ಡಿಸಿಎಂ ತವರಲ್ಲಿ ಬೀಡು ಬಿಟ್ಟ ಹಂಟರ್ ಫ್ಯಾಮಿಲಿ: ಬೆಸ್ತು ಬಿದ್ದ ಗ್ರಾಮಸ್ಥರು

ತುಮಕೂರು:ಈ ಊರಲ್ಲಿ ಮೇಯಲು ಹೋದ ಕುರಿಮಂದೆಯಲ್ಲಿ ಪ್ರತಿ ದಿನ ಒಂದೊಂದೇ ಕುರಿ,ಮೇಕೆಗಳು ನಾಪತ್ತೆಯಾಗುತ್ತಿವೆ.ಕುರಿಗಳ ಕಾಣೆಯ ನಿಗೂಢ ಭೇದಿಸಲು ಹೊರಟ ಗ್ರಾಮಸ್ಥರು ಪರಿವಾರದೊಂದಿಗೆ ಬೀಡುಬಿಟ್ಟಿದ್ದ ಹಂಟರ್ ಫ್ಯಾಮಿಲಿ ನೋಡಿ ಬೆಸ್ತು ಬಿದ್ದಿದ್ದಾರೆ.ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಸ್ವ
ಕ್ಷೇತ್ರ ಕೊರಟಗೆರೆ ತಾಲ್ಲೂಕಿನ ಬುರುಗನಹಳ್ಳಿ ಕುರಿ ಮೇಕೆಗಳು ನಿಗೂಢ ರೀತಿಯಲ್ಲಿ ಕಾಣೆಯಾಗುತ್ತಿವೆ.ಗ್ರಾಮದ ಬೆಟ್ಟಕ್ಕೆ ಮೇಯಲು ಹೋದ ಕುರಿಗಳು ಒಂದೊಂದೇ ನಾಪತ್ತೆಯಾಗುತ್ತಿವೆ.ಇದರಿಂದ ಆತಂಕಕ್ಕೆ‌ ಸಿಲುಕಿದ ಗ್ರಾಮಸ್ಥರು ಯಾರೋ ಕುರಿ,ಮೇಕೆಗಳನ್ನು ಕದಿಯುತ್ತಿದ್ದಾರೆ ಎಂದು ಅನುಮಾನಗೊಂಡು ಕುರಿಮಂದೆಯ ಹಿಂದೆ ಪತ್ತೆದಾರಿ ಕೆಲಸ ನಡೆಸಿದರು.

ಬೆಟ್ಟದ ಮೇಲೆ ಹೋಗುತ್ತಿದ್ದಂತೆ ಅಣತಿ ದೂರದಲ್ಲಿ ಹಂಟರ್ ಫ್ಯಾಮಿಲಿ ಕಂಡಿತು.ಇದು ಬೇರೆ ಯಾವುದೋ ಆಗಂತಕರ ತಂಡವಲ್ಲ.ಚಿರತೆಯೊಂದು ತನ್ನ ಮರಿಗಳೊಂದಿಗೆ ಗುಡ್ಡದ ಬಿಲದಲ್ಲಿ ವಾಸ್ತವ್ಯ ಹೂಡಿತ್ತು.ಚಿರತೆ ಫ್ಯಾಮಿಲಿ ನೋಡಿದ ಗ್ರಾಮಸ್ಥರು ಬೆಸ್ತು ಬೀದ್ದು ಗ್ರಾಮಕ್ಕೆ ಓಡಿದರು.

ಬೆಟ್ಟದಲ್ಲಿ ಬಿಡಾರ ಹೂಡಿರುವ ಚಿರತೆ ಪ್ರತಿದಿನ ಬೆಟ್ಟಕ್ಕೆ ಬರುವ ಕುರಿ,ಮೇಕೆಗಳ ಹಿಂಡಿನಿಂದ ಒಂದೊಂದೇ ಕುರಿಯನ್ನು ಭೇಟೆಯಾಡುತ್ತಿದೆ ಎನ್ನುವುದು ಖಾತರಿಯಾಗಿದ್ದು ಗ್ರಾಮಸ್ಥರು ನೆರವು ಕೋರಿ ಅರಣ್ಯ ಇಲಾಖೆ ಮೊರೆ ಹೋಗಿದ್ದಾರೆ.ತಮ್ಮ ಕುರಿ ಮೇಕೆಗಳನ್ನು ಉಳಿಸಿಕೊಡುವ ಜೊತೆ ಜನರ ಜೀವವನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ.

ಆದರೆ ಗ್ರಾಮಸ್ಥರ ಮನವಿಗೆ ಅರಣ್ಯ ಇಲಾಖೆ ಸ್ಪಂಧಿಸುತ್ತಿಲ್ಲ ಎಂದು ಜನರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಬಂದು ಚಿರತೆ ಹಾಗು ಮರಿಗಳನ್ನು ಹಿಡಿದು ಗ್ರಾಮಸ್ಥರಿಗೆ ಸಹಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸ್ವತಃ ಗೃಹ ಖಾತೆ ಹೊಂದಿರುವ ಡಿಸಿಎಂ ಪರಮೇಶ್ವರ್ ತವರಿನಲ್ಲೇ ಜನರು ಆತಂಕದಲ್ಲಿ ಬದುಕುವ ಸ್ಥಿತಿ ವಿಪರ್ಯಾಸವಾಗಿದೆ.

Related Articles

Comments (0)

Leave a Comment