ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ಜನ್ಮದಿನದ ಅಂಗವಾಗಿ ಏಕತಾ ಓಟ!

ಬೆಂಗಳೂರು: ದೇಶದ ಮೊದಲ ಗೃಹ ಸಚಿವ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನದ ಅಂಗವಾಗಿ ದೇಶಾದ್ಯಂತ ಏಕತಾ ಓಟ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನಲ್ಲೂ ಮೂರೂ ದಿಕ್ಕುಗಳಲ್ಲಿ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಏಕತಾ ಓಟ ನಡೆಯಿತು. ರಾಷ್ಟ್ರ ಧ್ವಜ ಹಿಡಿದು ಸಾವಿರಾರು ಜನರು ಮೆರವಣಿಗೆಯಲ್ಲಿ ಸಾಗಿದರು.

ಮಾನ್ಯತಾ ಟೆಕ್ ಪಾರ್ಕ್ ನಿಂದ ಥಣಿಸಂದ್ರದವರೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನೇತೃತ್ವದಲ್ಲಿ ಏಕತಾ ಓಟ ನಡೆಯಿತು. ಶಾಸಕ ವೈ.ಎ.ನಾರಾಯಣಸ್ವಾಮಿ, ಕ್ರಿಕೆಟಿಗ ವಿನಯ್ ಕುಮಾರ್ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಜನರು ಓಟದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸದಾನಂದ ಗೌಡ, ದೇಶದ ಏಕತೆಗಾಗಿ ಶ್ರಮಿಸಿದ ಮಹಾತ್ಮನ ಜನ್ಮ ದಿನವನ್ನು ಏಕತಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಆದ್ದರಿಂದ ಏಕತಾ ಓಟವನ್ನ ಹಮ್ಮಿಕೊಂಡಿದ್ದೇವೆ ಎಂದರು.

ಕಬ್ಬನ್ ಪಾರ್ಕ್ ನಿಂದ ವಸಂತ ನಗರದ ಸರ್ದಾರ್ ಪಟೇಲ್ ಭವನದವರೆಗೆ ಸಂಸದ ಪಿ.ಸಿ.ಮೋಹನ್ ನೇತೃತ್ವದಲ್ಲಿ ಏಕತಾ ಓಟ ಏರ್ಪಡಿಸಲಾಗಿತ್ತು. ಮಾಜಿ ಸಚಿವರಾದ ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ ಹಾಗೂ ನೂರಾರು ಸಾರ್ವಜನಿಕರು ಈ ಏಕತಾ ಓಟದಲ್ಲಿ ಭಾಗಿಯಾಗಿದ್ದರು. ನಂತರ ಸರ್ದಾರ್ ಪಟೇಲ್ ಭವನದಲ್ಲಿ ವಲ್ಲಭಭಾಯ್ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಜಯನಗರದ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಿಂದ ಶಾಸಕರಾದ ರವಿ ಸುಬ್ರಮಣ್ಯ, ಉದಯ್ ಗರುಡಾಚಾರ್, ಬೆಂಗಳೂರು ನಗರ ಬಿಜೆಪಿ ಘಟಕದ ಅದ್ಯಕ್ಷ ಸದಾಶಿವ ನೇತೃತ್ವದಲ್ಲಿ ಏಕತೆಗಾಗಿ ಓಟ ಹಮ್ಮಿಕೊಳ್ಳಲಾಗಿತ್ತು.

Related Articles

Comments (0)

Leave a Comment