ಮೈಸೂರು ಫ್ಯಾಲ್ಕನ್ ಟೈರ್ಸ್ ಪುನಶ್ಚೇತನ- ಪರಿಶೀಲಿಸಿ ಕ್ರಮ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 

ಬೆಂಗಳೂರು: ಮೈಸೂರಿನ ರೋಗಗ್ರಸ್ತ ಕಾರ್ಖಾನೆ ಫ್ಯಾಲ್ಕನ್ ಟಯರ್ಸ್ ಪುನಶ್ಚೇತನಕ್ಕೆ ಸರ್ಕಾರದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ಗೃಹಕಚೇರಿ ಕೃಷ್ಣಾದಲ್ಲಿ ಇಂದು ಫ್ಯಾಲ್ಕನ್ ಟೈರ್ಸ್ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ  ಮಾತನಾಡಿದ ಅವರು, ಫ್ಯಾಲ್ಕನ್ ಟೈರ್ಸ್ ಕಾರ್ಖಾನೆಯನ್ನು ಈಗ ಪುನರಾರಂಭಿಸಿದಲ್ಲಿ ಕಾರ್ಖಾನೆಯನ್ನು ನಡೆಸಲು ಸುಮಾರು 3700 ತಾಂತ್ರಿಕ ಪರಿಣಿತಿಯನ್ನು ಹೊಂದಿರುವ ಕಾರ್ಮಿಕರು ಮುಂದೆ ಬಂದಿದ್ದು, ಕಾರ್ಖಾನೆಯನ್ನು ಪ್ರಾರಂಭಿಸಲು ಸುಮಾರು 120 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿ ಹಾಗೂ ಕಚೇರಿಯ ಮೂಲಭೂತ ಸೌಕರ್ಯಕ್ಕಾಗಿ 20 ಕೋಟಿ ರೂ.ಗಳ ವೆಚ್ಚದ ಅಗತ್ಯವಿದೆ. ಇದಲ್ಲದೆ 150 ಕೋಟಿ ರೂ.ಗಳ ದುಡಿಯುವ ಬಂಡವಾಳದ ಅಗತ್ಯವಿದೆ. ಕಾರ್ಖಾನೆಗೆ ವ್ಯವಸ್ಥಾಪಕ ಮಂಡಳಿಯನ್ನು ಸ್ಥಾಪಿಸುವ ಬಗ್ಗೆ ಪರಿಶೀಲಿಸಬಹುದಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಫ್ಯಾಲ್ಕನ್ ಟೈರ್ಸ್ ಕಾರ್ಖಾನೆಯನ್ನು ಪುನರಾರಂಭಿಸಲು ಸುಮಾರು 3700 ಕಾರ್ಮಿಕರು ಮುಂದೆ ಬಂದಿರುವುದು ಪ್ರಶಂಸನೀಯ ಎಂದು ಮುಖ್ಯಮಂತ್ರಿಗಳು, ಕಾರ್ಖಾನೆಯ
ಪುನಶ್ಚೇತನಕ್ಕೆ ಎಲ್ಲ ನೆರವು ನೀಡುವುದಾಗಿ ಭರವಸೆಯಿತ್ತರು. ಸಭೆಯಲ್ಲಿ ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಫ್ಯಾಲ್ಕನ್ ಟೈರ್ಸ್ ಕಾರ್ಖಾನೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related Articles

Comments (0)

Leave a Comment