ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಸಾರ್ವಜನಿಕರ ದೂರು; ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ
- by Suddi Team
- June 25, 2025
- 10 Views

ಬೆಂಗಳೂರು: ವಾಯು ಹಾಗೂ ಜಲ ಕಾಯ್ದೆಗಳ ಉಲ್ಲಂಘನೆ, ಕರ್ತವ್ಯ ಲೋಪ, ದುರಾಡಳಿತ, ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆರೋಪ ಸಂಬಂಧ ಸಾಲು ಸಾಲು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್ಪಿಸಿಬಿ) ಬೆಂಗಳೂರಿನ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಕೆಎಸ್ಪಿಸಿಬಿ ವಿರುದ್ಧ ಸಾರ್ವಜನಿಕರಿಂದ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ಸೂಚನೆ ಮೇರೆಗೆ ಲೋಕಾಯುಕ್ತ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ಕೈಗೊಂಡರು. ನಗರದ ಎಂ.ಜಿ.ರಸ್ತೆಯ ಕೆಎಸ್ಪಿಸಿಬಿ ಮುಖ್ಯ ಕಚೇರಿ, ಬಸವೇಶ್ವರನಗರ, ಪೀಣ್ಯ ಕೈಗಾರಿಕಾ ಪ್ರದೇಶದ ವಲಯ ಕಚೇರಿಗಳ ಮೇಲೆ ನ್ಯಾಯಾಂಗ ಹಾಗೂ ಪೊಲೀಸ್ ಅಧಿಕಾರಿಗಳ 27 ತಂಡಗಳು ಏಕಕಾಲಕ್ಕೆ ದಾಳಿ ನಡೆಸಿವೆ. ಪರಿಶೀಲನೆ ವೇಳೆ ಕೆಎಸ್ಪಿಸಿಬಿ ಮುಖ್ಯ ಕಚೇರಿ ಹಾಗೂ ವಲಯ ಕಚೇರಿಗಳಲ್ಲಿ ಹಲವು ನ್ಯೂನ್ಯತೆಗಳು ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖುದ್ದು ಪರಿಶೀಲಿಸಿದ ಲೋಕಾಯುಕ್ತರು:
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಎಂ.ಜಿ ರಸ್ತೆಯಲ್ಲಿರುವ ಕೆಎಸ್ಪಿಸಿಬಿ ಮುಖ್ಯ ಕಚೇರಿಗೆ ಖುದ್ದು ತೆರಳಿ ಪರಿಶೀಲಿಸಿದರು. ಈ ವೇಳೆ, ಮಂಡಳಿಯ ಅಧಿಕಾರಿಗಳು ಅಥವಾ ನೌಕರರ ಚಲನವಲನ ವಹಿ ಹಾಗೂ ನಗದು ಘೋಷಣಾ ವಹಿ ನಿರ್ವಹಿಸದಿರುವುದು ಕಂಡು ಬಂದಿದೆ. 2025-26ನೇ ಸಾಲಿನಲ್ಲಿ ವಾಯು ಹಾಗೂ ಜಲ ಕಾಯ್ದೆಗಳ ಉಲ್ಲಂಘನೆ ಸಂಬಂಧ ಸ್ವೀಕರಿಸಲಾದ ಅರ್ಜಿಗಳ ಬಗ್ಗೆ ಕೆಎಸ್ಪಿಸಿಬಿ ಕಾರ್ಯದರ್ಶಿಯಿಂದ ಮಾಹಿತಿ ಪಡೆದ ಲೋಕಾಯುಕ್ತರು, ಪ್ರತಿ ಅರ್ಜಿ ವಿಲೇವಾರಿಗೆ ತೆಗೆದುಕೊಂಡ ಸಮಯ ಹಾಗೂ ಕ್ರಮವನ್ನು ವಿವರವಾಗಿ ಸಲ್ಲಿಸುವಂತೆ ಸೂಚಿಸಿದರು.
ಸಕಾಲ ಕಾಯ್ದೆಯಡಿ ಸ್ವೀಕರಿಸಿರುವ ಅರ್ಜಿಗಳನ್ನು 100ರಿಂದ 120 ದಿನಗಳೊಳಗೆ ಇತ್ಯರ್ಥ ಪಡಿಸಬೇಕು. ಇತ್ಯರ್ಥ ಪಡಿಸದ ಅರ್ಜಿಗಳ ವಿವರಗಳನ್ನು ಕಾರಣ ಸಹಿತ ತಿಳಿಸಬೇಕು. ಮೈನಿಂಗ್ ಸಂಬಂಧ ಸ್ವೀಕರಿಸಲಾದ ಅರ್ಜಿಗಳು ಹಾಗೂ ಅವುಗಳ ವಿಲೇವಾರಿ ವಿವರಗಳನ್ನು ಸಲ್ಲಿಸಬೇಕು. ಪ್ರಸಕ್ತ ಸಾಲಿನಲ್ಲಿ ವಾಯು ಮತ್ತು ಜಲ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಮುಚ್ಚಿರುವ ಕೈಗಾರಿಕಾ ಘಟಕಗಳ ವಿವರಗಳು ಹಾಗೂ ತಪಾಸಣೆ ನಡೆಸಿರುವ ಕೈಗಾರಿಗಳ ವಿವರಗಳನ್ನು ಒದಗಿಸುವಂತೆ ತಿಳಿಸಿದರು.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿರುವ ಕೆರೆಗಳಿಗೆ ಹರಿಯುತ್ತಿರುವ ತ್ಯಾಜ್ಯ ನೀರನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳ ವಿವರಗಳು, ನಗರದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್ಟಿಪಿ) ಸ್ಥಾಪಿಸದ ಆಪಾರ್ಟ್ಮೆಂಟ್ಗಳ ವಿವರ ಹಾಗೂ ಅವುಗಳ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಕೇಳಿದರು. ಮಾಹಿತಿ ನೀಡಲು ತಡಬಡಾಯಿಸಿದ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.
ವಲಯ ಕಚೇರಿಗಳ ಮೇಲೆ ದಾಳಿ:
ಬಸವೇಶ್ವರನಗರದ ಕೆಎಸ್ಪಿಸಿಬಿ ವಲಯ ಕಚೇರಿ ಮೇಲೆ ಉಪ ಲೋಕಾಯುಕ್ತ ಬಿ.ವೀರಪ್ಪ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲಿಸಲಾಯಿತು. ಈ ವೇಳೆ ಹಲವು ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕಚೇರಿಯ ಹಾಜರಾತಿ ಪುಸ್ತಕದಲ್ಲಿ ಕೆಲವು ಸಿಬ್ಬಂದಿ ಸಹಿ ಮಾಡದಿರುವುದು, ಚಲನವಲನ ವಹಿಯಲ್ಲಿ ಸಂಪೂರ್ಣ ಮಾಹಿತಿ ಇಲ್ಲದಿರುವುದು, ನಗದು ವಹಿಯಲ್ಲಿ ಕಚೇರಿಗೆ ಬಂದಾಗ ಮತ್ತು ಹೋದಾಗ ತಮ್ಮ ಬಳಿ ಇದ್ದ ನಗದು ಘೋಷಿಸದಿರುವುದು ಕಂಡು ಬಂದಿತು. ಅಧಿಕಾರಿ/ನೌಕರರ ಮೊಬೈಲ್ಗಳಲ್ಲಿನ ವಹಿವಾಟು ಪರಿಶೀಲಿಸಿದ ಉಪ ಲೋಕಾಯುಕ್ತರು, ಯುಪಿಐ ವಹಿವಾಟಿನಲ್ಲಿ ಅವರ ವೇತನಕ್ಕಿಂತ ಅತಿ ಹೆಚ್ಚು ಆರ್ಥಿಕ ವಹಿವಾಟು ಮಾಡಿರುವ ಅಧಿಕಾರಿ/ಸಿಬ್ಬಂದಿಯ ಒಂದು ವರ್ಷದ ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್ ಹಾಗೂ ಯುಪಿಐ ಸ್ಟೇಟ್ಮೆಂಟ್ನೊಂದಿಗೆ ತಾಳೆ ಮಾಡಿ ವರದಿ ಸಲ್ಲಿಸಲು ಸೂಚಿಸಿದರು.
ಮಾಹಿತಿ ನೀಡಲು ಪರದಾಡಿದ ಅಧಿಕಾರಿಗಳು:
ರಾಜರಾಜೇಶ್ವರಿ ನಗರ ವಲಯದಲ್ಲಿನ ಕೆರೆಗಳು ಕಲುಷಿತಗೊಂಡಿದ್ದು, ಅವುಗಳ ಸುಧಾರಣೆಗೆ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಲಯದಲ್ಲಿ ಎಷ್ಟು ಕಾರ್ಖಾನೆಗಳು, ಆಸ್ಪತ್ರೆಗಳು ಅಪಾರ್ಟ್ಮೆಂಟ್ಗಳಿವೆ ಎಂಬ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಲಾಗದೆ ತಡಬಡಿಸಿದರು. ಕೆರೆಗಳನ್ನು ಕಲುಷಿತಗೊಳಿಸುತ್ತಿರುವ ಕಾರ್ಖಾನೆಗಳು, ಆಸ್ಪತ್ರೆಗಳು ಹಾಗೂ ಅಪಾರ್ಟ್ಮೆಂಟ್ಗಳನ್ನು ಗುರುತಿಸಲಾಗಿದೆಯೇ ಎಂಬ ಪ್ರಶ್ನೆಗೂ ಅಧಿಕಾರಿಗಳು ಉತ್ತರಿಸಲು ಪರದಾಡಿದರು.
ವೃಷಭಾವತಿ ನದಿಗೆ ಕಲುಷಿತ ನೀರು ಹರಿಯುತ್ತಿರುವ ಬಗ್ಗೆ ಯಾವುದಾದರೂ ಪ್ರಾಧಿಕಾರದ ವಿರುದ್ಧ ವರದಿ ಅಥವಾ ದೂರು ಸಲ್ಲಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಅಧಿಕಾರಿಗಳು ಮಾಹಿತಿ ನೀಡಲಿಲ್ಲ. ಈ ನದಿಯ ಬಫರ್ ವಲಯದಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗಿದೆಯೇ ಎಂಬ ಪ್ರಶ್ನೆಗೂ ಅಧಿಕಾರಿಗಳು ಉತ್ತರಿಸಲಿಲ್ಲ. ವಾಯು ಮತ್ತು ಶಬ್ಧ ಮಾಲಿನ್ಯ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಒದಗಿಸಲು ವಿಫಲರಾದರು. ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತರು ಕೆಂಡಮಂಡಲರಾದರು. ಮತ್ತೊಂದೆಡೆ, ಲೋಕಾಯುಕ್ತ ಐಜಿಪಿ ಸುಬ್ರಮಣ್ಯೇಶ್ವರ ರಾವ್ ಅವರ ನೇತೃತ್ವದಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದ ಕೆಎಸ್ಪಿಸಿಬಿ ವಲಯ ಕಚೇರಿ ಮೇಲೆ ದಾಳಿ ನಡೆಸಿ, ಪರಿಶೀಲಿಸಲಾಯಿತು.
Related Articles
Thank you for your comment. It is awaiting moderation.
Comments (0)