ರೈತರ ಪರ ಇದೇ 20 ರಂದು ರಾಜಭವನ ಚಲೋ; ಡಿ.ಕೆ. ಶಿವಕುಮಾರ್

ಬೆಂಗಳೂರು:’ರೈತರಿಗೆ ಮಾರಕವಾಗಿರುವ ಕೃಷಿ ಕರಾಳ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ, ವಿದ್ಯುತ್, ಆಸ್ತಿ ತೆರಿಗೆ, ಇಂಧನ ಬೆಲೆ ಏರಿಕೆಯಂತಹ ಸರ್ಕಾರದ ಜನ ವಿರೋಧಿ ನಿರ್ಧಾರ ಖಂಡಿಸಿ ಇದೇ 20 ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ್ ಅವರು ಹೇಳಿದ್ದಿಷ್ಟು;

‘ನಾಡಿನ ಜನರಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಕಳೆದ ವರ್ಷ ಬಂದ ಸಂಕಟ ಈ ವರ್ಷ ಯಾರಿಗೂ ಬಾರದಿರಲಿ. ಈ ವರ್ಷ ರೈತರಿಗೆ ಒಳ್ಳೆಯ ಮಳೆ, ಬೆಳೆ, ಬೆಳೆಗೆ ಉತ್ತಮ ಬೆಲೆ ಸಿಗಲಿ. ರಾಜ್ಯ ಹಾಗೂ ರಾಷ್ಟ್ರ ಸುಭೀಕ್ಷವಾಗಿರಲಿ ಎಂದು ಆಶಿಸುತ್ತೇನೆ.

ಬಿಜೆಪಿ ಸರ್ಕಾರದ ಕೃಷಿ ಕರಾಳ ಕಾಯ್ದೆ ವಿರುದ್ಧ ಇಡೀ ದೇಶದ ರೈತರು ವಿಶ್ವವೇ ಗಮನಿಸುವಂತಹ ದೊಡ್ಡ ಮಟ್ಟದ ಹೋರಾಟ ನಡೆಸುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಕೂಡ ರೈತರ ನೋವು ಅರಿತು ಈ ಕಾಯ್ದೆಗೆ ತಾತ್ಕಾಲಿಕ ತಡೆ ನೀಡಿದೆ.

ಸುಪ್ರೀಂಕೋರ್ಟ್ ರಚಿಸಿರುವ ಸಮಿತಿ ಬಗ್ಗೆ ನಮ್ಮ ಪಕ್ಷ ಈಗಾಗಲೇ ತನ್ನ ಅಭಿಪ್ರಾಯ ತಿಳಿಸಿದೆ.

ತಡೆಯಾಜ್ಞೆ ರೈತರಿಗೆ ಸಮಾಧಾನ ತಂದಿಲ್ಲ. ಹೀಗಾಗಿ ಮುಂದೆಯೂ ಕೂಡ ರೈತರ ಪರವಾಗಿ ಕಾಂಗ್ರೆಸ್ ನಿಲ್ಲಲಿದೆ.

ನಾಳೆ 15 ರಂದು ರಾಷ್ಟ್ರಾದ್ಯಂತ ರೈತರಿಗೆ ಬೆಂಬಲವಾಗಿ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಆಂದೋಲನ ಮಾಡುತ್ತಿದೆ.

ಎಲ್ಲಾ ರಾಜ್ಯಗಳಲ್ಲಿ ರಾಜಭವನ ಮುತ್ತಿಗೆ ನಡೆಯಲಿದೆ. ಆ ಮೂಲಕ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಈ ಕರಾಳ ಕಾಯ್ದೆ ಹಿಂಪಡೆಯಲು ಆಗ್ರಹಿಸಲಾಗುವುದು.

ರಾಜ್ಯದಲ್ಲಿ ದೆಹಲಿ ನಾಯಕರೊಂದಿಗೆ ಚರ್ಚಿಸಿ ರೈತರಿಗೆ ಶಕ್ತಿ ತುಂಬಲು ಇದೇ 20 ರಂದು ಬೃಹತ್ ಚಳುವಳಿ ಹಮ್ಮಿಕೊಂಡಿದ್ದು, ಫ್ರೀಡಂಪಾರ್ಕ್ ನಿಂದ ರಾಜಭವನದವರೆಗೆ ಮೆರವಣಿಗೆ ನಡೆಯಲಿದೆ. ಜತೆಗೆ ರಾಜಭವನ ಮುತ್ತಿಗೆ ಹಾಕುತ್ತೇವೆ. ರಾಜ್ಯದ ಎಲ್ಲಾ ರೈತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದರ ಜತೆಗೆ ಪೆಟ್ರೋಲ್,ಡಿಸೇಲ್ ಬೆಲೆ ಏರಿಕೆ ವಿರುದ್ಧವೂ ಹೋರಾಟ ಮಾಡುತ್ತಿದ್ದೇವೆ.

ಕೊರೋನಾದಿಂದಾಗಿ ರಾಜ್ಯದಲ್ಲಿ ವ್ಯಾಪಾರ ವಹಿವಾಟು ನಿಂತು ಹೋಗಿದ್ದು ಜನ ನರಳಾಡಿದ್ದಾರೆ. ಸರ್ಕಾರ ಯಾರ ಪರವಾಗಿಯೂ ನಿಂತಿಲ್ಲ.

ಈಗ ಚೇತರಿಸಿಕೊಳ್ಳುವ ಹಂತದಲ್ಲಿ ಮೂರು ಭಾರಿ ವಿದ್ಯುತ್ ಬೆಲೆ ಏರಿಕೆ ಮಾಡ್ತಿದ್ದಾರೆ.

ಗ್ಯಾಸ್ ಬೆಲೆಯೂ ಏರಿಕೆಯಾಗಿದೆ. ಪೆಟ್ರೋಲ್,ಡಿಸೇಲ್ ಬೆಲೆ ಹೆಚ್ಚುತ್ತಲೇ ಇದೆ.

ಇದೆಲ್ಲದರ ಬಗ್ಗೆಯೂ 20 ರಂದು ಪ್ರತಿಭಟನೆ ನಡೆಸಲಿದ್ದೇವೆ.

ಪ್ರಾಪರ್ಟಿ ಟ್ಯಾಕ್ಸ್ ಮನ್ನಾಗೆ ನಾವು ಆಗ್ರಹಿಸುತ್ತಿರುವಾಗ, ವಿಶೇಷ ತೆರಿಗೆಯನ್ನು ಸರ್ಕಾರ ವಿಧಿಸಿದೆ. ಖಾಲಿ ಜಾಗ ಇಟ್ಟುಕೊಂಡಿದ್ರೂ ಟ್ಯಾಕ್ಸ್ ಬೀಳಲಿದೆ. ಈ ಮೂಲಕ ಹಣ ವಸೂಲಿಗೆ ಸರ್ಕಾರ ಮುಂದಾಗಿದೆ. ಈ ಎಲ್ಲ ವಿಚಾರವಾಗಿ ನಮ್ಮ ಹೋರಾಟ ನಡೆಯಲಿದೆ.’

ಏಳು ಜನ್ಮ ಎತ್ತಿ ಬಂದರೂ ಕಾಂಗ್ರೆಸ್ ನಿರ್ಮೂಲನೆ ಅಸಾಧ್ಯ:

‘ನಿನ್ನೆ ಮುಖ್ಯಮಂತ್ರಿಗಳು ಕಾಂಗ್ರೆಸ್ ದೇಶಕ್ಕೆ ಮಾರಕ. ದೇಶವನ್ನು ಕಾಂಗ್ರೆಸ್ ಮುಕ್ತ ಮಾಡ್ತೇವೆ ಅಂದಿದ್ದಾರೆ.

ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ.

ನಿಮ್ಮ ಪಾರ್ಟಿಯಲ್ಲಿರುವವರೆಲ್ಲ ಕಾಂಗ್ರೆಸ್ಸಿಗರೇ. ಅವರ ಇತಿಹಾಸ ಕಾಂಗ್ರೆಸ್.

ಏಳು ಜನ್ಮ ಹುಟ್ಟಿಬಂದ್ರೂ ಕಾಂಗ್ರೆಸ್ ಮುಕ್ತಮಾಡಲು ಸಾಧ್ಯವಿಲ್ಲ.

ನೀವು ಅಧಿಕಾರಕ್ಕೆ ಬಂದು ನಿಮಗೆ ಮಾತನಾಡುವ ಶಕ್ತಿ ಬಂದಿದ್ದೇ ಕಾಂಗ್ರೆಸ್ಸಿನಿಂದ. ನಾವು ತಯಾರು ಮಾಡಿದ ನಾಯಕರಿಂದ ಎಂಬುದನ್ನು ನೀವು ಮರೆಯಬೇಡಿ.

ಈ ದೇಶಕ್ಕೆ ಸಂವಿಧಾನ ತಂದಿದ್ದು ಕಾಂಗ್ರೆಸ್ ಪಕ್ಷ. ಈ ದೇಶದ ಬುನಾದಿಯೇ ಕಾಂಗ್ರೆಸ್ ಬುನಾದಿ.

ಕಾಂಗ್ರೆಸ್ ಪಕ್ಷ ನಿರ್ಮೂಲನೆ ಮಾಡುವ ಬಗ್ಗೆ ನಿಮ್ಮ ತಲೆಯಲ್ಲಿರುವ ಭ್ರಮೆಯನ್ನ ತೆಗೆದು ಹಾಕಿ.’

Related Articles

Comments (0)

Leave a Comment