ಭರ್ತಿಯಾದ ಲಿಂಗನಮಕ್ಕಿ‌ ಒಡಲು: ನಾಲ್ಕು ವರ್ಷದ ನಂತರ ನದಿಗೆ ನೀರು

ಶಿವಮೊಗ್ಗ: ನಾಡನ್ನು ಬೆಳಗುವ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದ್ದು‌ ನಾಲ್ಕು ವರ್ಷದ ಬಳಿಕ ಮೊದಲ ಬಾರಿ ಜಲಾಶಯದ ಗೇಟ್ ಗಳನ್ನು ತೆರೆದು ಶರಾವತಿ ನದಿಗೆ ನೀರು ಬಿಡಲಾಗುತ್ತಿದೆ.

1819 ಅಡಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯ ಭರ್ತಿಯಾಗುವ ಸನಿಹದಲ್ಲಿದ್ದು ಜಲಾಶಯಕ್ಕೆ 95 ಸಾವಿರ ಕ್ಯೂಸೆಕ್ ನೀರು ಹರಿ ಬರುಬರುತ್ತಿದೆ.ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬೆಳಗ್ಗೆ 11 ಗಂಟೆಗೆ ಕ್ರೆಸ್ಟ್ ಗೇಟ್ ಗಳನ್ನು ತೆರೆದು 30 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ತೀರ್ಥಹಳ್ಳಿ,ಹೊಸನಗರ ಮತ್ತು ಸಾಗರ ತಾಲ್ಲೂಕಿನಲ್ಲಿ ಮಳೆ ಮುಂದುವರೆದಿದೆ.ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದು ಸಂಜೆ ಮತ್ತು ರಾತ್ರಿ ವೇಳೆಗೆ ನದಿಗೆ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಬಿಡಲಾಗುತ್ತದೆ.

ಜಲಾಶಯ ಭರ್ತಿಯಾಗಿರು ಹಿನ್ನಲೆಯಲ್ಲಿ ಶರಾವತಿ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ವಿದ್ಯುತ್ ನಿಗಮ ಸೂಚನೆ ನೀಡಿದ್ದು, ನದಿ ಪಾತ್ರದಲ್ಲಿ ಇಳಿಯದಂತೆ,ಜಾನುವಾರುಗಳನ್ನು ಬಿಡದಂತೆ ಜನತೆಗೆ ಎಚ್ಚರಿಕೆಯನ್ನು ನೀಡಲಾಗಿದೆ.

ಲಿಂಗನಮಕ್ಕಿ ಜಲಾಶಯ ವಿದ್ಯುತ್ ಉತ್ಪಾದನೆಗೆ ಮೀಸಲಾಗಿರುವ ರಾಜ್ಯದ ಏಕೈಕ ಜಲಾಶಯವಾಗಿದ್ದು ಅತಿ ಕಡಿಮೆ ದರದಲ್ಲಿ ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.ರಾಜ್ಯದ ವಿದ್ಯುತ್ ಬೇಡಿಕೆಯ ಶೇ.23 ರಷ್ಟನ್ನು ಪೂರೈಸುವ ಸಾಮರ್ಥ್ಯ ಹೊಂದಿದ್ದು ಜಲಾಶಯ ಭರ್ತಿಯಾಗಿರುವುದು ಈ ಬಾರಿಯ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಕೊಂಚ ದೂರವಾಗುವಂತೆ ಮಾಡಿದೆ.

Related Articles

Comments (0)

Leave a Comment