ದಿಢೀರ್ ಅಡ್ಡ ಬಂದು ವಾಹನ ನಿಲ್ಲಿಸುವಂತಿಲ್ಲ, ಕೀ ತೆಗೆದುಕೊಳ್ಳುವಂತಿಲ್ಲ: ವಾಹನ ತಪಾಸಣೆಗೆ ಹೊಸ ರೂಲ್ಸ್
- by Suddi Team
- June 1, 2025
- 16 Views

ಬೆಂಗಳೂರು:ರಾಜ್ಯದ ಎಲ್ಲಾ ಘಟಕಗಳಲ್ಲಿನ ಪೊಲೀಸ್ ಠಾಣಾ ಸರಹದುಗಳಲ್ಲಿ ಪೊಲೀಸ್ ಅಧಿಕಾರಿ / ಸಿಬ್ಬಂದಿಗಳು ಸಾರ್ವಜನಿಕರ ವಾಹನಗಳನ್ನು ತಪಾಸಣೆ ನಡೆಸುವಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾ ನಿರೀಕ್ಷಕ ಡಾ. ಎಂ.ಎ. ಸಲೀಂ ಅವರು 2025 ನೇ ಮೇ 31 ರಂದು ಸುತ್ತೋಲೆ ಹೊರಡಿಸಿದ್ದಾರೆ.
ಇತ್ತೀಚೆಗೆ 2025ನೇ ಮೇ 26 ರಂದು ಮಂಡ್ಯ ಜಿಲ್ಲೆಯಲ್ಲಿ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ತಪಾಸಣೆ ಮಾಡುವಾಗ ಸರಿಯಾದ ರಸ್ತೆ ಸುರಕ್ಷತಾ / ಮುಂಜಾಗ್ರತಾ ಕ್ರಮಗಳನ್ನು ವಹಿಸದೇ, ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟಣೆಯನ್ನು ಗಮನಿಸದೇ ವಾಹನಗಳನ್ನು ತಡೆದು ಪ್ರಕರಣ ದಾಖಲಿಸುವ ನಿಟ್ಟಿನಲ್ಲಿ ರಸ್ತೆ ಅಪಘಾತವುಂಟಾಗಿ ಓರ್ವ ಮಗುವು ಮೃತಪಟ್ಟಿರುತ್ತದೆ. ಅಲ್ಲದೇ 2025ನೇ ಮೇ 13ರಂದು ದಾವಣಗೆರೆ ಜಿಲ್ಲೆಯಲ್ಲಿ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ತಪಾಸಣೆ ನಡೆಸುವ ಸಂದರ್ಭದಲ್ಲಿ ವೇಗವಾಗಿ ಚಲಾಯಿಸಿಕೊಂಡು ಬಂದ ಕ್ಯಾಂಟರ್ ಚಾಲಕನೂ ಪೊಲೀಸ್ ಸಿಬ್ಬಂದಿಗೆ ಅಪಘಾತಪಡಿಸಿ ಸದರಿ ಪೊಲೀಸ್ ಸಿಬ್ಬಂದಿಯು ಮೃತಪಟ್ಟಿರುತ್ತಾರೆ.
ಈ ಪ್ರಕರಣಗಳನ್ನು ಗಮನಿಸಿದಲ್ಲಿ ಪೊಲೀಸರು ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳನ್ನು ದಾಖಲಿಸುವಾಗ ಯಾವುದೇ ರಸ್ತೆ ಸುರಕ್ಷತಾ ಕ್ರಮಗಳನ್ನು / ಮುಂಜಾಗ್ರತಾ ಕ್ರಮಗಳನ್ನು /ಸಂಚಾರ ದಟ್ಟಣೆಯನ್ನು ಗಮನದಲ್ಲಿರಿಸಿಕೊಳ್ಳದಿರುವುದು ಕಂಡುಬಂದಿರುತ್ತದೆ. ಇದರಿಂದ ಸಾರ್ವಜನಿಕರ /ಅಮಾಯಕರ ಜೀವಕ್ಕೆ ಹಾಗೂ ಪೊಲೀಸರೇ ತಮ್ಮ ಜೀವಕ್ಕೂ ಕುತ್ತು ತಂದುಕೊಳ್ಳುತ್ತಿರುವುದು ಗಂಭೀರವಾಗಿ ಪರಿಗಣಿಸಬೇಕಾದ ಅಂಶವಾಗಿರುತ್ತದೆ.ಈ ಸಂಬಂಧ, ಎಲ್ಲಾ ಘಟಕಗಳು ಈಗಾಗಲೇ ಮಾನ್ಯ ಡಿಜಿ & ಐಜಿಪಿ ರವರು ಈ ಹಿಂದೆ ಹೊರಡಿಸಿರುವ ಉಲ್ಲೇಖಿತ ಸುತ್ತೋಲೆಗಳಲ್ಲಿ ನಮೂದಿಸಿರುವಂತೆ ಸಂಚಾರ ನಿಯಂತ್ರಣ ಮಾಡತಕ್ಕದ್ದು ,ಎಲ್ಲಾ ಘಟಕಾಧಿಕಾರಿಗಳು ತಮ್ಮ ಅಧೀನಕ್ಕೊಳಪಡುವ ಅಧಿಕಾರಿ / ಸಿಬ್ಬಂದಿಗಳಿಗೆ ಸುತ್ತೋಲೆಯ ಬಗ್ಗೆ ಅಗತ್ಯ ನಿರ್ದೇಶನಗಳನ್ನು ನೀಡಿ ಅವುಗಳನ್ನು ಪಾಲನೆ ಮಾಡಲು ಸೂಚಿಸುವುದು ಎಂದು ತಿಳಿಸಿದ್ದಾರೆ.
ಸೂಚನೆಗಳು:
ಪೊಲೀಸರು ವಾಹನ ಸವಾರರ ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಪರೀಕ್ಷಿಸಲು ಸಕಾರಣವಿಲ್ಲದೇ ವಾಹನಗಳನ್ನು ತಡೆದು ತಪಾಸಣೆಗೊಳಪಡಿಸಬಾರದು.
ಕಣ್ಣಿಗೆ ಕಾಣುವ (Visible violations) ಸಂಚಾರ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ ಮಾತ್ರವೇ ಅಂತಹ ವಾಹನಗಳನ್ನು ನಿಲ್ಲಿಸಿ ಪ್ರಕರಣಗಳನ್ನು ದಾಖಲಿಸುವುದು, ಪ್ರಕರಣಗಳನ್ನು ದಾಖಲಿಸುವಾಗ *ಹೆದ್ದಾರಿಗಳಲ್ಲಿ Zig Zag ಮಾದರಿಯಲ್ಲಿ ಬ್ಯಾರಿಕೇಡ್ (Barricade) ಹಾಕಿ ವಾಹನಗಳನ್ನು ತಡೆಯಬಾರದು.
ರಸ್ತೆಯಲ್ಲಿ ದಿಢೀರನೆ ಅಡ್ಡಬಂದು ವಾಹನ ನಿಲ್ಲಿಸುವಂತೆ ಹೇಳಬಾರದು ಹಾಗೂ ಬೈಕ್ನ ಹಿಂಬದಿ ಸವಾರ (Pillion rider) ನನ್ನು ಹಿಡಿದು ಎಳೆಯುವುದು ಹಾಗೂ ವಾಹನಗಳ ಕೀಲಿಕೈ (Key) ಅನ್ನು ತೆಗೆದುಕೊಳ್ಳುವುದನ್ನು ಮಾಡಬಾರದು”
ಈ ಎಲ್ಲಾ ಅಂಶಗಳನ್ನು ಎಲ್ಲಾ ಪೊಲೀಸ್ ಅಧಿಕಾರಿಗಳು / ಸಿಬ್ಬಂದಿಗಳು ಗಮನದಲ್ಲಿಟ್ಟುಕೊಂಡು ಕಡ್ಡಾಯವಾಗಿ ಪಾಲಿಸುವುದು. ಅಲ್ಲದೇ, ವೇಗವಾಗಿ ಚಲಾಯಿಸಿಕೊಂಡು ಬರುವ ವಾಹನ ಸವಾರರನ್ನು ಹಿಡಿಯಲು ಅವರನ್ನು ಬೆನ್ನಟ್ಟದೇ ಆ ವಾಹನಗಳ ನೋಂದಣಿ ಸಂಖ್ಯೆಯನ್ನು ಗುರುತು ಮಾಡಿಕೊಂಡು ಜಿಲ್ಲಾ ಪೊಲೀಸ್ ಠಾಣಾ ಸರಹದ್ದುಗಳ ವಿವಿಧ ನಿಯಂತ್ರಣ ಕೋಣೆಗಳಿಗೆ ಮಾಹಿತಿ ರವಾನಿಸಿ. ಸದರಿ ವಾಹನ ಸವಾರರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸುವುದು.
ಸುರಕ್ಷತೆಗಾಗಿ Reflective Jacket ಧಾರಣೆ ಹಾಗೂ LED Baton ಗಳನ್ನು ಉಪಯೋಗಿಸಿ
ಸಂಚಾರ ನಿಯಮ ಉಲ್ಲಂಘನೆದಾರರ ವಿರುದ್ಧ ಪ್ರಕರಣ ದಾಖಲಿಸುವಾಗ (Physical Enforcement) ಅಥವಾ ವಾಹನಗಳ ತಪಾಸಣೆ ಮಾಡುವ ಸಂದರ್ಭದಲ್ಲಿ ಪೊಲೀಸರು ತಮ್ಮ ಸುರಕ್ಷತೆಗಾಗಿ Reflective Jacket ಗಳನ್ನು ಧರಿಸುವುದು. ಸಂಜೆ ವೇಳೆಯಲ್ಲಿ ಕಡ್ಡಾಯವಾಗಿ LED Baton ಗಳನ್ನು ಉಪಯೋಗಿಸಬೇಕು ಹಾಗೂ ವಾಹನಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ Body worn camera ಗಳನ್ನು ಧರಿಸತಕ್ಕದ್ದು.
ಪ್ರವರ್ತನಾ ಮುಖಾಂತರ ಪ್ರಕರಣಗಳ ದಾಖಲೆಗೆ ಸೂಚನೆ:
ಯಾವ ಯಾವ ಘಟಕಗಳಕ್ಲಿ Traffic Management centre (TMC)/Intelligent Traffic Management System (ITMS) ಅನ್ನು ಅನುಷ್ಠಾನಗೊಳಿಸಲಾಗಿದೆಯೋ ಅಂತಹ ಘಟಕದವರು ಆದಷ್ಟು ಸಂಪರ್ಕರಹಿತ ಪ್ರವರ್ತನಾ (Contactless enforcement) ಮುಖಾಂತರ ಪ್ರಕರಣಗಳನ್ನು ದಾಖಲಿಸುವುದು.
ಜಾಗೃತಿ ಮೂಡಿಸುವುದು: ಅನಾಹುತಗಳನ್ನು ತಪ್ಪಿಸಲು ಎಲ್ಲಾ ಘಟಕಗಳಲ್ಲೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾಲಕಾಲಕ್ಕೆ ಸರಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ತಂತ್ರಜ್ಞಾನ ಆಧಾರಿತ ನಿಯಮ ಪಾಲನೆ:ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಇತರೆ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಪ್ರಯತ್ನ ಮಾಡಬಾರದು ಹಾಗೂ ಇಂತಹ ವಾಹನಗಳ ವಿರುದ್ಧ ಎಫ್.ಟಿ.ವಿ.ಆರ್ ದಾಖಲಿಸಲು ತಂತ್ರಜ್ಞಾನ ಆಧಾರಿತ ನಿಯಮಗಳ ಜಾರಿಯನ್ನು ಅನುಸರಿಸುವುದು.
ಸುರಕ್ಷತಾ ಸಲಕರಣೆಗಳ ಅಳವಡಿಕೆ: ವಾಹನಗಳ ವೇಗವನ್ನು ಇಳಿಸುವ ಸಲುವಾಗಿ, ತಪಾಸಣೆಯ ಸ್ಥಳದ ಸುಮಾರು 100-150 ಮೀಟರ್ ಮೊದಲೇ ರಿಫೆಕ್ಟಿವ್ ರಬ್ಬರ್ ಕೋನ್ಗಳನ್ನು ಹಾಗೂ ಸುರಕ್ಷತಾ ಸಲಕರಣಿಗಳನ್ನು ಅಳವಡಿಸುವುದು.
ರಾತ್ರಿ ವೇಳೆ ಸಿಗ್ನಲ್ ದೀಪಗಳ ಬಳಿ ಮಾತ್ರ ತಪಾಸಣೆ:ರಾತ್ರಿ ಮತ್ತು ತಡರಾತ್ರಿಯ ಸಂದರ್ಭದಲ್ಲಿ ಸಂಚಾರ ಸಿಗ್ನಲ್ ದೀಪಗಳಿರುವ / ಜಂಕ್ಷನ್ ಗಳ ಬದಿಯಲ್ಲೇ ವಾಹನಗಳನ್ನು ತಪಾಸಣೆ ಮಾಡುವುದು ಸೂಕ್ತ.
ಹೆದ್ದಾರಿಗಳಲ್ಲಿ ನಾಕಾಬಂಧಿ ನಡೆಸಬಾರದು: ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ನಡೆಸುವ ನಾಕಾಬಂಧಿ ಪ್ರಕ್ರಿಯೆಗಳನ್ನು ಸಾಧ್ಯವಾದಷ್ಟು ಹೆದ್ದಾರಿಗಳಲ್ಲಿ ನಡೆಸಬಾರದು. ತಪಾಸಣೆಯ ಸಂದರ್ಭದಲ್ಲಿ ಇಂತಹ ಕಾ&ಸು ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ಸುರಕ್ಷತಾ ಹಿತದೃಷ್ಟಿಯಿಂದ ಸಂಚಾರ ಪೊಲೀಸರ ಬೆಂಬಲ ಮತ್ತು ಸಹಕಾರವನ್ನು ಪಡೆದುಕೊಳ್ಳುವುದು.
ಸುತ್ತೋಲೆಯಲಿರುವ ಅಂಶಗಳ ಕಡ್ಡಾಯ ಪಾಲನೆ: ಎಲ್ಲಾ ಪೊಲೀಸ್ ಆಯುಕ್ತರುಗಳು ಹಾಗೂ ಪೊಲೀಸ್ ಅಧೀಕ್ಷಕರುಗಳು ಈ ವಿಷಯದ ಕುರಿತು ವೈಯಕ್ತಿಕ ಗಮನಹರಿಸಿ, ತಮ್ಮ ಅಧೀನಕ್ಕೊಳಪಡುವ ಅಧಿಕಾರಿ / ಸಿಬ್ಬಂದಿಗಳು ಈ ಸುತ್ತೋಲೆಯನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಕಟ್ಟುನಿಟ್ಟಾಗಿ ನಿರ್ದೇಶನಗಳನ್ನು ನೀಡುವಂತೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
Related Articles
Thank you for your comment. It is awaiting moderation.
Comments (0)