ಪಹಲ್ಗಾಮ್ ದಾಳಿ ಸಂತ್ರಸ್ತ ಕುಟುಂಬದ ವಿದ್ಯಾರ್ಥಿಗೆ ಉಚಿತ ಪ್ರವೇಶ ನೀಡಿದ ಆರ್‌ವಿ ವಿಶ್ವವಿದ್ಯಾಲಯ

ಬೆಂಗಳೂರು:  2025ರ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ದುರಂತ ನಿಧನ ಕಂಡ ದಿ. ಮಂಜುನಾಥ ರಾವ್ ಅವರ ಪುತ್ರ ಅಭಿಜಯ ಎಂ ಅವರಿಗೆ ಆರ್‌ವಿ ವಿಶ್ವವಿದ್ಯಾಲಯವು ಉಚಿತ ಪ್ರವೇಶ ನೀಡಿದೆ.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಮನವಿಗೆ ಸ್ಪಂದಿಸಿ ಈ ನಿರ್ಧಾರ ಕೈಗೊಳ್ಳಲಾಗಿದ್ದು,ಅಭಿಜಯ ಅವರು ಆರ್‌ವಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪದವಿಪೂರ್ವ ತರಗತಿಗೆ ಸೇರಿಕೊಂಡಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಎಲ್ಲ ರೀತಿಯ ನೆರವು, ಬೆಂಬಲವನ್ನು ನೀಡುವುದಾಗಿ ಈ ಹಿಂದೆ ಭರವಸೆ ನೀಡಿದ್ದ ಸಂಸದ ತೇಜಸ್ವಿ ಸೂರ್ಯ, ಆರ್‌ವಿ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ (ಆರ್‌ಎಸ್‌ಎಸ್‌ಟಿ) ಗೆ ಅವರ ತ್ವರಿತ ಸ್ಪಂದನೆಗಾಗಿ  ಸಾರ್ವಜನಿಕವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಬೆಳವಣಿಗೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಸೂರ್ಯ ರವರು ಟ್ವೀಟ್ ಮಾಡಿದ್ದು, “ನಾನು ಆಪರೇಷನ್ ಸಿಂದೂರ್‌ ನ ಸರ್ವಪಕ್ಷ ನಿಯೋಗದೊಂದಿಗೆ ಅಮೆರಿಕಕ್ಕೆ ತೆರಳುವ ಮೊದಲು ನಿಮ್ಮೆಲ್ಲರೊಂದಿಗೆ ಈ ವಿಷಯವನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ನನ್ನ ಮನವಿಗೆ ಸ್ಪಂದಿಸಿ, 2025ರ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ದಿವಂಗತ ಮಂಜುನಾಥ ರಾವ್ ಅವರ ಪುತ್ರ ಅಭಿಜಯ ಎಂ ಅವರ ಪದವಿ ಶಿಕ್ಷಣಕ್ಕೆ ಪ್ರಾಯೋಜಕತ್ವ ನೀಡಲು ಆರ್‌ವಿ ಸಂಸ್ಥೆಯು ಮುಂದೆ ಬಂದಿದ್ದು, ಇಂದು ಅಭಿಜಯ  ರವರು ಆರ್‌ವಿ ವಿಶ್ವವಿದ್ಯಾಲಯ – ಸ್ಕೂಲ್ ಆಫ್ ಬ್ಯುಸಿನೆಸ್‌ಗೆ ಪ್ರವೇಶ ಪಡೆದಿದ್ದಾರೆ. ಅವರ ಶೈಕ್ಷಣಿಕ ಪಯಣಕ್ಕೆ ಶುಭ ಹಾರೈಸುತ್ತೇನೆ. ಈ  ಮಹತ್ವದ ರಾಷ್ಟ್ರೀಯ ಕಾರ್ಯಕ್ಕೆ ಬೆಂಬಲ ನೀಡಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ಗೆ (RSST) ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.

ಸಂಕಷ್ಟದ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ಬೆಂಬಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ದೇಶಾದ್ಯಂತದ ಇತರ ಸಂಸ್ಥೆಗಳು ಮತ್ತು ಸಂಘಟನೆಗಳು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರ ಶಿಕ್ಷಣ ಮತ್ತು ಆರೋಗ್ಯಕ್ಕೆ ಬೆಂಬಲ ನೀಡಲು ಮುಂದೆ ಬರಬೇಕೆಂದು ನಾನು ಪ್ರಾಮಾಣಿಕವಾಗಿ ಆಶಿಸುತ್ತೇನೆ.”ಎಂದಿದ್ದಾರೆ.

ಹೆಚ್ಚುವರಿ ಬೆಂಬಲವಾಗಿ, ಸೂರ್ಯ ಅವರ ಮನವಿಯ ಮೇರೆಗೆ, ಸಾರ್ಥಕ ಫೌಂಡೇಶನ್ ಸಹ ದಾಳಿಯಿಂದ ನೊಂದಿರುವ ಕರ್ನಾಟಕದ ಸಂತ್ರಸ್ತರಿಗೆ ಯಾವುದೇ ಹೆಚ್ಚುವರಿ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಭರವಸೆ ನೀಡಿದೆ. ಈ ಹಿಂದೆ, ಸೂರ್ಯ ಅವರು ಆರ್‌ವಿ ಶಿಕ್ಷಣ ಸಂಸ್ಥೆಗಳಿಗೆ ಕರ್ನಾಟಕದಿಂದ ಇಬ್ಬರು ಇತರ ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Related Articles

Comments (0)

Leave a Comment