ಮನುಷ್ಯ ಮಾನವೀಯತೆ ಮರೆಯುತ್ತಿದ್ದಾನೆ ಎಂಬುದು ಪದೇ ಪದೇ ಸಾಭೀತಾಗುತ್ತಿದೆ!
- by Suddi Team
- July 10, 2018
- 85 Views
ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಮಾನವೀಯತೆ, ಮನುಷ್ಯತ್ವಕ್ಕೆ ಬೆಲೆ ಇಲ್ಲದಂತಾಗಿದೆ. ಮನುಷ್ಯ ಜೀವಿ ಮಾನವೀಯತೆ ಮರೆತು ಕಾಡುಮೃಗದಂತೆ ವರ್ತಿಸುತ್ತಿದ್ದಾನೆ. ಅಂತಹ ಅದೆಷ್ಟೋ ನಿದರ್ಶನಗಳು ದಿನನಿತ್ಯ ನಮ್ಮ ಕಣ್ಮುಂದೆ ಕಾಣಸಿಗುತ್ತಿವೆ. ತಮ್ಮ ಕಣ್ಮುಂದೆ ಕರುಳು ಕಿತ್ತುಬರುವ ಘಟನೆಗಳು ನಡೆಯುತ್ತಿದ್ದರೂ ಜೀವದ ಬೆಲೆ ಗೊತ್ತಿಲ್ಲದ ರೀತಿ ನಟಿಸುತ್ತಾರೆ. ನೋವು, ನರಳಾಟ, ಚೀರಾಟ ಕೇಳಿದರೂ ನೋಡಿದರೂ ನಮಗೆ ಸಂಬಂಧವೇ ಇಲ್ಲವೆಂಬಂತೆ ದೂರಸರಿದುಬಿಡುತ್ತಾರೆ. ಹಾಗಾದರೆ ಎಲ್ಲಿದೆ ಮಾನವೀಯತೆ, ಮನುಷ್ಯತ್ವ..??
ಹೌದು, ಗೌರಿಬಿದನೂರಿನ ಮೇಳ್ಯ ಗ್ರಾಮದಲ್ಲಿ ಇಂತಹ ಒಂದು ಹೃದಯ ವಿದ್ರಾವಕ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಅಪಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರೂ ಯಾರೊಬ್ಬರೂ ಆ ಜೀವದ ನೆರವಿಗೆ ಬರಲಿಲ್ಲ. ಹೆಂಡತಿ ತನ್ನ ಗಂಡನ ಜೀವ ಉಳಿಸಿಕೊಳ್ಳಲು ಎಷ್ಟು ಗೋಗರೆದರೂ ಯಾವೊಬ್ಬ ವ್ಯಕ್ತಿಯೂ ಜೀವ ಉಳಿಸಲು ಮುಂದಾಗಲಿಲ್ಲ. ಬದಲಾಗಿ ಅಪಘಾತದ ವಿಡೀಯೋ ಮಾಡುತ್ತಾ ನಿಂತಿದ್ದರು ಆ ಕಲ್ಲು ಹೃದಯದ ಜನರು. ಕೊನೆಗೂ ಆ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಆಟೋವೊಂದರ ಮುಂದಿನ ಚಕ್ರ ಪಲ್ಟಿ ಹೊಡೆದು ಮಹ್ಮದ್ ಖಾನ್(50) ಎಂಬಾತ ಗಂಭೀರ ಗಾಯಗೊಂಡಿದ್ದ. ರಕ್ತದ ಮಡುವಿನಲ್ಲಿ ಬಿದ್ದು ಚೀರಾಟ ನಡೆಸಿದ್ದ. ಆತನ ಪತ್ನಿ ಅಸಹಾಯಕತೆಯಿಂದ ಅಲ್ಲಿದ್ದ ಸಾರ್ವಜನಿಕರನ್ನು ಗೋಗರೆಯುತ್ತಿದ್ದಳು. ಆದರೆ ಆ ಮೃಗಮನಸ್ಸಿನ ಸಾರ್ವಜನಿಕರು ಮಾತ್ರ ಜೀವ ಉಳಿಸುವ ಪುಣ್ಯ ಕಾರ್ಯಕ್ಕೆ ಮುಂದಾಗಲೇ ಇಲ್ಲ. ತಡವಾಗಿ ಗೌರಿಬಿದನೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾನೆ.
ಸಾರ್ವಜನಿಕರು ಅಪಘಾತದಲ್ಲಿ ಸಿಲುಕಿ ನರಳಿತ್ತುರವವರ ಸಹಾಯಕ್ಕೆ ಮುಂದಾಗದ ಘಟನೆಗಳು ಆಗಾಗ ಮರುಕಳಿಸುತ್ತಲೇ ಇದೆ. ಒಂದು ಜನರಲ್ಲಿ ಮಾನವೀಯತೆ ಮರೆಯಾಗುತ್ತಿದೆ ಎಂಬ ಅಂಶ ಕಾರಣವಾದರೆ, ಇನ್ನೊಂದೆಡೆ ಪೊಲೀಸರ ಭಯವೂ ಇದಕ್ಕೆ ಕಾರಣ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದರೆ ಅಥವಾ ಪೊಲೀಸರಿಗೆ ಮಾಹಿತಿ ನೀಡಿದರೆ, ನಂತರ ಸಾಕ್ಷಿ ಹೇಳುವಂತೆ, ಜತೆಗೆ ಠಾಣೆಗೆ ಬರುವಂತೆ ಪೀಡಿಸುವುದನ್ನು ಕೆಲ ಪೊಲೀಸರು ಇನ್ನೂ ಬಿಟ್ಟಿಲ್ಲ. ಪೊಲೀಸರು ಕರೆದುಕೊಂಡು ಹೋಗುವುದಿಲ್ಲ ಎಂಬ ನಿರ್ಭಯದ ವಾತಾವರಣ ನಿರ್ಮಾಣವಾದಲ್ಲಿ ಮಾತ್ರ ಸಾರ್ವಜನಿಕರು ಇಂಥ ಸಂದರ್ಭಗಳಲ್ಲಿ ನೆರವಿಗೆ ಧಾವಿಸುತ್ತಾರೆ.
Related Articles
Thank you for your comment. It is awaiting moderation.
Comments (0)