ಬೆಂಬಲ ವಾಪಸ್ ಪಡೆದ ಬಿಜೆಪಿ:ಕಾಶ್ಮೀರದಲ್ಲಿ ಮೈತ್ರಿ ಸರ್ಕಾರ ಪತನ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿನ ಪಿಡಿಪಿ ಬಿಜೆಪಿ ಮೈತ್ರಿ ಕಡಿದುಬಿದ್ದಿದ್ದು,ಸಮ್ಮಿಶ್ರ ಸರ್ಕಾರ ಪತನಗೊಂಡಿದೆ,ಆ ಮೂಲಕ ಮೊದಲ ಬಾರಿ ಸರ್ಕಾರದ ಭಾಗವಾಗಿದ್ದ ಕೇಸರಿ ಪಡೆ ಕಣಿವೆ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ.

ಜಮ್ಮು ಕಾಶ್ಮೀರದಲ್ಲಿ ಕ್ಷಿಪ್ರ ರಾಜಕೀಯ ವಿದ್ಯಮಾನ ನಡೆದಿದ್ದು, ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್ ಪಡೆದಿದೆ.
ಬೆಂಬಲ ವಾಪಸ್ ಪತ್ರ ಮತ್ತು ರಾಜೀನಾಮೆಯನ್ನು ರಾಜ್ಯಪಾಲ ಎನ್ ಎನ್ ವೋಹ್ರಾ ಅವರಿಗೆ ರವಾನಿಸಿದೆ.
ಇದರಿಂದಾಗಿ ಸರ್ಕಾರ ಅಲ್ಪಮತಕ್ಕೆ‌ ಕುಸಿದಿದ್ದು ಮುಖ್ಯಮಂತ್ರಿ ಸ್ಥಾನಕ್ಕೆ ಮೆಹಬೂಬ ಮುಫ್ತಿ ರಾಜೀನಾಮೆ ಸಲ್ಲಿಕೆ ಮಾಡಿದರು.

ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಬಳಿಕ ಮಾತನಾಡಿದ ಮೆಹಬೂಬ ಮುಫ್ತಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಯಾವುದೇ ಪಕ್ಷದ ಬೆಂಬಲ ಕೇಳುವುದಿಲ್ಲ,ಸರ್ಕಾರ ರಚನೆಯ ಹಕ್ಕು ಮಂಡನೆ ಮಾಡುವುದೂ ಇಲ್ಲ ಎಂದರು.

ಕಾಶ್ಮೀರಕ್ಕೆ ನೀಡಿರುವ ಸಂವಿಧಾನದ 370ನೇ ವಿಧಿಯನ್ನು ನಾವು ಸಮರ್ಥಿಸಿದ್ದೇವೆ. ರಾಜ್ಯದಲ್ಲಿ 370ನೇ ವಿಧಿಗಾಗಿ ನಾವು ಹೋರಾಡಿದ್ದೇವೆ,ಅಧಿಕಾರಕ್ಕಾಗಿ ನಾವು ಮೈತ್ರಿ ರಚಿಸಿಕೊಂಡಿರಲಿಲ್ಲ. ಜನರಿಗಾಗಿ ಮೈತ್ರಿಕೂಟದಲ್ಲಿ ಭಾಗಿಯಾಗಿದ್ದೆವು.

ನಮಗೆ ದೈಹಿಕ ಬಲ ನೀತಿಯಲ್ಲಿ ನಂಬಿಕೆ ಇಲ್ಲ. ಇದೇ ಕಾರಣದಿಂದ ದ್ವಿಪಕ್ಷೀಯ ಕದನ ವಿರಾಮ ಘೋಷಣೆಗೆ ಬದ್ಧವಾಗಿದ್ದೆವು. ಪಾಕ್​​ನೊಂದಿಗೆ ಕೂಡ ಉತ್ತಮ ಸಂಬಂಧವನ್ನು ನಾವು ಬಯಸಿದ್ದೆವು. ನಾವು ಎಲ್ಲರೊಂದಿಗೆ ಮಾತುಕತೆ ಬಯಸುತ್ತೇವೆ ಪಾಕಿಸ್ತಾನದೊಂದಿಗೆ ಕೂಡ ನಾವು ಚರ್ಚೆ ಬಯಸುತ್ತೇವೆ, ದೈಹಿಕ ಬಲ ನೀತಿ ಕಾಶ್ಮೀರದಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಇನ್ನು ಭಾರತದ ರಕ್ಷಣೆ ಮತ್ತು ಸಾರ್ವಭೌಮತ್ವವನ್ನು ಗಮನದಲ್ಲಿಟ್ಟುಕೊಂಡು ಮೈತ್ರಿಯನ್ನು ತೊರೆಯಲಾಗಿದೆ ಎಂದು ಕಾಶ್ವೀರ ಬಿಜೆಪಿ ನಾಯಕ ರಾಂ ಮಾದವ್ ಹೇಳಿದ್ದಾರೆ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ರಾಜ್ಯದಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬೆಂಬಲ ವಾಪಸ್ ಪಡೆದ ನಿಲುವನ್ನು ಸಮರ್ಥಿಸಿಕೊಂಡರು.

ಇನ್ನು ಸರ್ಕಾರ ಪತನಗೊಳ್ಳುತ್ತಿದ್ದಂತೆ ಮಾಜಿ ಸಿಎಂ ಒಮರ್ ಅಬ್ದುಲ್ಲಾ ರಾಜ್ಯಪಾಲರನ್ನ ಭೇಟಿಯಾದರು.ನಾವು ಸರ್ಕಾರ ರಚಿಸಲು ಹಕ್ಕು ಮಂಡಿಸುವುದಿಲ್ಲ ಯಾವುದೇ ಪಕ್ಷದೊಂದಿಗೆ ಮೈತ್ರಿ ಸರ್ಕಾರ ರಚಿಸುವುದಿಲ್ಲ ಎನ್ನುವ ಮಾಹಿತಿ ನೀಡಿದರು.

ಪಿಡಿಪಿ,ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಸರ್ಕಾರ ರಚನೆಯ ಹಕ್ಕು ಮಂಡಿಸಲು ನಿರಾಕರಿಸಿರುವ ಕಾರಣ ಜಮ್ಮು,ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ರಾಜ್ಯಪಾಲರು ನೀಡುವ ವರದಿಯ ಮೇಲೆ ಮುಂದಿನ ನಿರ್ಧಾರ ಪ್ರಕಟಗೊಳ್ಳಲಿದೆ.

Related Articles

Comments (0)

Leave a Comment