ಪೊಲೀಸರ ವರ್ಗಾವಣೆಗೆ ಸರ್ಕಾರದ ಸಹಕಾರ: ಸಿಎಂ

ಬೆಂಗಳೂರು : ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ವರ್ಗಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನೃಪತುಂಗಾ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದ್ರು.ಸಭೆಯಲ್ಲಿ ಗೃಹ ಖಾತೆ ನಿರ್ವಹಿಸುತ್ತಿರುವ ಡಿಸಿಎಂ ಪರಮೇಶ್ವರ್, ಡಿಜಿಪಿ ನೀಲಮಣಿ ರಾಜು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ರು.ಪೊಲೀಸ್ ಇಲಾಖೆಯ ಸ್ಥಿತಿಗತಿ,ಕಾನೂನು ಸುವ್ಯವಸ್ಥೆ, ಇಲಾಖೆಯಲ್ಲಿನ ಮೂಲಸೌಕರ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಸಿಎಂ ಸುದೀರ್ಘ ಚರ್ಚೆ ನಡೆಸಿದ್ರು.

ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ರಾಜ್ಯ ಪೊಲೀಸ್ ಇಲಾಖೆಯ ಒಂದು ಆ್ಯಪ್ ಕೂಡ ಬಿಡುಗಡೆ ಮಾಡಿದ್ದೇವೆ.ಎಲ್ಲಾದರೂ ಘಟನೆಗಳು ನಡೆದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಇದರಿಂದ ಮಾಹಿತಿ ಸಿಗಲಿದೆ. ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದ್ರು.

ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಜನರ ರಕ್ಷಣೆ ಮೂಲಕ ಸರ್ಕಾರಕ್ಕೆ ಗೌರವ ತಂದುಕೊಡುವುದು ಮುಖ್ಯ.ಹೀಗಾಗಿ ಇಲಾಖೆಗೆ ಅಗತ್ಯ ಸಲಹೆಗಳನ್ನು ಕೊಟ್ಟಿದ್ದೇನೆ. ಪೋಲೀಸ್ ಇಲಾಖೆ ರಾಜ್ಯದ ಮುಖವಾಣಿಯಂತೆ. ಪೊಲಿಸ್ ಇಲಾಖೆ ಚೆನ್ನಾಗಿದ್ರೆ ಎಲ್ಲವೂ ಚೆನ್ನಾಗಿರುತ್ತೆ ಹಾಗಾಗಿ ನಾವು ಕೂಡ ಇಲಾಖೆಗೆ ಬೇಕಾದ ಸಹಕಾರ ಕೊಡುತ್ತೇವೆ ಎಂದು ಸಿಎಂ ಅಭಯ ನೀಡಿದ್ರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಯಾವುದೇ ಅಮಾಯಕರನ್ನು ಎಸ್ಐಟಿ ತಂಡ ಟಾರ್ಚರ್ ಮಾಡಿಲ್ಲ. ಬಂಧನವಾಗಿ ಬಿಡುಗಡೆಯಾದವರು ಪೊಲೀಸರ ಸೌಮ್ಯತೆಯ ಬಗ್ಗೆ ಈಗಾಗಲೇ ಹೇಳಿದ್ದಾರೆ,ಈ ಕೇಸ್ ನಲ್ಲಿ ಪೊಲೀಸರು ಬಹಳಷ್ಟು ಮಾಹಿತಿ ಕಲೆ ಹಾಕಿದ್ದಾರೆ ಎಂದ್ರು.

ವಿಜಯಪುರದಲ್ಲಿ ನಡೆದಿದ್ದ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ 25 ವರ್ಷಗಳ ಇತಿಹಾಸವಿದೆ,ಆದರೆ ಕೇಸನ್ನು ಈಗ ಬಯಲಿಗೆ ಎಳೆಯಲಾಗಿದೆ. ಅಧಿಕಾರಿಗಳು ಈ ಸಂಬಂಧ ತನಿಖೆ ಮಾಡುತ್ತಿದ್ದಾರೆ.ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ಕಟ್ಟು ನಿಟ್ಟಿನ ತನಿಖೆಗೆ ಆದೇಶ ನೀಡಲಾಗಿದೆ ಎಂದ್ರು.

Related Articles

Comments (0)

Leave a Comment