ಗೌರವಧನ ಎಂದರೆ ಗೌರವಯುತವಾಗಿರಬೇಕು; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಬೆಂಗಳೂರು: ಬಿಸಿಯೂಟ ನೌಕರರಿಗೆ ಕನಿಷ್ಟ ಗೌರವಧನ ನಿಗದಿಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಈ ಸಂಬಂಧ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ (ಎಂಇಪಿ) ಅಧ್ಯಕ್ಷೆ ನೌಹೀರಾ ಶೇಖ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠದಲ್ಲಿ ಸೋಮವಾರ ನಡೆಯಿತು.

ಈ ವೇಳೆ ಸಿಜೆ ದಿನೇಶ್ ಮಹೇಶ್ವರಿ, ಬಿಸಿಯೂಟ ನೌಕರರು ಬೇರೆಯವರಿಗೆ ಅಡುಗೆ ಮಾಡಿಕೊಡುತ್ತಾರೆ. ಆದರೆ ಅವರ ಊಟಕ್ಕೆ ನೀವು ಹಣ ನೀಡುತ್ತಿಲ್ಲವೇಕೆ ಎಂದು ಖಾರವಾಗಿ ಪ್ರಶ್ನಿಸಿದರು.

ದನಿಯಿಲ್ಲದ ಜನರಿಗೆ ನೀವು ಅಪಮಾನ‌ ಮಾಡುತ್ತಿದ್ದೀರಿ. ಅವರಿಗೆ ನೀಡುವ ಗೌರವಧನ ಗೌರವಯುತವಾಗಿಲ್ಲದಿದ್ದರೆ ಹೇಗೆ? ಬಿಸಿಯೂಟ ಮಾಡುವುದೆಂದರೆ ಕೇವಲ ಕುಕ್ಕರ್ ಕೂಗಿಸಿದಂತಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಹಾಗೆಂದ ಮಾತ್ರಕ್ಕೆ ನೌಕರರ ಮುಷ್ಕರವನ್ನು ನ್ಯಾಯಾಲಯ ಸಮರ್ಥಿಸುವುದಿಲ್ಲ. ಅವರಿಗೆ ನ್ಯಾಯಯುತ ಗೌರವಧನ ನೀಡುವ ಕುರಿತು 6 ವಾರಗಳಲ್ಲಿ ನಿಮ್ಮ ನಿಲುವೇನು ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದ ಪೀಠ, ಅರ್ಜಿ ವಿಚಾರಣೆ ಮುಂದೂಡಿತು.

Related Articles

Comments (0)

Leave a Comment