ಕಾಂಬೋಡಿಯಾದಲ್ಲಿ 16ನೇ ಏಷ್ಯನ್ ಅಂತರ-ಸಂಸದೀಯ ಸಭೆ; ಭಾರತದ ಪ್ರತಿನಿಧಿಯಾಗಿ ಸಂಸದ ಕಾಗೇರಿ ಆಯ್ಕೆ

ನವದೆಹಲಿ: ಕಾಂಬೋಡಿಯಾದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ 16ನೇ ಏಷ್ಯನ್ ಅಂತರ-ಸಂಸದೀಯ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಳ್ಳಲಿದ್ದು, ದೇಶದ ನಿಲುವು ಮಂಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ವಿಧಾನಸಭೆ ಸ್ಪೀಕರ್ ಆಗಿ ಹೆಚ್ಚಿನ ಸಂಸದೀಯ ಅನುಭವ ಪಡೆದಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಪರಿಗಣಿಸಿ ಈ ಅವಕಾಶ ನೀಡಲಾಗಿದೆ. ಇನ್ನು ಈ ಅವಕಾಶಕ್ಕೆ ಕಾಗೇರಿ ಸಂತಸ ವ್ಯಕ್ತಪಡಿಸಿದ್ದಾರೆ.

ಕಾಂಬೋಡಿಯ ದೇಶದಲ್ಲಿ ಇದೇ ಜುಲೈ 14ರಿಂದ 17ರವರೆಗೆ ನಡೆಯಲಿರುವ 16ನೇ ಏಷ್ಯನ್ ಅಂತರ-ಸಂಸದೀಯ ಸಭೆಯಲ್ಲಿ (Asian Inter-Parliamentary Assembly-AIPA) ಭಾರತವನ್ನು ಪ್ರತಿನಿಧಿಸಿ, ನಮ್ಮ ರಾಷ್ಟ್ರದ ನಿಲುವು, ಯೋಜನೆ ಮತ್ತು ವಿಷಯಗಳನ್ನು ಮಂಡಿಸಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನನ್ನನ್ನು ಆಯ್ಕೆ ಮಾಡಿದ್ದು, ಈ ವರ್ಷದ ಸಭೆಯ ಪ್ರಮುಖ ವಿಷಯವಾದ “ಸಂವಾದದ ಮೂಲಕ ಶಾಂತಿ ಮತ್ತು ಮುಂದಿನ ಸಂಸದೀಯ ಹಾದಿ ಹಾಗೂ ಮಹಿಳೆಯರ ಸಶಕ್ತಿಕರಣ, ಹವಾಮಾನ ವೈಪರಿತ್ಯ” ಮತ್ತು ಇನ್ನಿತರ ವಿಷಯಗಳ ಕುರಿತಂತೆ ಈ ಸಮ್ಮೇಳನದಲ್ಲಿ ಸಂವಾದ ನಡೆಯಲಿದೆ. ಜತೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಷ್ಟ್ರದ ಅಭಿವೃದ್ಧಿ ಮತ್ತು ವಿಶ್ವದ ಎಲ್ಲೆಡೆ ಅವರು ಕೈಗೊಂಡಿರುವ ಸಾಧನೆಯನ್ನು ಬಿಂಬಿಸುವ ಮೂಲಕ ಮತ್ತು ಮಹತ್ವದ ಚರ್ಚೆಗಳಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿ ಸಕ್ರಿಯವಾಗಿ ಭಾಗವಹಿಸಲು ನಾನು ಕಾತರನಾಗಿದ್ದೇನೆ ಎಂದಿದ್ದಾರೆ.

ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ರಾಷ್ಟ್ರದ ಪ್ರತಿನಿಧಿಯಾಗಿ ವಿಷಯಗಳನ್ನು ಮಂಡಿಸಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಓಂ ಬಿರ್ಲಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

Related Articles

Comments (0)

Leave a Comment