ದಶಕದ ಸಂಭ್ರಮದಲ್ಲಿ ‘ರಂಗಿತರಂಗ’; ರೀ ರಿಲೀಸ್‌ ಅಪ್ಡೇಟ್ ಕೊಟ್ರು ಅನೂಪ್ ಭಂಡಾರಿ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದ, ಸಣ್ಣ ಬಜೆಟ್‌ ಚಿತ್ರವಾಗಿ ಬಿಡುಗಡೆಗೊಂಡು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದ ‘ರಂಗಿತರಂಗ’ ಸಿನಿಮಾ ಇದೀಗ ದಶಕದ ಸಂಭ್ರಮದಲ್ಲಿ ಮತ್ತೆ ಬಿಡುಗಡೆಗೆ ಸಿದ್ಧವಾಗಿದೆ‌.

ಕರ್ನಾಟಕದ ಕರಾವಳಿ ಪ್ರದೇಶದ ಸಂಸ್ಕೃತಿ ಹಾಗೂ ದೈವಾರಾಧನೆ ಕುರಿತು ಮಾಡಿದ್ದ ಈ ಸಿನಿಮಾ 2015ರಲ್ಲಿ ದೇಶದಲ್ಲೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ ಬಾಹುಬಲಿ ಸಿನಿಮಾಗೆ ಸಡ್ಡು ಹೊಡೆದು ಸುದ್ದಿ ಮಾಡಿತ್ತು. ಅನೂಪ್ ಭಂಡಾರಿ ನಿರ್ದೇಶಿಸಿದ್ದ ರಂಗಿತರಂಗ ಚಿತ್ರದಲ್ಲಿ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದರು. ಸಹೋದರರ ಈ ಜೋಡಿ ಕರ್ನಾಟಕದಲ್ಲಿ ಕಮಾಲ್ ಮಾಡಿತ್ತು. ರಾಧಿಕಾ ಚೇತನ್ ಆವಂತಿಕ ಶೆಟ್ಟಿ, ಸಾಯಿ ಕುಮಾರ್ ಇನ್ನಿತರರ ತಾರಾಗಣವಿದ್ದ ಈ ಚಿತ್ರ, ಮಲ್ಟಿಪ್ಲೆಕ್ಸ್‌ಗಳಲ್ಲಿ ಒಂದು ವರ್ಷ ಯಶಸ್ವಿ ಪ್ರದರ್ಶನ ಕಂಡು, ರಾಜ್ಯ ಪ್ರಶಸ್ತಿ, ಸೈಮಾ, ಐಫಾ ಸೇರಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.

ನಿರೂಪ್ ಭಂಡಾರಿ, ರಾಧಿಕಾ ಚೇತನ್, ಆವಂತಿಂಕ ಶೆಟ್ಟಿ ಅವರಂಥ ಹೊಸ ಪ್ರತಿಭೆಗಳಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟ ರಂಗಿತರಂಗ, ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರಿಗೆ ಹೊಸ ಇಮೇಜ್ ರೂಪಿಸಿಕೊಟ್ಟಿತ್ತು. ಇನ್ನು ಅನೂಪ್ ಭಂಡಾರಿಗೆ ನಿರ್ದೇಶಕನಾಗಿ ಭಡ್ತಿ ನೀಡಿತ್ತು. ಹೀಗೆ ಹಲವಾರು ಕಲಾವಿದರ ಲಕ್ ಬದಲಾಯಿಸಿದ ಕಲಾತ್ಮಕ ಸಿನಿಮಾಗೆ ದಶಕದ ಸಂಭ್ರಮ. ಈ ಸಂಭ್ರಮಕ್ಕೆ ಮೆರಗು ನೀಡಲು ಚಿತ್ರ ತಂಡ ರಂಗಿತರಂಗ ರೀ ರಿಲೀಸ್‌ಗೆ ಪ್ಲಾನ್ ಮಾಡಿದ್ದು, ಜುಲೈ 4ರಂದು ರಂಗಿತರಂಗ ಮತ್ತೆ ಥಿಯೇಟರ್‌ಗಳಿಗೆ ಲಗ್ಗೆ ಇಡುತ್ತಿದೆ.

ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಈ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, “10 ವರ್ಷ ತುಂಬಿದ ಖುಷಿಯಲ್ಲಿ ರಂಗಿತರಂಗ ಸಿನಿಮಾ ಜುಲೈ 4ರಂದು ಮತ್ತೆ ರಿಲೀಸ್ ಆಗುತ್ತಿದೆ. ಯಾರು ಈ ಚಿತ್ರವನ್ನು ಇನ್ನೂ ವೀಕ್ಷಿಸಿಲ್ಲವೋ ಅಥವಾ ಮತ್ತೊಮ್ಮೆ ಈ ಚಿತ್ರವನ್ನು ನೋಡಬೇಕು ಎಂದು ಬಯಸಿದ್ದೀರೋ ಅವರು ವೀಕ್ಷಿಸಬಹುದು. ನಮ್ಮ ಚಿತ್ರಕ್ಕೆ ಐತಿಹಾಸಿಕ ಗೆಲುವನ್ನು ತಂದುಕೊಟ್ಟ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಧನ್ಯವಾದಗಳು. ಥಿಯೇಟರ್​ನಲ್ಲಿ ಸಿಗೋಣ” ಎಂದು ಬರೆದುಕೊಂಡಿದ್ದಾರೆ.

 

Related Articles

Comments (0)

Leave a Comment