ಜನರ ಸಮಸ್ಯೆಗಳಿಗೆ ಅನುಗುಣವಾಗಿ ಕಾರ್ಯಕ್ರಮ: ಡಿಕೆಶಿ

ಹುಬ್ಬಳ್ಳಿ: ಪ್ರತಿ ಕ್ಷೇತ್ರದಲ್ಲಿ ಜನರ ಸಮಸ್ಯೆಗಳು, ಅವರ ಅಭಿಪ್ರಾಯ ಏನು ಎಂಬುದು ತಿಳಿದು, ನಂತರ ಅದಕ್ಕನುಗುಣವಾಗಿ ಹೋರಾಟ ಹಾಗೂ ಪಕ್ಷ ಸಂಘಟನೆ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿರುವ ಸಮಸ್ಯೆಗಳೇನು? ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಏನೇನು ಸಮಸ್ಯೆಗಳಿವೆ? ಜನರ ಧ್ವನಿ ಹಾಗೂ ಅಭಿಪ್ರಾಯ ಏನು ಎಂಬುದನ್ನು ತಿಳಿಯಲು ಬ್ಲಾಕ್, ಜಿಲ್ಲಾ ಮಟ್ಟದ ಅಧ್ಯಕ್ಷರು ಹಾಗೂ ವಿವಿಧ ಘಟಕಗಳ ಅಧ್ಯಕ್ಷರುಗಳನ್ನು ಕರೆದು ಚರ್ಚೆ ಮಾಡುತ್ತಿದ್ದೇವೆ. ಅವರ ಅಭಿಪ್ರಾಯಗಳನ್ನು ಆಲಿಸಿದ ನಂತರ, ಪ್ರತಿ ಕ್ಷೇತ್ರದಲ್ಲೂ ಪ್ರತ್ಯೇಕ ಹೋರಾಟ ನಡೆಸುತ್ತೇವೆ. ಈ ವರ್ಷವನ್ನು ಹೋರಾಟದ ವರ್ಷ, ಸಂಘಟನೆ ವರ್ಷ ಎಂದು ಘೋಷಿಸಿದ್ದೇವೆ.

ಪ್ರತಿ ಕ್ಷೇತ್ರದಲ್ಲಿಯೂ ಅನೇಕ ಸಮಸ್ಯೆಗಳಿವೆ. ಜತೆಗೆ ಕೊರೋನಾ ಸಂದರ್ಭದಲ್ಲಿ ಆಡಳಿತ ವೈಫಲ್ಯದಿಂದ ಜನ ಸಾಕಷ್ಟು ನೊಂದಿದ್ದಾರೆ. ರೈತರು, ಕಾರ್ಮಿಕರಿಗೆ ಬಹಳ ತೊಂದರೆಯಾಗಿದೆ. ಇದೆಲ್ಲದರ ಬಗ್ಗೆ ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜನರ ರಾಯಭಾರಿಗಳಾಗಿ ನಮಗೆ ಮಾಹಿತಿ ನೀಡಲಿದ್ದಾರೆ.

ಚುನಾವಣೆ ಇರಲಿ, ಇಲ್ಲದಿರಲಿ ನಮ್ಮ ಕಾರ್ಯಕರ್ತರು ನಿರಂತರ ಹೋರಾಟ ಮುಂದುವರೆಸಲಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಕಾಲ ಮೇಲೆ ನಿಂತು ಹೋರಾಟ ಮಾಡಿ  ಚುನಾವಣೆ ಗೆಲ್ಲಲು ಬೇಕಾದ ಕಾರ್ಯಕ್ರಮಗಳನ್ನಷ್ಟೇ ರೂಪಿಸುತ್ತಿದ್ದೇವೆ.

Related Articles

Comments (0)

Leave a Comment