ಸಾ.ರಾ.ಮಹೇಶ್ ಗೆ ರಾಜಕೀಯ ವ್ಯವಸ್ಥೆ ಬಗ್ಗೆ ತಿಳುವಳಿಕೆ ಇಲ್ಲ: ರಕ್ಷಣಾ ಸಚಿವೆ ಗರಂ

ಬೆಂಗಳೂರು: ಸಾ.ರಾ.ಮಹೇಶ್ ಅವರು ಕೇಂದ್ರ ಸಚಿವರ ಬಗ್ಗೆ ಮಾಡಿದ ವೈಯಕ್ತಿಕ ಟೀಕೆ ರಾಜ್ಯಸಭೆ ಘನತೆಗೆ ಚ್ಯುತಿವುಂಟು ಮಾಡಿದ್ದು, ಸಾ.ರಾ ಮಹೇಶ್ ರಿಗೆ ರಾಜಕೀಯ ವ್ಯವಸ್ಥೆ ಬಗ್ಗೆ ತಿಳುವಳಿಕೆ ಮತ್ತು ಗೌರವ ಇಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿ ಕಾರಿದ್ದಾರೆ.

ಕೊಡಗು ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ನಡುವೆ ಜಟಾಪಟಿ ವಿಚಾರವಾಗಿ ಪ್ರತಿಕಾ ಹೇಳಿಕೆ ಹೊರಡಿಸಿರುವ ರಕ್ಷಣಾ ಮಂತ್ರಿ, ಕೊಡಗು ಪ್ರವಾಸದ ಪಟ್ಟಿಯನ್ನು ಎರಡು ದಿನಗಳ ಹಿಂದೆ ತಯಾರಿ ಮಾಡಲಾಗಿತ್ತು ಮತ್ತು ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ಮಾಹಿತಿ ನೀಡಲಾಗಿತ್ತು. ಆದರೆ ನಿನ್ನೆ ಪ್ರವಾಸ ವೇಳೆ ಏಕಾಏಕಿ ಜಿಲ್ಲಾ ಸಚಿವರು ಕಾರ್ಯಕ್ರಮಗಳನ್ನು ಬದಲು ಮಾಡಿದರು. ಶಿಷ್ಠಚಾರದ ಪ್ರಕಾರ ಮೊದಲು ಮಾಜಿ ಸೇನಾಧಿಕಾರಿಗಳ ಜೊತೆ ಸಭೆ ನಡೆಯಬೇಕಿತ್ತು ಬಳಿಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಬೇಕಿತ್ತು ಆದರೆ ಸಚಿವ ಸಾ.ರಾ ಮಹೇಶ್ ಅವರು ಮೊದಲು ಅಧಿಕಾರಿಗಳ ಸಭೆ ನಡೆಸಲು ಒತ್ತಡ ಹಾಕಿದ್ರು ಎಂದು ವಿವರಿಸಿದ್ದಾರೆ.

ಅಧಿಕಾರಿಗಳ ಸಭೆಯಲ್ಲಿ ಮಾಧ್ಯಗಳಿಗೂ ಅವಕಾಶ ನೀಡಿ ಶಿಷ್ಠಚಾರ ಉಲ್ಲಂಘಿಸಲಾಗಿತ್ತು. ಮೊದಲು ಅಧಿಕಾರಿಗಳ ಸಭೆ ನಡೆಸುವಂತೆ ಸಾ ರಾ ಮಹೇಶ್ ಒತ್ತಾಯಿಸಿದರು. ಮತ್ತಷ್ಟು ಗೊಂದಲ ತಪ್ಪಿಸಲು ಅಧಿಕಾರಿಗಳ ಸಭೆಗೆ ತೆರಳಿದೆ. ಆದರೆ ಆಗಲೇ ಪತ್ರಿಕಾಗೋಷ್ಟಿಯನ್ನು ಕರೆಯಲಾಗಿತ್ತು. ಮಾಧ್ಯಮದವರ ಎದುರೇ ಅಧಿಕಾರಿಗಳ ಸಭೆಯನ್ನು ತರಾತುರಿಯಲ್ಲಿ ನಡೆಸಬೇಕಾಯಿತು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಜಿಲ್ಲಾಡಳಿತದ ಕಾರ್ಯಕ್ರಮದ ಪ್ರಕಾರವೇ ನಡೆದುಕೊಂಡರೂ ಸಾ ರಾ ಮಹೇಶ್ ಅವರ ಪ್ರತಿಕ್ರಿಯೆ ಮತ್ತು ಟೀಕೆ ದುರಾದೃಷ್ಟಕರವಾಗಿದೆ. ಜತೆಗೆ ರಕ್ಷಣಾ ಮಂತ್ರಿಗಳ ಪರಿವಾರ ಪದ ಬಳಕೆ ಬಗ್ಗೆ ತಪ್ಪು ವ್ಯಾಖ್ಯಾನ ಮಾಡಲಾಗುತ್ತಿದೆ. ರಕ್ಷಣಾ ಇಲಾಖೆಯ ಪರಿವಾರದಲ್ಲಿ ನಿವೃತ್ತ ಸೈನಿಕರು ಸೇರಿರುತ್ತಾರೆ ಎಂಬರ್ಥದಲ್ಲಿ ಪರಿವಾರ ಪದ ಬಳಸಲಾಗಿದೆ ಎಂದು ಸಚಿವೆ ಸ್ಪಷ್ಟೀಕರಣ ನೀಡಿದ್ದಾರೆ.

Related Articles

Comments (0)

Leave a Comment