ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸಖ್ಯ ಬೇಕೋ,ಸಿದ್ದರಾಮಯ್ಯ ಬೇಕೋ ನಿರ್ಧರಿಸಿಕೊಳ್ಳಿ: ಕೈಗೆ ಗೌಡರ ಷರತ್ತು
- by Suddi Team
- June 27, 2018
- 452 Views
ನವದೆಹಲಿ:ರಾಜ್ಯದಲ್ಲಿರುವ ಮೈತ್ರಿ ಸರ್ಕಾರದ ಅವಧಿ ಬಗ್ಗೆ ಹಾಗು ಕುಮಾರಸ್ವಾಮಿ ಬಜೆಟ್ ಮಂಡಿಸುವ ಕುರಿತು ನಕಾರಾತ್ಮಕ ಹೇಳಿಕೆ ನೀಡಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹಾಗು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಗರಂ ಆಗಿದ್ದಾರೆ.
ಲೋಕಸಭೆಯಲ್ಲಿ ನಿಮಗೆ ಜೆಡಿಎಸ್ ಸಖ್ಯ ಬೇಕೋ ಸಿದ್ದು ಬೇಕೋ ಎನ್ನುವ ಆಯ್ಕೆಯನ್ನು ನೀವೇ ಮಾಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಸಂದೇಶ ನೀಡುವ ಮೂಲಕ ಸರ್ಕಾರ ರಕ್ಷಣೆಗೆ ಹೊಸ ತಂತ್ರಗಾರಿಕೆಯನ್ನು ಸದ್ದಿಲ್ಲದೆ ದೇವೇಗೌಡರು ಹೆಣೆಯುತ್ತಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್ಗೆ ನೇರವಾಗಿಯೇ ದೂರು ನೀಡಿ ಷರತ್ತುಗಳನ್ನು ವಿಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸೇನಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದೆಹಲಿಗೆ ತೆರಳಿರುವ ದೇವೇಗೌಡರು ಪ್ರಮುಖವಾಗಿ ಲೋಕಸಭಾ ಚುನಾವಣಾ ವಿಷಯವನ್ನೇ ಪ್ರಸ್ತಾಪಿಸಿದ್ದಾರೆ.ಸಿದ್ದರಾಮಯ್ಯ ಬೇಕೋ? ಲೋಕಸಭೆ ಚುನಾವಣೆ ಬೇಕೋ? ಈ ಆಯ್ಕೆ ನೀವೇ ಮಾಡಿಕೊಳ್ಳಬೇಕು,ಸಮನ್ವಯ ಸಮಿತಿ ಪ್ರಮುಖ ವಿಚಾರಗಳ ಚರ್ಚೆಗೆ ಮಾತ್ರ ಸೀಮಿತವಾಗಿ ಉಳಿದ ವಿಚಾರಗಳನ್ನು ಸಿಎಂ, ಡಿಸಿಎಂ ನಿರ್ಧರಿಸಬೇಕು. ಹೈಕಮಾಂಡ್ ಮಟ್ಟದಲ್ಲಿ ಮಾತ್ರ ನಮ್ಮ ಒಪ್ಪಂದ, ಅದರ ಜಾರಿ ನಿಮ್ಮ ಕರ್ತವ್ಯ ಎನ್ನುವ ಸಂದೇಶವನ್ನು ನೀಡುವ ಮೂಲಕಹೊಸ ರಾಜಕೀಯ ದಾಳವನ್ನು ಉರುಳಿಸಿದ್ದಾರೆ.
ಈ ಸಂಬಂಧ ನವದೆಹಲಿಯಲ್ಲಿ ಮಾತನಾಡಿದ ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ ಜುಲೈ 5 ರಂದು ಬಜೆಟ್ ಮಂಡಿಸುವುದು ಶತಃಸಿದ್ದ,ಊಹಾಪೋಹಗಳನ್ನೆಲ್ಲಾ ಬಿಡಿ,ಯಾವ ಆತಂಕವೂ ಇಲ್ಲದೆ ಬಜೆಟ್ ಮಂಡನೆಯಾಗಲಿದೆ,ಅಂಗೀಕಾರವೂ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಜೆಟ್ ಕುರಿತು ಸಿದ್ದರಾಮಯ್ಯ ಹೇಳಿಕೆ ಪ್ರಸ್ತಾಪ ಮಾಡುತ್ತಿದ್ದಂತೆ ಸಿಡಿಮಿಡಿಗೊಂಡ ಗೌಡರು ಇನ್ನೊಬ್ಬರಿಗೆ ಹೆಸರು ಹೇಳಬೇಡಿ ಎಂದರು.ಇದು ಸಿದ್ದರಾಮಯ್ಯ ವಿರುದ್ಧ ಇರುವ ಅಸಮಧಾನವನ್ನು ಸ್ಪಷ್ಟಪಡಿಸಿದಂತಿತ್ತು.ಇದು ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದು ವಿರುದ್ಧ ಗೌಡರು ದೂರು ನೀಡಿದ್ದಾರೆ ಎನ್ನುವುದಕ್ಕೆ ನಿದರ್ಶನ ಎನ್ನುವ ಮಾತುಗಳು ಜೆಡಿಎಸ್ ಪಾಳಯದಲ್ಲಿ ಕೇಳಿಬರುತ್ತಿವೆ.
Related Articles
Thank you for your comment. It is awaiting moderation.
Comments (0)