೆಗಳಿಗೆ ಅವಕಾಶವಿಲ್ಲ, ಯಾವುದೇ ರ್ಯಾಲಿ ನಡೆಸಲು ಅನುಮತಿ ಇಲ್ಲ. ಈ ಸಂಬಂಧ ಪೋಲಿಸರ ಗಮನಕ್ಕೆ ತರಲಾಗಿದ್ದು, ಸೂಕ್ತ ವ್ಯವಸ್ಥೆಗೆ ಸೂಚಿಸಲಾಗಿದೆ ಎಂದರು.
Related Articles
Thank you for your comment. It is awaiting moderation.
Comments (0)