ಹಂಸಲೇಖರ ‘ಓಕೆ’ ಚಿತ್ರದಲ್ಲಿ ನಟಿಸಲು ಸಿದ್ದವೆಂದ್ರು ರವಿಚಂದ್ರನ್..!
- by Suddi Team
- June 24, 2025
- 39 Views

ಬೆಂಗಳೂರು: ಹಂಸಲೇಖ ನಿರ್ದೇಶನದ ಚೊಚ್ಚಲ ಚಲನಚಿತ್ರ ‘ಓಕೆ’ ಸಿನಿಮಾಪದಲ್ಲಿ ಪಾತ್ರ ಮಾಡಲು ಸಿದ್ದನಿದ್ದೇನೆ. ಹಂಸಲೇಖ ನಿರ್ಮಾಪಕರಾದರೆ ಹಣ ಪಡೆಯಲ್ಲ, ಬೇರೆಯವರು ನಿರ್ಮಾಪಕರಾದ್ರೆ ಹಣ ಪಡೆಯುತ್ತೇನೆ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ತಿಳಿಸಿದ್ದಾರೆ.
ಹಂಸಲೇಖ ಹುಟ್ಟುಹಬ್ಬದ ಜತೆ ಅವರ ಚೊಚ್ಚಲ ನಿರ್ದೇಶನದ ಓಕೆ ಚಿತ್ರ ಲಾಂಚಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಂಸಲೇಖ ನಿರ್ದೇಶಕರಾಗುತ್ತಿದ್ದಾರೆ. ಓಕೆ ಅಂತ ಟೈಟಲ್ ಇಟ್ಟಿದ್ದಾರೆ. ನಾವು ಟೈಟಲ್ ಇಟ್ಟು ಓಕೆನಾ ಅಂತಾ ಎಲ್ರಿಗೂ ಕೇಳ್ಬೇಕಿತ್ತು. ಆದ್ರೆ, ಇವ್ರು ಓಕೆ ಅಂತಾನೆ ಟೈಟಲ್ ಇಟ್ಟಿದಾರೆ. ನಾವು ಏನು ಹೇಳೋದಿದೆ. ಸೋಷಿಯಲ್ ಮೀಡಿಯಾದಲ್ಲಿ ಹಂಸಲೇಖ ಯಾಕೆ ಇಂಗ್ಲೀಷ್ ಟೈಟಲ್ ಇಟ್ಟಿದಾರೆ, ಕನ್ನಡದ್ದು ಇಡಬಹುದಿತ್ತಲ್ಲ ಎನ್ನುವ ಚರ್ಚೆ ಆರಂಭವಾಗಿದೆ. ರಾಜು ಓಕೆ ಕೆಳಗೆ ಸರಿ ಅಂತಾ ಇಟ್ಟುಬಿಡಿ ಅಲ್ಲಿಗೆ ಸರಿಯಾಗುತ್ತೆ ಹೇಗೂ ನಿಮಗೆ ಸ್ವರ ಇದೆ, ಸ್ವರನೂ ಆಯ್ತು ಸರಿನು ಆಯ್ತು, ಏನೇ ಮಾಡಿದರೂ ನಿಮ್ಮ ಜತೆ ಇಡೀ ಕರ್ನಾಟಕ ಇರಲಿದೆ ಆಲ್ ದಿ ಬೆಸ್ಟ್ ಎಂದ್ರು.
ಓಕೆ ಸಿನಿಮಾದಲ್ಲಿ ಪಾತ್ರ ಮಾಡಲು ಓಕೆ, ಹಂಸಲೇಖ ನಿರ್ಮಾಪಕರಾದರೆ ಹಣ ಕೇಳಲ್ಲ, ಬೇರೆಯವರಾದರೆ ಹಣ ಕೇಳುತ್ತೇನೆ ಎನ್ನುತ್ತಾ ಪಾತ್ರ ಇದೆಯಾ ಎಂದು ನಿರ್ಮಾಪಕರನ್ನು ಕೇಳಿದರು. ಹಂಸಲೇಖ ಕಡೆ ನೋಡಿ ಯೋಚಿಸುತ್ತಿದ್ದಂತೆ ಕೌಂಟರ್ ಕೊಟ್ಟ ರವಿಚಂದ್ರನ್, ನೋಡಿ ಯೋಚನೆ ಮಾಡುತ್ತಿದ್ದಾರೆ ನನಗೆ ಮಾರ್ಕೆಟ್ ಕಡಿಮೆ ಇದೆ ಅಂತ ಪಟ್ ಅಂತ ಹೇಳ್ತಾ ಇಲ್ಲ. ‘ಐ ಆಮ್ ಗಾಡ್’ ಸಿನಿಮಾ ಆದ್ಮೇಲೆ ಬನ್ನಿ ಸರ್ ನೀವು. ಆಗ ನಾನ್ ರೇಟ್ ಹೇಳ್ತೀನಿ ಎಂದ್ರು. ಎಷ್ಟೇ ಮಾತನಾಡಿದ್ರೂ ಓಕೆ ಸಿನಿಮಾದಲ್ಲಿ ಪಾತ್ರ ಇದೆಯಾ ಇಲ್ವಾ? ಎನ್ನುವ ಕುರಿತು ಸಸ್ಪೆನ್ಸ್ ಮಾತ್ರ ಹಾಗೆ ಉಳಿಸಿದ್ರು. ರವಿಚಂದ್ರನ್ ಜತೆ ಹಂಸಲೇಖ ಕೂಡ ಸಸ್ಪೆನ್ಸ್ ಕಾಯ್ದುಕೊಂಡ್ರು.
ಹೊಸ ಸಿನಿಮಾ ರಿವೀಲ್:
ನನ್ನ ಮತ್ತು ಹಂಸಲೇಖ ಕಾಂಬಿನೇಷನ್ನಲ್ಲಿ ಮತ್ತೆ ಸಿನಿಮಾ ಬರುತ್ತಾ ಅಂತ ಗೊತ್ತಿಲ್ಲ. ಅವರು ನಿರ್ದೇಶನಕ್ಕಿಳಿದಿದ್ದಾರೆ. ಇನ್ನೆಂಥ ಕಾಂಬಿನೇಷನ್ ಬರುತ್ತೆ ಅಂತ ಹಾಸ್ಯ ಚಟಾಕಿ ಹಾರಿಸಿದರು. ನಮ್ಮ ಕಾಂಬಿನೇಷನ್ ಸಿನಿಮಾ ಮಾಡಲು ಈಗ ನಿರ್ಮಾಪಕರ ಸಮಸ್ಯೆ ಇದೆ. ಹಿಂದೆ ನಮ್ಮಪ್ಪ ಬೆನ್ನೆಲುಬಾಗಿದ್ದರು. ಎಷ್ಟು ಹಣ ಎಂದು ನನಗೆ ಗೊತ್ತಿರಲಿಲ್ಲ. ಈಗ ಸ್ವಲ್ಪ ಹಣಕಾಸಿನ ಸಮಸ್ಯೆ ಆಗಿದೆ. ಸಧ್ಯ ಈಗ ಪ್ರೇಮಲೋಕ ಮಾಡಿಲ್ಲ ಮತ್ತೊಂದು ಸಿನಿಮಾ ಮಾಡಿದ್ದೇನೆ. ‘ಐ ಆಮ್ ಗಾಡ್ ದಿ ಕ್ರೇಜಿ’ ಅಂತ ಮಾಡಿದ್ದೇನೆ. 24 ಹಾಡುಗಳಿವೆ ಎಂದು ತಕ್ಷಣವೇ ಸಸ್ಪೆನ್ಸ್ ಕಾಯ್ದುಕೊಳ್ಳಲು ನಿಮಗೆಷ್ಟು ಬೇಕೋ ಅಷ್ಟು ಹಾಡುಗಳಿವೆ ಎಂದರು.
ತಿನ್ನಲ್ಲ, ಕುಡಿಯಲ್ಲ ಆದ್ರೂ ಹೊಟ್ಟೆ ಬಂತು:
ನನ್ನ ಹೊಟ್ಟೆ ಸಿನಿಮಾದಲ್ಲಿ ನನಗೆ ಸಮಸ್ಯೆ ಅಲ್ಲ, ನಾನು ಶೂಟ್ ಮಾಡಿದ, ನಾನು ನಿರ್ದೇಶನ ಮಾಡಿರುವ ಸಿನಿಮಾದಲ್ಲಿ ನನ್ನ ಹೊಟ್ಟೆ ತೋರಿಸಿ ನಾನು ಇಂಡಸ್ಟ್ರಿ ಬಿಟ್ಟುಬಿಡುತ್ತೇನೆ, ನಿರ್ದೇಶನ ಮಾಡುವಾಗ ನಾವಿಡೋ ಶಾಟ್ನಲ್ಲಿ ನಮ್ಮ ವೀಕ್ನೆಸ್ ಕವರ್ ಮಾಡಿಕೊಂಡು ಹೋಗುತ್ತೇವೆ. ಪರದೆಯಲ್ಲಿ ಸುಂದರವಾಗಿ ತೋರಿಸಬೇಕು ಎನ್ನುವ ಉದ್ದೇಶದಿಂದ ಮಾಡಿದಾಗ ವೀಕ್ನೆಸ್ ಎಲ್ಲ ಕವರ್ ಆಗುತ್ತೆ. ನಾನು ಜಿಮ್ ಮಾಡಕ್ಕಾಗಲ್ಲ, ತೂಕ ತೆಗೆಯೋಕಾಗಲ್ಲ, ನಾನು ಸ್ಮಿಮ್ಮಿಂಗ್ ಮಾಡಕ್ಕಾಗಲ್ಲ, ನಾನು ತಿನ್ನಲ್ಲ, ಕುಡಿಯಲ್ಲ, ಸೇದಲ್ಲ. ಆದರೂ, ಹೊಟ್ಟೆ ಯಾಕೆ ಬಂತೋ ಗೊತ್ತಿಲ್ಲ ಎಂದರು.
ನನ್ನ ಮಕ್ಕಳ ಬೆನ್ನಿಗೆ ನಿಲ್ಲುವೆ:
ನಮ್ಮ ತಂದೆ ಚಿತ್ರರಂಗಕ್ಕೆ ನನ್ನನ್ನು ತಂದು ಬಿಟ್ಟರು ಅಷ್ಟೆ, ಇಲ್ಲಿ ಮುಂದೆ ಹೋದವನು ನಾನೇ. ನಾನೇ ಎಲ್ಲ ಕಲಿತು ಮುಂದೆ ಸಾಗಿದೆ. ಅವರು ಸದಾ ಬೆನ್ನೆಲುಬಾಗಿದ್ದರು, ಯಾವಾಗಲೂ ನನ್ನ ಜತೆಗಿದ್ದರು. ನಾನೂ ಸಹ ಯಾವಾಗಲೂ ನನ್ನ ಮಕ್ಕಳ ಜತೆಗಿರುತ್ತೇನೆ. ನನ್ನ ಮಕ್ಕಳಿಗೂ ಬೆಳೆಯಲು ಸಮಯ ಬೇಕು, ಅವರಿಗೆ ಹಂಸಲೇಖ ಸಿಕ್ಕಿಲ್ಲವೇನೋ? ಎಂದರು.
Related Articles
Thank you for your comment. It is awaiting moderation.
Comments (0)