ನಾನು ತಪ್ಪು ಮಾಡಿದ್ದರೆ ನೇಣಿಗೆ ಹಾಕಲಿ: ಡಿಕೆ ಶಿವಕುಮಾರ್
- by Suddi Team
- October 5, 2020
- 13 Views

ಬೆಂಗಳೂರು: ನಾನು ಉದ್ಯಮಿ, ಶಿಕ್ಷಣದಾರ, ರಾಜಕಾರಣಿ. ನಾನು ತಪ್ಪು ಮಾಡಿದ್ದರೆ ನನ್ನನ್ನು ನೇಣಿಗೆ ಹಾಕಲಿ. ಅವರು ಯಾವಾಗ ವಿಚಾರಣೆಗೆ ಕರೆಯುತ್ತಾರೋ ಆಗ ಹೋಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸಿಬಿಐ ದಾಳಿ ನಂತರ ಸಂಜೆ ಸದಾಶಿವನಗರದ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್, 2017ರಲ್ಲಿ ಐಟಿ ದಾಳಿ ಆದಾಗ ಅವತ್ತೇ ಬಂಧನ ಆಗುತ್ತೆ ಅಂತಾ ಹೇಳಿದ್ದರು. 2018ರಲ್ಲಿ ಆರ್ಥಿಕ ಅಪರಾಧ ಪ್ರಕರಣ, 2019ರಲ್ಲಿ ಇಡಿ ಪ್ರಕರಣ ನ್ಯಾಯಾಲಯ ನನಗೆ ಜಾಮೀನು ನೀಡಿತು. ಆಗಲೂ ದೇಶದ್ದುದ್ದಗಲಕ್ಕೆ ಸೋನಿಯಾ ಗಾಂಧಿ ಅವರಿಂದ ಎಲ್ಲ ಪಕ್ಷದ ಮುಖಂಡರು, ಅನೇಕ ಸಂಘಟನೆಗಳು ಪ್ರತಿಭಟನೆ ಮಾಡಿ ಬೆಂಬಲ ನೀಡಿದರು. ನನಗೆ ಅನ್ಯಾಯ ಆಗಿದೆ ಎಂದು ಜನ ಅಭಿಮಾನದಿಂದ ಬಂದು ಪ್ರತಿಭಟನೆ ಮಾಡಿದರು ಎಂದರು.
ಪೊಲೀಸರು ಬೆದರಿಕೆ ಹಾಕಿದ್ದರೂ ಶಾಂತಿಯುತ ಪ್ರತಿಭಟನೆ ನಂತರ ಆಯುಕ್ತರು ಹಾಗೂ ಗೃಹಮಂತ್ರಿಗಳು ಶ್ಲಾಘಿಸಿದರು. ಎಲ್ಲ ಧರ್ಮದ ಹಿರಿಯರು ನನಗೆ ನನ್ನ ಕುಟುಂಬಕ್ಕೆ ಶಕ್ತಿ ನೀಡಿದ್ದಾರೆ. ನಾನು ಮರಳಿ ಬಂದಾಗ ಪಕ್ಷ, ಜಾತಿ ಎಲ್ಲ ಮರೆತು ಸ್ವಾಗತ ಕೊಟ್ಟರು. ಜೈಲಿನಿಂದ ಬಂದವನಿಗೆ ಈ ಮೆರವಣಿಗೆ ಬೇಕಾ ಅಂತಾ ಕೇಳಿದ್ದರು. ಅವರು ಒಮ್ಮೆ ಯೋಚಿಸಬೇಕು ಪರಪ್ಪನ ಅಗ್ರಹಾರ ಜೈಲಿನಿಂದ ಬಂದವರು ಹೇಗೆ ಬಂದರು? ನಾನು ಅವರಂತೆ ವಿಕ್ಟರಿ ತೋರಿಸಿ ಬರಲಿಲ್ಲ ಕೈಮುಗಿದು ಬಂದೆ ಎಂದು ವಿವರಣೆ ನೀಡಿದರು
ನಮ್ಮ ರಾಷ್ಟ್ರೀಯ ನಾಯಕರು ನನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷ ಜವಾಬ್ದಾರಿ ಕೊಟ್ಟಿದ್ದಾರೆ. ಕಳೆದ ಏಳು ತಿಂಗಳಲ್ಲಿ ಕೊರೋನಾ ಸಮಸ್ಯೆಯಲ್ಲಿ ಜನ ಸಂಕಷ್ಟಕ್ಕೆ ಸಿಲುಕಿದಾಗ ನಾವು ಅವರಿಗೆ ನೆರವಾಗಿದ್ದೇವೆ. ಬಡವರು, ಕಾರ್ಮಿಕರು, ರೈತರು, ಜನ ಸಾಮಾನ್ಯರ ಜತೆ ಸರ್ಕಾರ ನಿಲ್ಲಲಿಲ್ಲ. ವಿರೋಧ ಪಕ್ಷವಾಗಿ ನಾವು ಅವರ ಪರ ನಿಂತೆವು. ಅವರ ಪರವಾಗಿ ನಾವು ಧ್ವನಿ ಎತ್ತಿದೆ.ನಾನು ಒಂದು ಪಕ್ಷದ ಅಧ್ಯಕ್ಷನಾಗಿ ನನ್ನ ಕರ್ತವ್ಯ ಮಾಡಿದೆ.ರೈತರ ಸಮಸ್ಯೆಗೆ ಸ್ಪಂದಿಸಿ ರೈತರ ಬೆಳೆಯನ್ನು ಅವರ ಹೊಲಕ್ಕೆ ಹೋಗಿ ಖರೀದಿಸಿದೆವು.ಕೊರೋನಾ ವಿಚಾರದಲ್ಲಿ 300, 400 ಪಟ್ಟು ಭ್ರಷ್ಟಾಚಾರ ಮಾಡಲಾಗಿದೆ. ಈ ಬಗ್ಗೆ ಹೋರಾಟ ಮಾಡಿದೆವು. ವಿಧಾನಸೌಧದಲ್ಲಿ ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ. ನಾವು ಜನರ ನೋವಿಗೆ ಸ್ಪಂದಿಸದಿದ್ದರೆ, ಅವರ ಭಾವನೆಗೆ ಬೆಲೆ ಕೊಡದಿದ್ದರೆ ನಮ್ಮ ಕರ್ತವ್ಯ ನಿರ್ವಹಿಸಲು ವಿಫಲವಾದಂತೆ ಆಗುತ್ತದೆ ಎಂದರು.
ಇಂದು ದೇಶದಲ್ಲಿ ಅನೇಕ ಬೆಳವಣಿಗೆ ಆಗುತ್ತಿದೆ. ಹತ್ರಾಸ್ ನಲ್ಲಿ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಯಿತು. ಆಕೆಗೆ ಸರ್ಕಾರ ನ್ಯಾಯ ಒಡಗಿಸಿಕೊಡಲು ಮುಂದಾಗಿದೆಯೇ?
ಚುನಾವಣೆ ಘೋಷಣೆಯಾದ ಮೇಲೆ, ನಾವು ಅನೇಕ ವಿಚಾರವಾಗಿ ಪ್ರತಿಭಟನೆಗೆ ಕರೆ ಕೊಟ್ಟ ಸಮಯದಲ್ಲಿ ನನ್ನ ಮನೆ ಮೇಲೆ ದಾಳಿ ಮಾಡಲಾಗಿದೆ. ಇಷ್ಟು ಆತುರ ಯಾಕೆ?
ಈ ಎಫ್ಐಆರ್, ಪ್ರಕರಣಗಳಿಗೆ ನಾವು ಹೆದರುವುದಿಲ್ಲ.
ಮುಖ್ಯಮಂತ್ರಿಗಳೇ 35 ವರ್ಷಗಳಲ್ಲಿ ನನ್ನ ಮೇಲೆ ಯಾವುದಾದರೂ ತನಿಖೆ ಆಗಿದೆಯಾ? ಕ್ರಿಮಿನಲ್ ಕೇಸ್? ಎಫ್ ಐಆರ್ ಆಗಿದೆಯಾ?ನಾನು ಮಂತ್ರಿಯಾದ ಎಲ್ಲ ಇಲಾಖೆಗಳ ಫೈಲ್ ಜಾಲಾಡಿದ್ದೀರಾ. ಏನಾದರೂ ತಪ್ಪು ಕಾಣಿಸಿದೆಯಾ? ಬೇರೆಯವರ ಬಂಡವಾಳವೂ ನನ್ನ ಬಳಿ ಇದೆ. ಆರ್ ಟಿಐ ಮೂಲಕ ಎಲ್ಲವನ್ನು ಸಂಗ್ರಹಿಸಿದ್ದೇನೆ. ಯಾವಾಗ ಅದನ್ನು ಬಹಿರಂಗ ಮಾಡಬೇಕೋ ಆಗ ಮಾಡುತ್ತೇನೆ ಎಂದರು.
ಬರೀ ಡಿ.ಕೆ ಶಿವಕುಮಾರ್ ಮಾತ್ರನಾ ನಿಮ್ಮ ಕಣ್ಣಿಗೆ ಕಾಣುತ್ತಿರುವುದು? ನಾನು ನಂಬಿರುವ ಶಕ್ತಿ ದೇವರು ಅಜ್ಜಯ್ಯನವರು, ಜನ ನನ್ನ ಜತೆ ಇದ್ದಾರೆ.ನನ್ನ ಮನೆಯಲ್ಲಿ 1.87 ಲಕ್ಷ ಸಿಕ್ಕಿದೆ ಅಂತಾ ಪಂಚನಾಮ ಇದೆ. ಪಕ್ಕದ ಕಚೇರಿಯಲ್ಲಿ 2-3 ಲಕ್ಷ, ದೆಹಲಿಯಲ್ಲಿ 2-3 ಲಕ್ಷ ಸಿಕ್ಕಿದೆ. ಮಾಧ್ಯಮಗಳಲ್ಲಿ ಬಂದಂತೆ ಕೋಟಿಗಟ್ಟಲೆ ಹಣ ಸಿಕ್ಕಿಲ್ಲ. ನಮ್ಮ ಮನೆಯಲ್ಲಿ ಏನು ಸಿಕ್ಕಿದೆಯೋ ಅದನ್ನು ಹೇಳಿದ್ದೇನೆ. ಬೇರೆಯವರ ಮನೆಯಲ್ಲಿ ಏನು ಸಿಕ್ಕಿದೆ ಗೊತ್ತಿಲ್ಲ ಎಂದರು.
Related Articles
Thank you for your comment. It is awaiting moderation.
Comments (0)