ಸದ್ಯದಲ್ಲೇ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವೆ: ಸಿಎಂ

ಬೆಂಗಳೂರು: ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಹತ್ತು ವರ್ಷದ ಹಿಂದೆಯೇ ಘೋಷಿಸಲಾಗಿದೆ. ಈಗ ಅದನ್ನು ಜಾರಿಗೊಳಿಸಲು ಚಿಂತನೆ ನಡೆದಿದೆ. ಸುವರ್ಣಸೌಧದಕ್ಕೆ ಕೆಲವು ಇಲಾಖೆಗಳನ್ನು ವರ್ಗಾವಣೆ ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತ್ ಸಿಇಓಗಳ ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸುವರ್ಣ ಸೌಧದಲ್ಲಿ ವರ್ಷದ 365 ದಿನವೂ ಕೆಲಸ ಮಾಡುವಂತೆ ವ್ಯವಸ್ಥೆ ಮಾಡುತ್ತೇವೆ. ನಾನು ಅಖಂಡ ಕರ್ನಾಟಕದ ಅಭಿವೃದ್ಧಿ ಪರವಾಗಿದ್ದೇನೆ. ಇಷ್ಟರಲ್ಲೇ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಿಸುತ್ತೇನೆ. ಗ್ರಾಮ ವಾಸ್ತವ್ಯ ಮಾಡುವ ಬಗ್ಗೆ ಮುಂದಿನ‌ದಿನಗಳಲ್ಲಿ ನಿರ್ಧರಿಸುತ್ತೇನೆ ಎಂದರು.

ಕೈಗಾರಿಕೆಗಳನ್ನು ಬೆಂಗಳೂರು ನಗರಕ್ಕೆ ಸೀಮಿತ ಮಾಡದೆ ಗುಲ್ಬರ್ಗ, ಬೀದರ್ ನಂತಹಾ ಜಿಲ್ಲೆಗಳಲ್ಲೂ ಕೈಗಾರಿಕಾ ಕ್ಲಸ್ಟರ್ ನಿರ್ಮಾಣಕ್ಕೆ ಭೂಮಿ ಗುರ್ತಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಹಣವನ್ನು ಗುಣಾತ್ಮಕ ವಾಗಿ ಸದ್ಬಳಕೆ ಮಾಡಿಕೊಳ್ಳುವ ಜತೆಯಲ್ಲಿ ಮಾನವೀಯ ನೆಲೆಯಲ್ಲಿ ಸರ್ಕಾರ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ 1112 ವಸತಿ ಶಾಲೆಗಳಿವೆ. ಎರಡು ತಿಂಗಳಲ್ಲಿ ಜಿಲ್ಲಾಧಿಕಾರಿಗಳು ಭೂಮಿ ಗುರ್ತಿಸಿ ಸ್ವಂತ ಕಟ್ಟಡಗಳಲ್ಲಿ ವಿದ್ಯಾರ್ಥಿ ನಿಲಯಗಳು ಕಾರ್ಯನಿರ್ವಹಿಸಬೇಕು. ಪ್ರತಿ ಎರಡು ತಿಂಗಳಿಗೊಮ್ಮೆ ಜಿಲ್ಕಾಧಿಕಾರಿಗಳು ದಿಢೀರ್ ತಪಾಸಣೆ ಮಾಡಬೇಕು. ವಿವಿಧ ಜಾತಿ ಧರ್ಮಗಳ ಹೆಸರಲ್ಲಿ ವಸತಿ ನಿಲಯಗಳನ್ನು ಸೂಚಿಸದೆ, ಸಾರ್ವಜನಿಕ ವಸತಿ ನಿಲಯಗಳನ್ನು ಪ್ರಾರಂಭಿಸಲು ಸೂಚಿಸಲಗಿದೆ ಎಂದು ಹೇಳಿದರು.

ಜನತಾ ದರ್ಶನದಲ್ಲೂ ಅಂಗವಿಕಲರು ಮತ್ತು ಮಹಿಳೆಯರೊಂದಿಗೆ ಮಾನವೀಯತೆಯಿಂದ ಸ್ಪಂದಿಸಬೇಕು. ಸ್ಥಳೀಯ ಮಟ್ಟದಲ್ಲಿ ಸಮಸ್ಯೆ ಪರಿಹರಿಸಬೇಕು. ಜಿಲ್ಲಾಧಿಕಾರಿಗಳ ಅಕೌಂಟ್ ನಲ್ಲಿ ಎರಡು ಮೂರು ಕೋಟಿ ರೂ ಹಣ ಇರುವಂತೆ ನೋಡಿಕೊಂಡು, ವಿಪತ್ತು ನಿರ್ವಹಣೆ ಮಾಡುವಂತೆ ಸೂಚಿಸಿದ್ದೇವೆ ಎಂದರು.

ಸಬ್ ರಿಜಿಸ್ಟ್ರಾರ್ ವರ್ಗಾವಣೆಗೂ ನನಗೂ ಯಾವುದೇ ಸಂಬಂಧವಿಲ್ಲ. ಆಯಾ ಸಚಿವರಿಗೆ ವರ್ಗಾವಣೆ ಜವಾಬ್ದಾರಿ ಕೊಟ್ಟಿದ್ದೇನೆ. ನನ್ನ ಮನೆ ಬಳಿ ಸೂಟ್ ಕೇಸ್ ಹಿಡಿದುಕೊಂಡು ಬರುತ್ತಾರೆ ಎಂದು ಶ್ರೀರಾಮುಲು ಹೇಳಿದ್ದಾರೆ. ಅವರು ನಮ್ಮ ಮನೆ ಬಳಿ ಬಂದು ನೋಡಿದ್ದಾರಾ. ನಾಲಿಗೆ ಮೇಲೆ ಅವರು ಸ್ವಲ್ಪ ಹಿಡಿತ ಇಟ್ಟುಕೊಂಡು ಮಾತನಾಡಬೇಕು ಎಂದು ತರಾಟೆಗೆ ತೆಗೆದುಕೊಂಡರು.

Related Articles

Comments (0)

Leave a Comment