ಹೊಸ ವರ್ಷದಲ್ಲಿ ಶಾಲಾವರಣದಲ್ಲಿ ಮಕ್ಕಳ ಕಲರವ: ಸುರೇಶ್ ಕುಮಾರ್ ಸಂತಸ
- by Suddi Team
- December 31, 2020
- 11 Views

ಬೆಂಗಳೂರು: ರಾಜ್ಯ ಸರ್ಕಾರದ 2021ನೇ ಸಾಲಿನ ದಿನದರ್ಶಿಕೆ ಮತ್ತು ದಿನಚರಿಗಳನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ಬುಧವಾರ ಬಿಡುಗಡೆ ಮಾಡಿದರು.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಡೈರಿ ಮತ್ತು ಕ್ಯಾಲೆಂಡರ್ಗಳನ್ನು ಬಿಡುಗಡೆ ಮಾಡಿದ ಅವರು, ಮೊದಲ ಬಾರಿಗೆ ದಿನದರ್ಶಿಕೆಯನ್ನು ವಿನೂತನವಾದ ವಿನ್ಯಾಸದಲ್ಲಿ ಪ್ರಕಟಿಸಲಾಗಿದ್ದು, ಶಾಲಾ ಮಕ್ಕಳು ಮತ್ತು ಪೋಷಕರಲ್ಲಿ ಹೊಸ ಚೈತನ್ಯ ಮೂಡಿಸುವಂತಹ ಚಿತ್ರಗಳನ್ನು ಮುದ್ರಿಸಲಾಗಿದೆ. ಇಂದಿನ ಸಂದರ್ಭದಲ್ಲಿ ಸಕಾರಾತ್ಮಕವಾದ ಭಾವನೆ ಮೂಡಿಸುವ ಶಾಲೆಗಳು ಮತ್ತು ಶಾಲಾ ಮಕ್ಕಳ ಚಿತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಈ ಬಾರಿ ಡೈರಿ ಮತ್ತು ಕ್ಯಾಲೆಂಡರ್ಗಳನ್ನು ಹೊಸ ವಿನ್ಯಾಸ ಮಾಡಿದ ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಅಧಿಕಾರಿಗಳನ್ನು ಅವರು ಅಭಿನಂದಿಸಿದರು.
ಶಾಲಾರಂಭ ಕುರಿತಂತೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಸುರೇಶ್ ಕುಮಾರ್, ಶಾಲೆಗಳಿಗೆ ಬರಲು ಮಕ್ಕಳು ಉತ್ಸುಕರಾಗಿದ್ದು, ನಾಳೆಯಿಂದ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಇದೇ ಮೊದಲಬಾರಿಗೆ ಶಾಲಾ ಪರಿಸರದಲ್ಲಿ ಮಕ್ಕಳ ಕಲರವ ಕೇಳಿಬರಲಿದೆ ಎಂದರು.
ಶಾಲೆ ಆರಂಭಕ್ಕೆ ನಮ್ಮ ಶಾಲಾ ಕಾಲೇಜುಗಳು ಹೇಗೆ ನಮ್ಮ ಎಸ್ ಒ ಪಿಯನ್ನು ಅನುಸರಿಸುತ್ತಿವೆ ಮತ್ತು ಶಾಲಾರಂಭಕ್ಕೆ ಹೇಗೆ ಸಿದ್ಧತೆ ಕೈಗೊಂಡಿವೆ ಎಂದು ಪರಿಶೀಲಿಸಲು ನಿನ್ನೆ ಮತ್ತು ಇಂದು ಬೆಂಗಳೂರು ನಗರದ ಹಲವಾರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದೆ. ಆಗ ಶಾಲೆಗಳ ಬಳಿ ಕಾರ್ಯನಿಮಿತ್ತ ಬಂದಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳು ಪ್ರಥಮ ಪಿಯು ತರಗತಿಗಳನ್ನೂ ಆರಂಭಿಸಿ ಎಂದು ಒತ್ತಾಯ ಮಾಡಿದರು. ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ವಯ ಮುಂದಿನ ದಿನಗಳಲ್ಲಿ ಉಳಿದ ತರಗತಿಗಳನ್ನು ಆರಂಭಿಸಲು ಚಿಂತನೆ ನಡೆಸಲಾಗುವುದು ಎಂದು ಆ ಮಕ್ಕಳಿಗೆ ಹೇಳಿದ್ದಾಗಿ ತಿಳಿಸಿದರು.
ಇಂದು ಶಾಲಾ ಕಾಲೇಜುಗಳ ಭೇಟಿಗೆ ಹೋಗಿದ್ದಾಗ ಕೋವಿಡ್ ವಿಷಮ ಕಾಲಘಟ್ಟದಲ್ಲಿ ಶಾಲೆಗಳನ್ನು ಪ್ರಾರಂಭಿಸುವುದು ತಮಗೆ ಅಗ್ನಿಪರೀಕ್ಷೆಯಲ್ಲವೇ ಎಂದು ಪತ್ರಕರ್ತ ಮಿತ್ರರೊಬ್ಬರು ನನ್ನನ್ನು ಪ್ರಶ್ನಿಸಿದರು. ನಮ್ಮ ನಾಡಿನ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮುಂದುವರಿಕೆ ಅಂಗವಾಗಿ ಶಾಲಾ ತರಗತಿಗಳನ್ನು ನಡೆಸುವುದು ಶಿಕ್ಷಣ ಇಲಾಖೆಯಲ್ಲಿ ಒಂದು ಸಹಜ ಪ್ರಕ್ರಿಯೆ. ಈ ಹಿಂದಿನ ವರ್ಷಗಳ ಸಹಜ ಪರಿಸ್ಥಿತಿಯಲ್ಲಿ ಸುಗಮವಾಗಿ ತರಗತಿಗಳು ನಡೆದು ವಿದ್ಯಾರ್ಥಿಗಳ ಕಲಿಕೆ ಉತ್ತಮ ರೀತಿಯಲ್ಲಿ ಮುಂದುವರೆಯುತಿತ್ತು. ಆದರೆ ಕೋವಿಡ್-19 ರ ವಿಷಮ ಹಾಗೆಯೇ ಅಸಹಜ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಎಂದಿನಂತೆ ನಡೆಯುವ ಹಾಗೆ ಪ್ರಸ್ತುತ ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ನಾವೆಲ್ಲಾ ಆಶಾಭಾವನೆಯಿಂದ ನೋಡೋಣ ಎಂದು ಸುರೇಶ್ ಕುಮಾರ್ ತಿಳಿಸಿದರು.
ಶಾಲಾ ತರಗತಿಗಳನ್ನು ಪ್ರಾರಂಭಿಸುವುದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಪ್ರತಿಷ್ಠೆಯ ವಿಷಯವಲ್ಲ. ತರಗತಿ ಪ್ರಾರಂಭಿಸುವುದು ಶಿಕ್ಷಣ ಇಲಾಖೆಯ ಬದ್ಧತೆ ಎಂಬುದನ್ನು ನಾವೆಲ್ಲಾ ಅರಿಯಬೇಕಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದೆಲ್ಲೆಡೆ ನಾಳೆ ಅಂದರೆ ಹೊಸ ವರ್ಷದ ಮೊದಲ ದಿನ 01-01-2021ರ ಶುಕ್ರವಾರ 10 ಮತ್ತು 12ನೇ ತರಗತಿಗಳು ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಶಾಲೆಗಳು ಯಾವುದೇ ಅಡಚಣೆಯಿಲ್ಲದೇ, ಅವಘಡವಿಲ್ಲದೇ ನಡೆಯುತ್ತವೆಂಬ ಆಶಾಭಾವನೆ ನನ್ನದಾಗಿದೆ. ತಮ್ಮ ಮಕ್ಕಳು ಶಾಲೆಗೆ ಹೋಗಿ ಸಮರ್ಪಕವಾದ ಶಿಕ್ಷಣ ಪಡೆಯಬೇಕೆಂಬ ಹಂಬಲ ರಾಜ್ಯದ ಅಸಂಖ್ಯಾತ ಪೋಷಕರದ್ದು. ತರಗತಿಗಳಿಗೆ ಬಂದು ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂಬ ಹಂಬಲ ಹೊಂದಿರುವ ವಿದ್ಯಾಸಮೂಹ, ಈ ಕಾರ್ಯವನ್ನು ಯಶಸ್ವಿಗೊಳಿಸಲು ಟೊಂಕ ಕಟ್ಟಿ ನಿಂತಿರುವ ಎಸ್.ಡಿ.ಎಂ.ಸಿ ಮತ್ತು ಸ್ವಯಂ ಸೇವಾ ಸಂಸ್ಥೆಗಳು ದೃಢ ಸಂಕಲ್ಪ ಮಾಡಿವೆ ಎಂದು ಅವರು ವಿವರಿಸಿದರು.
ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುವುದಕ್ಕೆ ಶಿಕ್ಷಣ ಇಲಾಖೆಯ ಈ ಮಹತ್ಕಾರ್ಯದಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೈಜೋಡಿಸುತ್ತಿವೆ. ಹಾಗೆಯೇ ಮಕ್ಕಳ ಸುಲಲಿತ ಶಿಕ್ಷಣ ಮುಂದುವರಿಕೆಗೆ ನನ್ನೆಲ್ಲಾ ಸಂಪುಟ ಸಹೋದ್ಯೋಗಿಗಳು, ರಾಜ್ಯದ ಎಲ್ಲ ಶಾಸಕ ಮಿತ್ರರು, ಚುನಾಯಿತ ಜನಪ್ರತಿನಿಧಿಗಳೆಲ್ಲರೂ ತಂತಮ್ಮ ವ್ಯಾಪ್ತಿಯಲ್ಲಿ ಸಹಾಯ-ಸಹಕಾರದ ಹಸ್ತ ಚಾಚಿದ್ದಾರೆ. ಎಲ್ಲರ ಸಹಾಯ-ಸಹಕಾರದಿಂದ ಶಾಲಾರಂಭದ ಪವಿತ್ರ ಕೈಂಕರ್ಯ ಯಶಸ್ವಿಯಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯ ಉತ್ತಮವಾಗಲಿದೆ ಎಂದು ಅವರು ಹೇಳಿದರು.
ಶಾಲೆ ಆರಂಭಿಸುವುದು ನಮ್ಮ ಸರ್ಕಾರದ ಪ್ರತಿಷ್ಠೆ ಪ್ರಶ್ನೆಯಲ್ಲ, ಅದು ಮಕ್ಕಳ ಹಿತದೃಷ್ಟಿಯಿಂದ ಕೈಗೊಳ್ಳಬಹುದಾದ ಸರ್ಕಾರದ ಬದ್ಧತೆಯಾಗಿದೆ. ನಮ್ಮ ನಾಡಿನ ಮಕ್ಕಳ ಹಿತ ಮತ್ತು ಸುರಕ್ಷತೆ ನಮ್ಮ ಸರ್ಕಾರದ ಕರ್ತವ್ಯವಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.
*ಶಾಲಾವರಣದಲ್ಲಿ ಪರಿಷ್ಕೃತ ವಿದ್ಯಾಗಮ:*
6ರಿಂದ 9ನೇ ತರಗತಿಗಳಿಗೆ ಪರಿಷ್ಕೃತ ರೂಪದಲ್ಲಿ ವಿದ್ಯಾಗಮವನ್ನು ಆರಂಭಿಸಲಾಗುತ್ತಿದ್ದು, ಪ್ರಸ್ತುತ ಚಳಿಗಾಲವಾಗಿರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಾಗಬಾರದೆಂಬ ಹಿನ್ನೆಲೆಯಲ್ಲಿ ಮಾರ್ಗದರ್ಶಿ ಶಿಕ್ಷಕರು ಕನಿಷ್ಠ ಸಂಖ್ಯೆಯ ಮಕ್ಕಳಿಗೆ ಶಾಲಾಪರಿಸರದಲ್ಲಿಯೇ ಬೋಧಿಸುವರು. ವಿದ್ಯಾಗಮವನ್ನು ಶಾಲಾರಂಭ ಭಾವನೆಯಿಂದ ನೋಡದೇ ಕೇವಲ ಮಕ್ಕಳು ಶಾಲೆಗೆ ಕಲಿಕೆ ಮುಂದುವರೆಸಲು ಸರ್ಕಾರದ ತಾತ್ಕಾಲಿಕ ವ್ಯವಸ್ಥೆಯಷ್ಟ ಎಂದು ಗಮನಿಸಬೇಕಿದೆ. ಉಚ್ಚ ನ್ಯಾಯಾಲಯದ ಆಶಯ ಹಾಗೂ ಶಿಕ್ಷಣ ಕಾಯ್ದೆಯನುಸಾರ ಯಾವುದಾದರೂ ಮಾದರಿಯಲ್ಲಿ ಮಕ್ಕಳಿಗೆ ಬೋಧಿಸಬೇಕಾದದ್ದು ಸರ್ಕಾರದ ಕರ್ತವ್ಯವಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ವಿದ್ಯಾಗಮದಲ್ಲಿ ಕೆಲ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಶಿಕ್ಷಕರ ಸಂಖ್ಯೆ ಕಡಿಮೆ ಇದ್ದಲ್ಲಿ ಮಕ್ಕಳನ್ನು ವಿವಿಧ ತಂಡಗಳಲ್ಲಿ ವಿಂಗಡಿಸಿ ಪ್ರತ್ಯೇಕ ಕೊಠಡಿಗಳಲ್ಲಿ ದೈಹಿಕ ಅಂತರದಲ್ಲಿ ಆಸೀನರಾಗಿಸಿ ಮಾರ್ಗದರ್ಶಿ ಶಿಕ್ಷಕರು ಎಲ್ಲತಂಡಗಳಿಗೆ ಪ್ರತ್ಯೇಕವಾಗಿ ಮಾರ್ಗದರ್ಶನ ನೀಡುವರು ಎಂದು ಸಚಿವರು ಹೇಳಿದರು.
ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಮುದ್ರಣ ಇಲಾಖೆ ನಿರ್ದೇಶಕ ಲಕ್ಷ್ಮೀನಾರಾಯಣ, ಜಂಟಿ ನಿರ್ದೇಶಕ ಬೋರಯ್ಯ, ಮತ್ತಿತರರು ಭಾಗವಹಿಸಿದ್ದರು.
Related Articles
Thank you for your comment. It is awaiting moderation.
Comments (0)