ಬೋಧಕ ಸಿಬ್ಬಂದಿ ನೇಮಿಸುವವರೆಗೆ ಅತಿಥಿ ಶಿಕ್ಷಕರ ನಿಯೋಜಿಸಿ; ಅರುಣ್ ಶಹಾಪುರ ಮನವಿ

ಬೆಂಗಳೂರು: ಶೈಕ್ಷಣಿಕ ವರ್ಷ ಅರಂಭಗೊಂಡಿದ್ದು, ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಸಿಬ್ಬಂದಿಯ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಅತಿಥಿ‌ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪಗೆ ಮಾಜಿ ಎಂಎಲ್‌ಸಿ ಅರುಣ್ ಶಹಾಪುರ ಮನವಿ ಮಾಡಿದ್ದಾರೆ.

ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ರಾಜ್ಯಾಧ್ಯಕ್ಷ ಚೌಡಪ್ಪ‌ ಹಾಗೂ ಯುವ ಮುಖಂಡ ರಾಜು ವಾಲಿ ಶಿಕ್ಷಕರ ಕೊರತೆ ಕುರಿತು‌ ಮಾತುಕತೆ ನಡೆಸಿದರು.

ಶಿಕ್ಷಕರ ಹೆಚ್ಚುವರಿಗೊಳಿಸುವ ಪ್ರಕ್ರಿಯೆಗೆ ಮನವಿ ಮಾಡಿದ ಶಹಾಪುರ ತಂಡ 2015-2025 ವರೆಗೆ ಖಾಲಿ ಇರುವ ಅನುದಾನಿತ ಶಾಲಾ -ಕಾಲೇಜುಗಳಲ್ಲಿರುವ ಬೋಧಕ ಹುದ್ದೆ ಭರ್ತಿ ಮಾಡಲು ಇಲಾಖೆಗೆ ಸಮಸ್ಯೆ ಆಗಿರುವ ಕುರಿತು ಹಾಗೂ ಕನಿಷ್ಠ ಭರ್ತಿ ಮಾಡುವವರೆಗೆ ಅತಿಥಿ ಶಿಕ್ಷಕರ ನೇಮಕಾತಿ ಅನುದಾನ ನೀಡುವಂತೆ ಮನವಿ ಮಾಡಿತು.

ಸರ್ಕಾರಿ ಶಾಲೆಗಳ ಕಟ್ಟಡದ ಸ್ಥಿತಿಗತಿಯ ಕುರಿತು, ಮೂಲಭೂತ ಸೌಕರ್ಯ ಅಭಿವೃದ್ಧಿ, ಹೊಸ ಕೊಠಡಿ, ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಅನುದಾನ ನೀಡುವ ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಬೇಡಿಕೆ ಇಟ್ಟಿದ್ದು, ವಿಜಯಪುರ ಜಿಲ್ಲೆಯ ಡಿಡಿಪಿಐ ಹುದ್ದೆ ಭರ್ತಿ ಮಾಡದೆ ಇರುವುದರಿಂದ ಆಗುತ್ತಿರುವ ಸಮಸ್ಯೆ ಕುರಿತು ವಿವರ ನೀಡಿತು.

ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ಅನುದಾನಕ್ಕೆ ಒಳಪಡಿಸುವ ಕುರಿತು ಚರ್ಚೆ ನಡೆಸಿ ಗಮನ ಸೆಳೆಯಲಾಯಿತು. ಸಮಸ್ಯೆ ಮತ್ತು ಬೇಡಿಕೆಯನ್ನು ಆಲಿಸಿದ ಸಚಿವ ಮಧುಬಂಗಾರಪ್ಪ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Related Articles

Comments (0)

Leave a Comment