ಪ್ರೊ.ರಂಗಪ್ಪಗೆ ಉನ್ನತ ಶಿಕ್ಷಣ ಇಲಾಖೆ ಸಲಹೆಗಾರ ಹುದ್ದೆ ನೀಡುತ್ತಿರುವುದಕ್ಕೆ ಬಿಜೆಪಿ ತೀವ್ರ ವಿರೋಧ

ಬೆಂಗಳೂರು: ಕೆಎಸ್‌ಓಯು ಮಾನ್ಯತೆ ರದ್ದು, ನಕಲಿ ಅಂಕಪಟ್ಟಿ ಸೃಷ್ಟಿ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಪ್ರೊ.ಕೆ.ಎಸ್ ರಂಗಪ್ಪ ಅವರಿಗೆ ಉನ್ನತ ಶಿಕ್ಷಣ ಪರಿಷತ್ ನ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಉನ್ನತ ಶಿಕ್ಷಣ ಇಲಾಖೆ ಸಲಹೆಗಾರನ್ನಾಗಿ ‌ನೇಮಕ ಮಾಡಿದರೆ ಬಿಜೆಪಿ ಸದನದ ಒಳಗೆ ಹಾಗು ಹೊರಗೆ ಹೋರಾಟ ನಡೆಸಲಿದೆ ಎಂದು ಬಿಜೆಪಿ ಮುಖಂಡ ಗೋ.ಮಧುಸೂದನ್ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮಲ್ಲೇಶ್ವರಂ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಗೋ.ಮಧುಸೂದನ್, ಮೈಸೂರಿನ ಕರ್ನಾಟಕ‌ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಳೆದ ಐದು ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದೆ. ಇದಕ್ಕೆ ಪ್ರಮುಖ ಕಾರಣ ಕುಲಪತಿಗಳಾಗಿದ್ದ ಪ್ರೊ.ಕೆ.ಎಸ್.ರಂಗಪ್ಪ ಹಾಗು ಅವರ ನೆರಳಿನಂತೆ ಇದ್ದ ಪ್ರೊ.ಕೃಷ್ಣನ್. ರಂಗಪ್ಪ ಅವರು ಅಕ್ರಮವಾಗಿ ವಿವಿಯ ವ್ಯಾಪ್ತಿಯನ್ನು ಮೀರಿ ಖಾಸಗಿ ಸಂಸ್ಥೆಗಳನ್ನು ವಿವಿ ಪಾಲುದಾರರಾಗಿ ಮಾಡಿಕೊಂಡಿದ್ದಾರೆ. ಅವರ ಮೂಲಕ ಡಿಗ್ರಿಗಳು, ಪ್ರಮುಖವಾಗಿ ತಾಂತ್ರಿಕ‌ ಪದವಿ ಸರ್ಟಿಫಿಕೇಟ್ ಮಾರಾಟ ಕೇಂದ್ರವೇ ನಿರ್ಮಾಣವಾಗಿತ್ತು. ಎಐಸಿಟಿ ಒಪ್ಪಗೆ ಇಲ್ಲದಿದ್ದರೂ ಸಹ ಸ್ಪೇಸ್ ಇಂಜಿನಿಯರಿಂಗ್, ಬಿಟೆಕ್,ಎಂಟೆಕ್ ಡಿಗ್ರಿಗಳನ್ನ ಕೊಡಲಾಗಿದೆ.

ಈಗಾಗಲೇ ರಂಗಪ್ಪನವರ ಅಕ್ರಮಗಳ ಬಗ್ಗೆ ವಿಧಾನ ಪರಿಷತ್ ನ ಸದನ ಸಮಿತಿ ವರದಿಯನ್ನು ಸಲ್ಲಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವರಿಗೂ ವರದಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಯಾವುದೇ ಕ್ಷಣದಲ್ಲಾದರೂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬಹುದು. ಕುಮಾರಸ್ವಾಮಿ ಯವರು ರಂಗಪ್ಪನವರನ್ನು ಉನ್ನತ ಶಿಕ್ಷಣದ ಸಲಹೆಗಾರರಾಗಿ ನೇಮಕ ಮಾಡಿಕೊಂಡ ಮರುಕ್ಷಣವೇ ಸಿಬಿಐ ತನಿಖೆ ಪ್ರಾರಂಭವಾದರೆ ರಾಜ್ಯ ಸರ್ಕಾರಕ್ಕೆ ಎಂತಹಾ ಮಂಗಳಾರತಿ ಆಗುತ್ತದೆ ಎಂಬುದನ್ನು ಕುಮಾರಸ್ವಾಮಿ ಯವರು ಅರ್ಥ ಮಾಡಿಕೊಳ್ಳಬೇಕು ಎಂದರು.

Related Articles

Comments (0)

Leave a Comment