ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ- ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರದಾನ

ಬೆಂಗಳೂರು: ನಮ್ಮ ಸಂವಿಧಾನದ ಶ್ರೇಷ್ಠ ಮೌಲ್ಯಗಳಾದ ಸಮಾನತೆ, ಸಹೋದರತ್ವ, ಸಹಬಾಳ್ವೆ, ಸಾಮಾಜಿಕ ನ್ಯಾಯಗಳನ್ನು ಶಿಕ್ಷಕರು ಅಳವಡಿಸಿಕೊಂಡು ವಿದ್ಯಾಗಳಲ್ಲಿಯೂ ಇಂತಹ ಕ್ರಿಯಾಶಕ್ತಿ ಹಾಗೂ ಮೌಲ್ಯಗಳನ್ನು ಬೆಳೆಸಲು ಶ್ರಮಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಕ್ಷಕರಿಗೆ ಕರೆ ನೀಡಿದ್ದಾರೆ.

ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ-2020 ಮತ್ತು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿ ಶಿಕ್ಷಣದ ಜೊತೆಗೆ ಬೆಸೆದುಕೊಂಡಿದೆ. ನಮ್ಮ ಸಮಾಜದಲ್ಲಿ ತಂದೆ ಹಾಗೂ ತಾಯಿಯ ನಂತರದ ಸ್ಥಾನ ಗುರುವಿಗೇ ಮೀಸಲು. ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಅವರು ಮೌಲ್ಯಗಳನ್ನು ಅಳವಡಿಸಿಕೊಂಡು ಮಕ್ಕಳಲ್ಲಿ ಮೂಡಿಸಬೇಕು ಎಂದರು.

ಯಾವುದೇ ಒಂದು ರಾಷ್ಟ್ರದ ಭವ್ಯ ಭವಿಷ್ಯ ನಿರ್ಧಾರವಾಗುವುದು ಶಾಲಾ ಕೊಠಡಿಗಳಲ್ಲಿ ಎಂಬ ಕೊಠಾರಿ ಆಯೋಗದ ವರದಿಯ ವಾಖ್ಯವು ಸಾರ್ವಕಾಲಿಕವಾದದ್ದು. ಒಂದು ರಾಷ್ಟ್ರಕ್ಕೆ ಪ್ರಾಕೃತಿಕ ಸಂಪನ್ಮೂಲದೊಂದಿಗೆ ಮಾನವ ಸಂಪನ್ಮೂಲವು ಮುಖ್ಯವಾಗಿರುತ್ತದೆ. ಇಂತಹ ಸಂಪನ್ಮೂಲವನ್ನು ಅಭಿವೃದ್ದಿಪಡಿಸುವುದು ಶಿಕ್ಷಣ ಇಲಾಖೆ. ಇಂತಹ ಶಿಕ್ಷಣವನ್ನು ನೀಡುವ ಗುರುವಿಗೆ ಸಮಾಜದ ಎಲ್ಲಾ ವರ್ಗಗಳು ಗೌರವ ನೀಡುತ್ತವೆ. ಎಸ್. ರಾಧಾಕೃಷ್ಣನ್ ಒಬ್ಬ ಶ್ರೇಷ್ಠ ದಾರ್ಶನಿಕರಾಗಿ, ಆದರ್ಶನೀಯ ಶಿಕ್ಷಕರಾಗಿ ಸೇವೆ ಸಲ್ಲಿಸುವ ಹಂತದಲ್ಲೇ ರಾಷ್ಟ್ರದ ಎರಡನೆಯ ರಾಷ್ಟ್ರಪತಿಗಳಾಗಿ, ಮೊದಲ ಉಪರಾಷ್ಟ್ರಪತಿಗಳಾಗಿ ಅತ್ಯುನ್ನತ ಹುದ್ದೆಗೇರಿದವರು. ಮತ್ತು ಆ ಮೂಲಕ ಶಿಕ್ಷಕ ಹುದ್ದೆಯ ಸಾಧ್ಯತೆಗಳನ್ನು ಜಗತ್ತಿಗೆ ತೆರೆದಿಟ್ಟವರು. ಅಂದರೆ ‘ಶಿಕ್ಷಕ’ ಸ್ಥಾನಕ್ಕೆ ಇರುವ ಶ್ರೇಷ್ಠತೆಗಿಂತ ಬೇರೊಂದು ಸ್ಥಾನವಿಲ್ಲ ಎಂದು ಅವರು ಹೇಳಿದರು.

ಶಿಕ್ಷಣ ಸಚಿವರ ಶ್ರಮದ ಶ್ಲಾಘನೆ: ಇಂದು ವಿಶ್ವದಾದ್ಯಂತ ತೀವ್ರವಾಗಿ ಹರಡುತ್ತಿರುವ ಕೊರೊನಾ ಸೋಂಕು ಮಾನವಕುಲಕ್ಕೆ ಒಂದು ದೊಡ್ಡ ಸವಾಲನ್ನೇ ಒಡ್ಡಿದೆ. ಕೊರೊನಾ ವಿರುದ್ಧ ನಮ್ಮ ಹೋರಾಟ ಜೀವ (Life) ಹಾಗೂ ಜೀವನಗಳ (Livelihood) ನಡುವಿನ ಸಂರ್ಷಕ್ಕೆ ಕಾರಣವಾಗಿದೆ. ಇದರಿಂದ ಇಡೀ ದೇಶದ ಶಿಕ್ಷಣ ವ್ಯವಸ್ಥೆಯೇ ಸ್ತಬ್ಧವಾಗಿದೆ. ಇದರ ನಡುವೆ 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ದೇಶವೇ ಮೆಚ್ಚುವ ಹಾಗೆ ಯಶಸ್ವಿಯಾಗಿ ನಿರ್ವಹಿಸಿದ್ದು ಒಂದು ಅದ್ಭುತ ಸಾಧನೆ ಆಗಿದೆ. ನಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕೋವಿಡ್ ವಿಷಮ ಕಾಲಘಟ್ಟದಲ್ಲಿ ಈ ಪರೀಕ್ಷೆಯ ಯಶಸ್ಸಿಗಾಗಿ ಇಡೀ ರಾಜ್ಯವನ್ನು ಸುತ್ತಿ ಅಧಿಕಾರಿಗಳನ್ನು ಹುರಿದುಂಬಿಸಿದರು. ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸಿದರು. ಇದರ ಯಶಸ್ಸು ಖಂಡಿತ ಇಡೀ ಶಿಕ್ಷಣ ಇಲಾಖೆಗೆ ಸಲ್ಲುತ್ತದೆ ಎಂದ ಯಡಿಯೂರಪ್ಪ, ಈ ಕಾರ್ಯಕ್ಕಾಗಿ ಸಚಿವ ಸುರೇಶ್ ಕುಮಾರ್ ಮತ್ತು ಸಂಪೂರ್ಣ ಶಿಕ್ಷಣ ಇಲಾಖೆಯನ್ನು ಹೃದಯಪೂರ್ವಕವಾಗಿ ಅಭಿನಂದಿಸಿದರು.

ಸರ್ಕಾರಿ ಶಾಲೆಗಳತ್ತ ಮಕ್ಕಳು: ಶಿಕ್ಷಣ ಇಲಾಖೆಯ ಸುಧಾರಣೆ ಹಿನ್ನೆಲೆಯಲ್ಲಿ ಇತ್ತೀಚಿಗೆ ಮಕ್ಕಳು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳತ್ತ ಮುಖ ಮಾಡಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸುಧಾರಣೆಯ ಧ್ಯೋತಕವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಈ ಕೊರೋನಾ ಸಂದರ್ಭದಲ್ಲಿ ಮಕ್ಕಳು ಶಾಲೆಯಿಂದ ಅನಿವಾರ್ಯವಾಗಿ ದೂರ ಉಳಿದಿದ್ದರಿಂದ ಮಕ್ಕಳ ಕಲಿಕಾ ಪ್ರಕ್ರಿಯೆಯನ್ನು ಮುಂದುವರೆಸಲು ಶಿಕ್ಷಣ ಇಲಾಖೆಯು ವಿದ್ಯಾಗಮ ಎಂಬ ವಿನೂತನ ಕಲಿಕಾ ಕಾರ್ಯಕ್ರಮವನ್ನು ರೂಪಿಸಿ ಅದರಲ್ಲಿ ಮಕ್ಕಳು ಮತ್ತು ಶಿಕ್ಷಕರು ತೊಡಗಿಸಿಕೊಳ್ಳುವಂತೆ ಮಾಡಿರುವುದು ಒಂದು ಉತ್ತಮ ಪ್ರಯತ್ನವಾಗಿದೆ. ಈ ಉಪಕ್ರಮವನ್ನು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಶ್ಲಾಘಿಸಿದೆ ಎಂದು ಅವರು ಹೇಳಿದರು.

ತಮ್ಮ ಕೆಲಸಗಳಿಗಾಗಿ ಶಾಲೆಗಳಿಗೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಶಿಕ್ಷಕರುಗಳಿಗೆ ಅನುಕೂಲವಾಗುವಂತೆ ಆಯವ್ಯಯದಲ್ಲಿ ಘೋಷಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಂತ್ರಜ್ಞಾನಾಧಾರಿತ ಶಿಕ್ಷಕ ಮಿತ್ರ-ಆಪ್ ತಯಾರಿಸಿದೆ. ಶಿಕ್ಷಕರು ಮೊಬೈಲ್ ನಲ್ಲಿ ಈ ಆಪ್ ನ್ನು ಡೌನ್ಲೋಡ್ ಮಾಡಿಕೊಂಡು ತಾವು ಕುಳಿತಲ್ಲೇ ತಮ್ಮ ಸೇವಾ ವಿಷಯಗಳನ್ನು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಶಿಕ್ಷಕರು ತಮ್ಮ ಹೆಚ್ಚಿನ ಸಮಯವನ್ನು ಕಲಿಕಾ ಪ್ರಕಿಯೆಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಶಿಕ್ಷಣಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಪರಿಹಾರಕ್ಕಾಗಿ ಶಿಕ್ಷಣವಾಣಿ ಎಂಬ ಸಹಾಯವಾಣಿಯನ್ನು ಪ್ರಾರಂಭಿಸಿರುವುದು ಇಲಾಖೆಯ ಉತ್ತಮ ನಡೆಯಾಗಿದೆ. ಈ ಎಲ್ಲಾ ಕಾರ್ಯಗಳಿಂದಾಗಿ ಶಿಕ್ಷಣ ಇಲಾಖೆಯು ಶಿಕ್ಷಕ ಸ್ನೇಹಿ, ವಿದ್ಯಾಸ್ನೇಹಿ ಮತ್ತು ಸಮುದಾಯ ಸ್ನೇಹಿ ಆಗುವತ್ತ ಮುನ್ನಡೆದಿರುವುದು ಶಿಕ್ಷಣ ಇಲಾಖೆಯ ಹೊಸ ಮನ್ವಂತರದ ಸೂಚಕವಾಗಿದೆ.

ಸರ್ಕಾರವು ಮಕ್ಕಳಿಗೆ ಪ್ರೋತ್ಸಾಹಕ ಯೋಜನೆಗಳಾದ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ ಹಾಲು, 8ನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್ ಮುಂತಾದವುಗಳನ್ನು ಪೂರೈಸುತ್ತಿದ್ದರೂ ಶಾಲೆಯಲ್ಲಿ ಮಕ್ಕಳು ಉಳಿದು, ಯಶಸ್ವಿಯಾಗಿ ಕಲಿತು ಮುಂದೆ ಸಾಗಲು ಶಿಕ್ಷಕರ ಸತತ ಪ್ರಯತ್ನ ಅವಶ್ಯಕ. ಶಿಕ್ಷಕರ ವಿರುದ್ಧ ಬರುವ ಕಳಂಕದ ಪ್ರಕರಣಗಳನ್ನು ಸವಾಲಾಗಿ ತೆಗೆದುಕೊಂಡು, ಶಾಲಾ ಪರಿಸರವನ್ನು ಮಕ್ಕಳ ಸ್ನೇಹಿಯಾಗಿ ಮಾರ್ಪಡಿಸುವ ಅಗತ್ಯ ಶಿಕ್ಷಕರ ಮುಂದಿದೆ ಎಂದು ಯಡಿಯೂರಪ್ಪ ಹೇಳಿದರು.

ಖಾಸಗಿ ಶಿಕ್ಷಕರಿಗೆ ಸಹಾಯಕ್ಕಾಗಿ ಸರ್ಕಾರದ ಚಿಂತನೆ- ಸುರೇಶ್ ಕುಮಾರ್: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ, ಕಳೆದ ವರ್ಷ ಶಿಕ್ಷಕರ ದಿನಾಚರಣೆಯಲ್ಲಿ ಭರವಸೆ ನೀಡಿದಂತೆ ಶಿಕ್ಷಕ-ವಿದ್ಯಾರ್ಥಿಸ್ನೇಹಿ ಶಿಕ್ಷಕರ ವರ್ಗಾವಣಾ ನೀತಿಯನ್ನು ಜಾರಿಗೆ ತಂದಿದ್ದು, ವರ್ಗಾವಣಾ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.

ಕೊರೋನಾ ಹಿನ್ನೆಲೆಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಬೇಕೆಂಬುದು ಸರ್ಕಾರದ ಚಿಂತನೆಯಾಗಿದ್ದು, ಮೊದಲ ಹಂತದಲ್ಲಿ ಈ ಶಿಕ್ಷಕರಿಗೆ ವೇತನ ದೊರೆಯುವಂತಾಗಲು ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಲು ಆದೇಶ ನೀಡಲಾಗಿದೆ ಎಂದರು. ದಾಖಲಾತಿ ಮೂಲಕ ಸಂಗ್ರಹವಾದ ಹಣವನ್ನು ಶಿಕ್ಷಕರ ವೇತನಕ್ಕೆ ಬಳಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಎರಡನೇ ಹಂತದಲ್ಲಿ ಶಿಕ್ಷಕರಿಗೆ ಸರ್ಕಾರದಿಂದ ಯಾವ ರೀತಿಯ ಸಹಾಯ ನೀಡಬೇಕೆಂದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಎನ್ಇಪಿ ಅನುಷ್ಠಾನ: 34 ವರ್ಷಗಳ ನಂತರ ರೂಪಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ ರಾಷ್ಟ್ರದ ಶಿಕ್ಷಣ ನೀತಿಯಾಗಿದ್ದು, ಅದನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಶಿಕ್ಷಕರು ಮತ್ತು ಅಧಿಕಾರಿ ವರ್ಗ ಅದರ ಯಶಸ್ಸಿಗೆ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಳ್ಳಬೇಕಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಅಂಕಪಟ್ಟಿ ಸುರಕ್ಷತೆ ತಂತ್ರಜ್ಞಾನ: ಬ್ಲಾಕ್ ಚೈನ್ ಟೆಕ್ನಾಲಜಿ ಮೂಲಕ ಎಸ್. ಎಸ್. ಎಲ್. ಸಿ. ಅಂಕಪಟ್ಟಿಗಳ ಮಾಹಿತಿ ಪಡೆಯುವ ಸರ್ಟಿಫಿಕೇಟ್ ಚೈನ್ ತಂತ್ರಾಂಶವನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಿದರು. ಕೊರೋನಾ ಸಂದರ್ಭದಲ್ಲಿ ಬೋಧನೆಗಾಗಿ ರೂಪಿಸಲಾದ ಕಕಲಿಕಾ ಸಂವರ್ಧನಾ ಮಾರ್ಗಸೂಚಿ ಪುಸ್ತಿಕೆಗಳನ್ನು ಸಿಎಂ ಬಿಡುಗಡೆ ಮಾಡಿದರು.
20 ಪ್ರಾಥಮಿಕ ಶಾಲಾ ಶಿಕ್ಷಕರು, 10 ಪ್ರೌಢಶಾಲಾ ಶಿಕ್ಷಕರು, ಓರ್ವ ವಿಶೇಷ ಶಿಕ್ಷಕರು, 10 ಮಂದಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರು, ಪ್ರಾಂಶುಪಾಲರು, ರಾಷ್ಟ್ರಪ್ರಶಸ್ತಿ ಪಡೆದ ರಾಜ್ಯದ ಮೂವರು ಶಿಕ್ಷಕರನ್ನು ಮುಖ್ಯಮಂತ್ರಿಯವರು ಸನ್ಮಾನಿಸಿ ಗೌರವಿಸಿದರು.

ರಾಜ್ಯ ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರರಾದ ಪ್ರೊ. ಎಂ.ಆರ್. ದೊರೆಸ್ವಾಮಿ, ಶಾಸಕರಾದ ವೈ.ಎಸ್. ನಾರಾಯಣಸ್ವಾಮಿ, ಅರುಣಶಹಾಪುರ, ಅ. ದೇವೇಗೌಡ, ಹನುಮಂತ ನಿರಾಣಿ ಮತ್ತಿತರರು ಭಾಗವಹಿಸಿದ್ದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಸ್ವಾಗತಿಸಿದರು. ಸಾ.ಶಿ.ಇ ಆಯುಕ್ತ ಡಾ. ಕೆ.ಜೆ. ಜಗದೀಶ್ ವಂದಿಸಿದರು. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Related Articles

Comments (0)

Leave a Comment