ಬಿಜೆಪಿ ಜೊತೆ ಹೋದ್ರೆ ಎಲ್ಲಾ ಕೇಸ್ ಖಲ್ಲಾಸ್, ಇಲ್ಲಾಂದ್ರೆ ಎಲ್ಲವನ್ನು ಎದುರಿಸಬೇಕು: ಡಿ.ಕೆ.ಸುರೇಶ್

ಬೆಂಗಳೂರು: ಬಿಜೆಪಿಗೆ ಹೋದ್ರೆ ಎಲ್ಲಾ ಕೇಸ್‌ಗಳು ಖಲ್ಲಾಸ್ ಆಗಲಿವೆ. ಇಲ್ಲದಿದ್ರೆ ಸಿಬಿಐ, ಇಡಿ, ಐಟಿ ದಾಳಿಗಳನ್ನು ಎದುರಿಸಬೇಕಾಗುತ್ತದೆ. ವಿರೋಧ ಪಕ್ಷಗಳಿಗೆ ಈ ಎರಡು ದಾರಿ ಬಿಟ್ಟರೆ ಬೇರೆ ದಾರಿ ಇಲ್ಲ. ಕೇಂದ್ರ ಸರ್ಕಾರ ತನ್ನ ಅದೀನದ ವಿವಿಧ ತನಿಖಾ ಸಂಸ್ಥೆಯನ್ನು ಬಳಸಿಕೊಂಡು ನಮ್ಮ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಸಂಸದರು ಆರೋಪಿಸಿದರು.

ಸದಾಶಿವನಗರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಂಸತ್ ಸದಸ್ಯರಾದ ಡಿ.ಕೆ.ಸುರೇಶ್ ಮುದ್ದಹನುಮೇಗೌಡ, ಧೃವನಾರಾಯಣ್, ಚಂದ್ರಪ್ಪ, ಕೆ.ಸಿ. ರಾಮಮೂರ್ತಿ, ಜಿ.ಸಿ. ಚಂದ್ರಶೇಖರ್ ಜಂಟಿ ಸುದ್ಧಿಗೋಷ್ಠಿ ನಡೆಸಿದರು. ಉಪ ಚುನಾವಣೆ ಆರಂಭದಲ್ಲಿ ಬಿಜೆಪಿ ಮುಖಂಡ ಶ್ರೀರಾಮುಲು ಡಿಕೆಶಿ ಜೈಲಿಗೆ, ಶಾಂತಾ ದೆಹಲಿಗೆ ಎಂದು ಹೇಳಿದ್ದರು. ಇದನ್ನು ಗಮನಿಸಿದರೆ ನಮ್ಮ ವಿರುದ್ಧ ಸಿಬಿಐ ಮೋರ್ಚಾ, ಇಡಿ ಮೋರ್ಚಾ, ಐಟಿ ಮೋರ್ಚಾಗಳು ಕೆಲಸ ಮಾಡುತ್ತಿವೆ ಎಂಬುದು ಸ್ಪಷ್ಟ. ಶ್ರೀರಾಮುಲು ಹೇಳಿಕೆ ಅವರು ಕೊಟ್ಟಿದ್ದಲ್ಲ, ಅವರ ರಾಷ್ಟ್ರೀಯ ನಾಯಕರ ಹೇಳಿಕೆ ಎಂಬುದು ನನ್ನ ಅಭಿಪ್ರಾಯ ಎಂಬ ಅನುಮಾನವಿದೆ. ರಾಜ್ಯದ ಜನಪ್ರತಿನಿಧಿಗಳಿಗೆ ಇಡಿ ನಿರ್ದೇಶಕರು ಭೇಟಿಗೆ ಅವಕಾಶ ನೀಡುತ್ತಿಲ್ಲ ಇದು ಇನ್ನಷ್ಟು ಬೇಸರ ತರಿಸಿದೆ ಎಂದರು.

ಸಂಸದ ಕೆ.ಸಿ.ರಾಮಮೂರ್ತಿ ಮಾತನಾಡಿ, ಇಡಿ ನಿರ್ದೇಶಕರ ಭೇಟಿಗೆ ಒಂದೂವರೆ ತಿಂಗಳಿಂದ ಅವಕಾಶ ಕೇಳುತ್ತಿದ್ದೇವೆ. ಆದ್ರೆ, ಅವರು ಯಾವುದೇ ಉತ್ತರ ನೀಡಿಲ್ಲ. ಅವರಿಗೆ ಯಾವುದಾದರೂ ಒತ್ತಡವಿರ ಬಹುದು. ಕನಿಷ್ಠ ಹೊಸದಾಗಿ ಬಂದಿರುವ ಇಡಿ ನಿರ್ದೇಶಕರಾದರು ನಮಗೆ ಭೇಟಿಗೆ ಅವಕಾಶ ನೀಡಲಿ. ನಾವು ಮತ್ತೆ ಮತ್ತೆ ಅವರನ್ನು ಭೇಟಿಯಾಗಲು ಅವಕಾಶ ಕೇಳುತ್ತೇವೆ. ಇಡಿ ನಿರ್ದೇಶಕರ ನಡೆ ನಮಗೆ ಬೇಸರ ತರಿಸಿದೆ ಎಂದು ಹೇಳಿದರು.

ಸಂಸದ ದ್ರುವನಾರಾಯಣ್ ಮಾತನಾಡಿ, ಸಿಬಿಐ, ಇಡಿ, ಐಟಿಯನ್ನು ಕೇಂದ್ರ ಸರ್ಕಾರ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ತಮ್ಮ ರಾಜಕೀಯ ವಿರೋಧಿಗಳನ್ನು ಬಗ್ಗು ಬಡಿಯಲು ಈ ರೀತಿ ಮಾಡುತ್ತಿದ್ದಾರೆ‌. ಅಧಿಕಾರ ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳನ್ನು ಸದೆಬಡಿಯುವ ಕೆಲಸ ಮಾಡಲಾಗುತ್ತಿದೆ ಎಂದರು.

ಸಂಸದ ಜಿ.ಸಿ.ಚಂದ್ರಶೇಖರ್ ಮಾತನಾಡಿ, ದೇಶದಲ್ಲಿರುವ ಎಲ್ಲಾ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಿರೋಧ ಪಕ್ಷದವರಿಗಿರುವುದು ಎರಡೇ ದಾರಿ. ಒಂದು ಅವರ ಜೊತೆ ಹೋಗುವುದು ಇಲ್ಲ ಏಜೆನ್ಸಿಗಳನ್ನು ಎದುರಿಸುವುದು. ಡಿಕೆ ಶಿವಕುಮಾರ್ ಅವರನ್ನು ದಿನದಿಂದ ದಿನಕ್ಕೆ ದೊಡ್ಡ ಲೀಡರ್ ಆಗಿ ನೀವೇ ಬೆಳೆಸುತ್ತಿದ್ದೀರಿ. ಇವತ್ತು ಡಿಕೆಶಿ ವ್ಯಕ್ತಿತ್ವದ ಬಗ್ಗೆ ರಾಷ್ಟ್ರೀಯ ವಾಹಿನಿಗಳಲ್ಲೂ ಚರ್ಚೆ ನಡೆಯುತ್ತಿದೆ. ಯಾರಿಂದಲೂ ಡಿಕೆಶಿ ಮುಗಿಸಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದರು.

Related Articles

Comments (0)

Leave a Comment