ವಾಣಿಜ್ಯ ಮಂಡಳಿಗೂ ಕೇರ್ ಮಾಡ್ತಿಲ್ಲ ನಟಿ ರಚಿತಾ ರಾಮ್..!

ಬೆಂಗಳೂರು: ಸಂಜು ವೆಡ್ಸ್ ಗೀತಾ-2 ಸಿನಿಮಾ ಪ್ರಚಾರಕ್ಕೆ ಸಹಕರಿಸದ ವಿವಾದಕ್ಕೆ ಸಿಲುಕಿರುವ ನಾಯಕ ನಟಿ ಡಿಂಪಲ್‌ ಕ್ವೀನ್ ರಚಿತಾ ರಾಮ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಕೇರ್ ಮಾಡ್ತಿಲ್ಲ, ವಾಣಿಜ್ಯ ಮಂಡಳಿ ಕರೆಗೆ ಸ್ಪಂಧಿಸುವ ಸೌಜನ್ಯ ಇರಬೇಕು ಎಂದು ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಗರಂ ಆಗಿದ್ದಾರೆ.

ಶಿವಾನಂದವೃತ್ತದ ಸಮೀಪವಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನರಸಿಂಹಲು, ಸಿನಿಮಾದ ಪ್ರಮೋಷನ್ ಗೆ ಅಸಹಕಾರ ಸಂಬಂಧ ನಿರ್ದೇಶಕ ನಾಗಶೇಖರ್ ದೂರು ನೀಡಿದ್ದಾರೆ ಆದರೆ ಬೇರೆ ಸಿನಿಮಾ ಶೂಟಿಂಗ್ ಕಾರಣದಿಂದ ಪ್ರಮೋಷನ್ ಗೆ ಬರಲಾಗುತ್ತಿಲ್ಲ ಅಲ್ಲದೆ ಇದು ರಿಲೀಸ್ ಅಲ್ಲ ರೀ ರಿಲೀಸ್ ಎನ್ನುವ ರಚಿತಾ ರಾಮ್ ಸಮಜಾಯಿಷಿ ಒಪ್ಪಲು ಸಾಧ್ಯವಿಲ್ಲ ಎಂದು ರಚಿತಾ ನಿಲುವಿಗೆ ಅಸಮಧಾನ ವ್ಯಕ್ತಪಡಿಸಿದರು.

ಒಂದು ಸಿನಿಮಾ ಗೆಲ್ಲಬೇಕು ಅಂದರೆ ರಿಲೀಸ್, ರೀ ರಿಲೀಸ್ ಯಾವುದೇ ಆಗಲಿ ಬೆಂಬಲ ನೀಡುವುದು ನಮ್ಮ ಧರ್ಮ,ಸಹಕಾರ ನೀಡುವ ಕೆಲಸವನ್ನು ಮಾಡಲೇಬೇಕು, ಇಲ್ಲಿನ ಸಿನಿಮಾದಿಂದ ಹೆಸರು ಗಳಿಸಿ ಹಣ ಗಳಿಸಿ ಈಗ ಯಾಕೆ‌ ತಾತ್ಸಾರ? ತಮ್ಮ ನಿಲುವು ಬಿಟ್ಟು ಬಂದು ಸಿನಿಮಾ ಪ್ರಚಾರಕ್ಕೆ ಕೈಜೋಡಿಸಿ ಇದರಲ್ಲಿ ತಪ್ಪೇನು? ಎಂದರು.

ವಾಣಿಜ್ಯ ಮಂಡಳಿ ಕರೆ ಮಾಡಿದಾಗ ಸ್ಪಂಧಿಸಬೇಕು ಅದನ್ನು ಬಿಟ್ಟು ನಾವು ಕಾಲ್ ಮಾಡಿದರೆ ಅವರ ಪಿಎಗಳ ಹತ್ತಿರ‌ ಮಾತನಾಡಿಸುತ್ತಾರೆ.ಕನ್ನಡದಲ್ಲಿ ದೊಡ್ಡ ದೊಡ್ಡ ಕಲಾವಿದರು ಕೂಡ ಹೀಗೆ ಮಾಡಿಲ್ಲ, ವಾಣಿಜ್ಯ ಮಂಡಳಿ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗುತ್ತಿದ್ದರು ಎಂದು ಡಿಂಪಲ್‌ಕ್ವೀನ್ ವರ್ತನೆಗೆ ಅಸಮಧಾನ ವ್ಯಕ್ತಪಡಿಸಿದರು.

ನಾವು ರಚಿತಾ ರಾಮ್ ಅವರಿಂದ ಕ್ಷಮೆ ನಿರೀಕ್ಷೆಯಲ್ಲಿಲ್ಲ, ಕ್ಷಮೆ ಕೇಳಿ ಎಂದಿಲ್ಲ,ಸಿನಿಮಾ ಪ್ರಚಾರಕ್ಕೆ ಬಂದು ಸ್ಪಂಧಿಸಬೇಕು, ಸಮಯ ಬಂದಾಗ ಸಹಕರಿಸಬೇಕು, ಬೆಂಬಲಿಸಬೇಕು ಎಂದು ಮನವಿ ಮಾಡಿಕೊಳ್ಳಲಿದ್ದೇನೆ,ಅವರು ಸಿಕ್ಕಿದಾಗ ನಾನು ಈ ವಿಚಾರದ ಕುರಿತು ತಿಳಿ ಹೇಳುತ್ತೇನೆ ಎಂದರು.

Related Articles

Comments (0)

Leave a Comment