ಅನುಮತಿ ಸಿಗುವ ಮೊದಲೇ ಕಟ್ಟಡ ಕಟ್ಟಿದ್ರೆ ವಿದ್ಯುತ್, ನೀರಿನ ಸಂಪರ್ಕ ಸಿಗಲ್ಲ; ಡಿಸಿಎಂ ಎಚ್ಚರಿಕೆ
- by Suddi Team
- June 25, 2025
- 42 Views

ಬೆಂಗಳೂರು: ಕಟ್ಟಡ ನಕ್ಷೆ ಅನುಮೋದನೆಗೂ ಮೊದಲೇ ಕಟ್ಟಡ ಕಟ್ಟಲು ಮುಂದಾಗುವವರಿಗೆ ಸರ್ಕಾರ ಶಾಕ್ ನೀಡಿದೆ. ಇನ್ಮುಂದೆ ಕಟ್ಟಡ ನಕ್ಷೆ ಅನುಮತಿ, ಸ್ವಾಧೀನ ಪ್ರಮಾಣಪತ್ರವಿಲ್ಲದೆ ಇದ್ರೆ ನೀರಿನ ಸಂಪರ್ಕವೂ ಸಿಗಲ್ಲ, ವಿದ್ಯುತ್ ಸಂಪರ್ಕವೂ ಸಿಗಲ್ಲ.
ಕಟ್ಟಡ ನಕ್ಷೆ ಅನುಮತಿ, ಸ್ವಾಧೀನ ಪ್ರಮಾಣಪತ್ರವಿಲ್ಲದೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿನ ಹಿನ್ನಲೆಯಲ್ಲಿ ಅಲರ್ಟ್ ಆದ ರಾಜ್ಯ ಸರ್ಕಾರ ತೀರ್ಪಿನ ಅನುಸಾರ ನಡೆದುಕೊಳ್ಳಲು ಒಂದು ಹೆಜ್ಜೆ ಮುಂದಿಟ್ಟಿದೆ. ಹಾಗಾಗಿ ಯಾವುದೇ ಅನುಮತಿಗಳು ಇಲ್ಲದೆ ಮನೆ ಕಟ್ಟಬೇಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಡಿಸಿಎಂ, ಸುಪ್ರೀಂಕೋರ್ಟ್ ತೀರ್ಪು ಇಡೀ ದೇಶಕ್ಕೆ ಆನ್ವಯವಾಗಲಿದೆ. ಹಾಗಾಗಿ ಇನ್ಮುಂದೆ ಕಟ್ಟಡ ನಕ್ಷೆ ಅನುಮೋದನೆ ಪಡೆಯದೇ ಯಾರೂ ಮನೆ ಕಟ್ಟಬೇಡಿ. ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತೆ ಇಂತಹ ಸಾಹಸಕ್ಕೆ ಕೈ ಹಾಕಬೇಡಿ. ಈ ವಿಚಾರದಲ್ಲಿ ಅಕ್ರಮವಾಗಿ ಮನೆ ಕಟ್ಟಿದರೆ ಸಕ್ರಮ ಮಾಡುವುದು ಕಷ್ಟ. ನೀರು ಹಾಗೂ ವಿದ್ಯುತ್ ಸಂಪರ್ಕ ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸುಪ್ರೀಂ ತೀರ್ಪಿನಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಇದುವರೆಗೂ 2.50 ಲಕ್ಷ ಜನ ಹಳ್ಳಿಗಳು ಹಾಗೂ ನಗರ ಪ್ರದೇಶಗಳಲ್ಲಿ ಕಟ್ಟಡ ನಕ್ಷೆ ಅನುಮತಿ ಪಡೆಯದೇ ಮನೆ ಕಟ್ಟಿಕೊಂಡು, ವಿದ್ಯುತ್ ಹಾಗೂ ನೀರಿನ ಸಂಪರ್ಕಕ್ಕೆ ಅರ್ಜಿ ಹಾಕಿದ್ದಾರೆ. ಈ ವಿಚಾರವಾಗಿ ಕಾನೂನು ಸಲಹೆಗಾರರ ಜತೆ ಚರ್ಚಿಸಿ, ಸಾರ್ವಜನಿಕರಿಗೆ ಹೇಗೆ ನೆರವಾಗಬಹುದು ಎಂದು ಅಭಿಪ್ರಾಯ ಕೇಳಿದ್ದೇನೆ. ಕೆಲವು ಸಾರ್ವಜನಿಕರು ಕೆಇಬಿಗೆ ಠೇವಣಿ ಪಾವತಿ ಮಾಡಿದ್ದು, ಈ ವಿಚಾರವಾಗಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ಅಧಿಕಾರಿಗಳ ಜತೆಗೂ ಚರ್ಚೆ ಮಾಡುತ್ತಿದ್ದೇವೆ ಎಂದರು.
ಬೇರೆ ರಾಜ್ಯದಲ್ಲಿ ಇದು ಜಾರಿಯಾಗಿಲ್ಲ, ನಮ್ಮ ರಾಜ್ಯದಲ್ಲಿ ಆತುರದಲ್ಲಿ ಜಾರಿ ಏಕೆ ಎಂದು ಕೇಳಿದಾಗ, “ನ್ಯಾಯಾಲಯದ ಆದೇಶ ಬಂದ ನಂತರ ಕೆಆರ್ಸಿ ಇಂದ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ನ್ಯಾಯಾಲಯದ ಆದೇಶ ಪಾಲಿಸುವಂತೆ ಸೂಚಿಸಲಾಗಿದೆ. ನೀವು ಆತುರದ ನಿರ್ಧಾರ ಎಂದು ಹೇಳಬಹುದು. ಆದರೆ, ಅಧಿಕಾರಿಗಳು ತಮಗೆ ಮುಂದೆ ತೊಂದರೆ ಆಗಬಾರದು ಎಂದು ಮೈಗೆ ಎಣ್ಣೆ ಹಚ್ಚಿಕೊಂಡಿರುತ್ತಾರೆ. ನಮ್ಮ ಮೇಲೆ ಹಾಕುತ್ತಾರೆ. ಹೀಗಾಗಿ, ಈ ಸಮಸ್ಯೆ ಬಗೆಹರಿಸಲು ನಾವು ಮುಂದಾಗಿದ್ದೇವೆ. ಕಾನೂನು ಚೌಕಟ್ಟಿನಲ್ಲೇ ನಾವು ಜನರಿಗೆ ಸಹಾಯ ಮಾಡಬೇಕು” ಎಂದು ಸ್ಪಷ್ಟನೆ ನೀಡಿದರು.
ಅಕ್ರಮ ಸಕ್ರಮ ಬಿಲ್ ತರಬಹುದಲ್ಲವೇ ಎಂದು ಕೇಳಿದಾಗ, “ಈ ಬಿಲ್ಗೆ ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ತಡೆ ನೀಡಲಾಗಿದೆ. ನಮ್ಮ ಸರ್ಕಾರ ಎ ಖಾತಾ, ಬಿ ಖಾತಾ ಎಲ್ಲ ಸಮಸ್ಯೆ ಬಗೆಹರಿಸಲು ಚರ್ಚೆ ಮಾಡುತ್ತಿದೆ. 110 ಹಳ್ಳಿಗಳಿಗೆ ನೀರಿನ ಸಂಪರ್ಕ ನೀಡಲು ಮುಂದಾಗಿದ್ದೆವು. ಈ ತೀರ್ಪಿನ ನಂತರ ಬಿಡ್ಬ್ಲ್ಯುಎಸ್ಎಸ್ಬಿಗೆ ತೊಂದರೆಯಾಗಿದೆ. ಕಳೆದ ವರ್ಷ ಈ ಹೊತ್ತಿಗೆ 39 ಸಾವಿರ ನೀರಿನ ಸಂಪರ್ಕ ನೀಡಿದ್ದೆವು. ಈ ವರ್ಷ ಕೇವಲ 300 ಸಂಪರ್ಕ ನೀಡಿದ್ದೇವೆ. ಈ ವಿಚಾರವಾಗಿ ಎಲ್ಲರ ಸಹಕಾರ ಬೇಕು” ಎಂದರು.
Related Articles
Thank you for your comment. It is awaiting moderation.
Comments (0)