ವ್ಹೀಲಿಂಗ್ ನಿಯಂತ್ರಣಕ್ಕೆ ಕಾನೂನು ರೂಪಿಸುವ ಹೈಕೋರ್ಟ್ ಸಲಹೆ ಪಾಲಿಸಿ: ಸರ್ಕಾರಕ್ಕೆ ಸುರೇಶ್ ಕುಮಾರ್ ಪತ್ರ
- by Suddi Team
- May 14, 2025
- 42 Views

ಬೆಂಗಳೂರು:ದ್ವಿಚಕ್ರ ವಾಹನಗಳ ವೀಲಿಂಗ್ ಹಾವಳಿಯ ಬಗ್ಗೆ ಹೈಕೋರ್ಟ್ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಈ ಕುರಿತು ಅಗತ್ಯ ಕಾನೂನು ರೂಪಿಸಬೇಕೆಂದು ನೀಡಿರುವ ಸಲಹೆಯನ್ನು ಪರಿಗಣಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
ದಿನಾಂಕ:13.05.2025 ಮಂಗಳವಾರದಂದು ರಾಜ್ಯದ ಉಚ್ಚ ನ್ಯಾಯಾಲಯವು ರಾಜ್ಯದಲ್ಲಿ ವಿಪರೀತವಾಗುತ್ತಿರುವ ದ್ವಿಚಕ್ರ ವಾಹನಗಳ ವೀಲಿಂಗ್ ಹಾವಳಿಯ ಬಗ್ಗೆ ತನ್ನ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ ಈ ಕುರಿತು ಅಗತ್ಯ ಕಾನೂನು ರೂಪಿಸಬೇಕೆಂದು ನ್ಯಾ.ವಿ.ಶ್ರೀಶಾನಂದ ಅವರಿದ್ದ ಏಕಸದಸದ್ಯ ನ್ಯಾಯಾಪೀಠ (ಧಾರವಾಡ) ನಿರ್ದೇಶಿಸಿದೆ.ಉಚ್ಚ ನ್ಯಾಯಾಲಯದ ಈ ಕಳಕಳಿ ಸಮಾಜದ ಎಲ್ಲಾ ಪ್ರಜ್ಞಾವಂತರ ಭಾವನೆಯನ್ನು ಪ್ರತಿಧ್ವನಿಸಿದೆ. ವೀಲಿಂಗ್ ಎಂಬುವುದು ಒಂದು ಹುಚ್ಚಾಟದ ಹವ್ಯಾಸವಾಗಿದ್ದು ಇದರಿಂದ ವೀಲಿಂಗ್ ಮಾಡುವ ವ್ಯಕ್ತಿಗಳಲ್ಲದೆ ಅಮಾಯಕ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಕಾನೂನಿನ ಭಯವಿಲ್ಲದೆ, ಅನ್ಯರ ಬಗ್ಗೆ ಕಾಳಜಿ ಇಲ್ಲದೆ ಬಹಳಷ್ಟು ಸಲ ಪುಂಡ ಪೋಕರಿಗಳು ಮಾಡುತ್ತಿರುವ ಈ ಘನಕಾರ್ಯ ಸಮಾಜಕ್ಕೆ ಅಪಾಯಕಾರಿ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ನಾನೇ ಕೆಲವು ಸಲ ವೀಲಿಂಗ್ ಮಾಡುವ ವಾಹನ ಸವಾರರನ್ನು ಹಿಡಿದು ತಾಕೀತು ಮಾಡಿದ್ದೇನೆ. ಕೆಲವು ಸಲ ಸಾಧ್ಯವಾಗದಿದ್ದಾಗ ವೀಲಿಂಗ್ ಮಾಡುವ ವಾಹನಗಳ ಫೋಟೋ ತೆಗೆದು ಸಂಬಂಧಪಟ್ಟ ಸಂಚಾರಿ ಪೋಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಅವರನ್ನು ಹಿಡಿದು ಶಿಕ್ಷಿಸುವಂತೆ ಮಾಡಿದ್ದೇನೆ. ಇದೀಗ ವೀಲಿಂಗ್ ಹಾವಳಿಗೆ ಸಂಪೂರ್ಣ ಇತಿಶ್ರೀ ಹೇಳುವ ಕಾಲ ಬಂದಿದೆ. ನಾಗರೀಕರ ವಿಶೇಷವಾಗಿ ಯುವಕರ ಸ್ವಾಸ್ಥ್ಯ, ನೆಮ್ಮದಿ ಕಾಪಾಡಲು ರಾಜ್ಯ ಉಚ್ಚ ನಾಯಾಲಯದ ಅನಿಸಿಕೆಯನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಈ ಕುರಿತು ಅಗತ್ಯ ತಿದ್ದುಪಡಿ ತರಲು ಸಂಬಂಧಪಟ್ಟವರಿಗೆ ಸೂಚನೆ ನೀಡುವಂತೆ ಕೋರಿ ಪರಮೇಶ್ವರ್ ಅವರಿಗೆ ಪತ್ರದ ಮೂಲಕ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.
Comments (0)