ನಗರಸಭೆ ಅಧಿಕಾರಿಗಳ ಎಡವಟ್ಟು: ಏಳು ಬಡ ಕುಟುಂಬಗಳು ಬೀದಿಪಾಲು
- by Suddi Team
- July 10, 2020
- 16 Views

ಚಿತ್ರದುರ್ಗ: ತುಂತುರು ಮಳೆ, ಚುಮುಚುಮು ಚಳಿಯಲ್ಲಿ ಮನೆಯಿಂದ ಹೊರಗೆ ಬರುವುದೇ ಕಷ್ಟ. ಆದ್ರೆ ಹಿರಿಯೂರು ನಗರಸಭೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಸುಮಾರು ಏಳು ಬಡ ಕುಟುಂಬಗಳು ಆಷಾಢದ ಚಳಿಯಲ್ಲಿ ಬೀದಿಗೆ ಬಿದ್ದಿದ್ದಾರೆ. ಮಳೆಯ ನಡುವೆ ಟೆಂಟ್ ಹಾಕಿಕೊಂಡು ಬೀದಿಯಲ್ಲಿ ವಾಸ ಮಾಡುವಂತಾಗಿದೆ.
ಹಿರಿಯೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಇಂತಹದ್ದೊಂದು ಅಮಾನವೀಯ ಘಟನೆ ನಡೆದಿದ್ದು, ಸುಮಾರು ಮೂರು ದಶಕಗಳಿಂದ ಸ್ವಂತ ಜಾಗವಿಲ್ಲದ ನಿರ್ಗತಿಕರು ಹರಿಶ್ಚಂದ್ರ ಘಾಟ್ನ ಪಾರ್ಕ್ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು, ನಗರಸಭೆ ಅಧಿಕಾರಿಗಳು ಅವರಿಗೆ ಆಶ್ರಯ ಯೋಜನೆಯಡಿ ಸೂರಿನ ವ್ಯವಸ್ಥೆಯನ್ನೂ ಮಾಡದೆ ಏಕಾಏಕಿ ನಿರ್ಗತಿಕರ ಮನೆಗಳನ್ನು ಕೆಡವಿಹಾಕಿದ್ದಾರೆ. ಹೀಗಾಗಿ ಮನೆ, ಗುಡಿಸಲುಗಳನ್ನು ಕಳೆದುಕೊಂಡ ಏಳು ಬಡ ಕುಟುಂಬಗಳು ತೆರೆದ ಟೆಂಟ್ ಹಾಕಿಕೊಂಡು ಬೀದಿಯಲ್ಲಿ ಅಡುಗೆ ತಯಾರಿಸಿ ಊಟ ಮಾಡಿ ಬದುಕು ಸಾಗಿಸುತ್ತಿದ್ದಾರೆ.
ರಾತ್ರಿಯಿಡೀ ಸುರಿದ ಜಿಟಿ ಜಿಟಿ ಮಳೆಯಲ್ಲೇ ನಿರ್ಗತಿಕ ಹೆಂಗಸರು ಮಕ್ಕಳು ರಾತ್ರಿ ಕಳೆದಿದ್ದಾರೆ, ನೊಂದವರ ಸಹಾಯಕ್ಕೆ ಸ್ಥಳೀಯ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ ಅವರು ಕೂಡ ಧಾವಿಸಿಲ್ಲ. ಕೊರೊನಾ ಸೋಂಕು ಹರಡಿರುವ ಹೆಚ್ಚಿನ ಪ್ರಕರಣಗಳು ಹಿರಿಯೂರು ನಗರದಲ್ಲೇ ಇವೆ. ಹೀಗಾಗಿ ಮನೆಯಿಂದ ಅನಗತ್ಯವಾಗಿ ಹೊರಗೆ ಬರಬೇಡಿ ಎಂದು ಆದೇಶ ನೀಡುವ ಸರ್ಕಾರ, ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ನಿರ್ಗತಿಕ ಕುಟುಂಬಗಳಿಗೆ ಮನೆಯೊಳಗೆ ಇರಲು ಏನು ವ್ಯವಸ್ಥೆ ಮಾಡುತ್ತದೆ ಎಂಬ ಪ್ರಶ್ನೆ ಎದುರಾಗಿದೆ.
Related Articles
Thank you for your comment. It is awaiting moderation.
Comments (0)